
ಟಿ20 ವಿಶ್ವಕಪ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ 5 ರನ್ಗಳ ಅಂತರದಿಂದ ಸೋಲು ಅನುಭವಿಸಿದೆ. ಭಾರತ ನೀಡಿದ ದೊಡ್ಡ ಮೊತ್ತದ ಗುರಿಯನ್ನು ಆರಂಭದಲ್ಲಿ ಅದ್ಭುತವಾಗಿ ಬೆನ್ನಟ್ಟಲು ಆರಂಭಿಸಿದಾಗ ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯ ಸುಲಭವಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ಕೆಲ ಕಾಲ ಸ್ಥಗಿತವಾಗಿ ಪುನಾರಂಭವಾದ ನಂತರ ಟೀಮ್ ಇಂಡಿಯಾ ಅದ್ಭುತವಾಗಿ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯವನ್ನು ಬಾಂಗ್ಲಾದೇಶ ತಂಡಕ್ಕೆ ಗೆಲ್ಲುವ ಅದ್ಭುತ ಅವಕಾಶವಿದ್ದರೂ ಭಾರತದ ವಿರುದ್ಧ ಗೆಲುವು ಮತ್ತೊಮ್ಮೆ ಕನಸಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಭಾರತದ ವಿರುದ್ಧದ ಬಾಂಗ್ಲಾದೇಶ ತಂಡದ ಈ ಸೋಲಿಗೆ ತಂಡ ಗಾಬರಿಗೆ ಒಳಗಾಗಿದ್ದೇ ಕಾರಣ ಎಂದಿದ್ದಾರೆ. ಮಳೆಯಿಂದಾಗಿ ಪಂದ್ಯ ಪುನಾರಂಭವಾದಾಗ 16 ಓವರ್ಗಳಲ್ಲಿ 151 ರನ್ಗಳ ಗುರಿ ನಿಗದಿಯಾಗಿತ್ತು. ಇದರಿಂದಾಗಿ ಬಾಂಗ್ಲಾದೇಶ ಗಾಬರಿಗೆ ಒಳಗಾಗಿದ್ದೇ ಪಂದ್ಯ ಸೋಲಲು ಕಾರಣವಾಯಿತು ಎಂದಿದ್ದಾರೆ ಸುನಿಲ್ ಗವಾಸ್ಕರ್.
ಆರಂಭದಲ್ಲಿ 20 ಓವರ್ಗಳಲ್ಲಿ 185 ರನ್ಗಳನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಏಳು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ ಭರ್ಜರಿ ಆರಂಭ ಪಡೆದಿತ್ತು. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಬಾಂಗ್ಲಾದೇಶ ತಂಡ ಡಕ್ವರ್ತ್ ಲೂಯಿಸ್ ನಿಯಮದ ರನ್ಗಿಂತ 17 ರನ್ಗಳ ಮುಂದಿತ್ತು. ಲಿಟನ್ ದಾಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 27 ಎಸೆತಗಳಲ್ಲಿ 60 ರನ್ ಗಳಿಸಿ ಟೈಗರ್ಸ್ಗೆ ಭರ್ಜರಿ ಆರಂಭವನ್ನು ನೀಡಿದ್ದರು.
ಆದರೆ ಮಳೆ ನಿಂತು ಪಂದ್ಯ ಆರಂಭವಾದ ಬಳಿಕ ಬಾಂಗ್ಲಾದೇಶ ತಂಡ ತನ್ನ ಲಯವನ್ನು ಕಳೆದುಕೊಂಡಿತು. ಪರಿಣಾಮವಾಗಿ ಪಂದ್ಯವನ್ನು ಐದು ರನ್ಗಳ ಅಂತರದಿಂದ ಕಳೆದುಕೊಂಡದೆ. ಈ ವಿಚಾರವಾಗಿ ಗವಾಸ್ಕರ್ ಮಾತನಾಡಿದ್ದು ಬಾಂಗ್ಲಾದೇಶದ ಬ್ಯಾಟರ್ಗಳು ಎಲ್ಲಾ ಎಸೆತಗಳನ್ನು ಮೈದಾನದ ಆಚೆಗೆ ಅಟ್ಟುವ ಪ್ರಯತ್ನವನ್ನು ನಡೆಸಿದರು. ಅದರ ಬದಲಾಗಿ ಬಾಂಗ್ಲಾ ದಾಂಡಿಗರು ಸ್ಟ್ರೈಕ್ಬದಲಾಯಿಸಿಕೊಂಡು ಅಗತ್ಯವಿರುವ ರನ್ರೇಟನ್ನು ಗಳಿಸುವ ಪ್ರಯತ್ನ ನಡೆಸಬೇಕಾಗಿತ್ತು ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಅವರು ಚಾಣಾಕ್ಷತನದ ಆಟವನ್ನು ಆಡುವ ಬದಲಿಗೆ ಎಲ್ಲಾ ಎಸೆತಗಳನ್ನು ಸಿಕ್ಸರ್ಗೆ ಅಟ್ಟುವ ಪ್ರಯತ್ನ ನಡೆಸಿದರು. ಇದಕ್ಕೆ ಭಾರತೀಯ ಬೌಲಿಂಗ್ ವಿಭಾಗ ಚಾಣಾಕ್ಷತನದಿಂದ ದಾಳಿ ನಡೆಸಿ ಮೇಲುಗೈ ಸಾಧಿಸಿತು. ಇದು ಭಾರತ ತಂಡ ಈ ಪಂದ್ಯಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿತು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್. ಮುಂದುವರಿದು ಮಾತನಾಡಿದ ಗವಾಸ್ಕರ್ ಈ ಪಂದ್ಯವನ್ನು ಭಾರತ ಗೆದ್ದಿತು ಎನ್ನುವುದಕ್ಕಿಂತಲೂ ಬಾಂಗ್ಲಾದೇಶ ಸೋತಿತು ಎಂದು ಹೇಳಲು ನಾನು ಬಯಸುತ್ತೇನೆ ಎಂದಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ರಿಷಬ್ ಪಂತ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ
ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಾಫಿಜುರ್ ರೆಹಮಾನ್, ಹಸನ್ ಮಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಮೆಹಿದಿ, ಎಹಮಿನ್ಬಾ ಹಸನ್, ಮಿಸ್ಸಾ ಮಿಸ್ , ಸೌಮ್ಯ ಸರ್ಕಾರ್