
ಈ ಬಾರಿಯ ವಿಶ್ವಕಪ್ ಟೂರ್ನಿಗೆ ರವೀಂದ್ರ ಜಡೇಜಾ ಅಲಭ್ಯವಾದ ಕಾರಣ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಯುವ ಆಟಗಾರ ಅಕ್ಷರ್ ಪಟೇಲ್ಗೆ ದೊರೆತಿದೆ. ಇತ್ತೀಚೆಗೆ ನಡೆದ ಕೆಲ ಪಂದ್ಯಗಳಲ್ಲಿ ಭಾರತದ ಪರವಾಗಿ ಕಣಕ್ಕಿಳಿದ ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದೀಗ ಈ ಯುವ ಆಲ್ರೌಂಡರ್ ಬಗ್ಗೆ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ನಾಯಕ ರೋಹಿತ್ ಶರ್ಮಾ ಕನಸು ನನಸು ಮಾಡಬೇಕಿದ್ದರೆ ಅಕ್ಷರ್ ಪಟೇಲ್ ಪಾತ್ರ ಮಹತ್ವದ್ದಾಗಿರಲಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
ಕಳೆದ ಏಷ್ಯಾ ಕಪ್ ಟೂರ್ನಿಯ ಮಧ್ಯದಲ್ಲಿ ರವೀಂದ್ರ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಆಟಗಾರ ಅಕ್ಷರ್ ಪಟೇಲ್. ಬಳಿಕ ಸಿಕ್ಕ ಕೆಲ ಅವಕಾಶಗಳನ್ನು ಅಕ್ಷರ್ ಪಟೇಲ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಇದುವೇ ವಿಶ್ವಕಪ್ ತಂಡದಲ್ಲಿ ಅಕ್ಷರ್ ಪಟೇಲ್ ಸ್ಥಾನ ಪಡೆಯಲು ಕಾರಣವಾಯಿತು. ಬೌಲಿಂಗ್ನಲ್ಲಿನ ನಿಖರತೆ ಹಾಗೂ ಬ್ಯಾಟಿಂಗ್ನಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯವಿರುವ ಕಾರಣ ತಂಡಕ್ಕೆ ಹೆಚ್ಚಿನ ಬಲ ದೊರೆಯಲಿದೆ.
ಪಾಕಿಸ್ತಾನದ ವಿರುದ್ಧ ಭಾನುವಾರ ನಡೆಯಲಿರುವ ಸೂಪರ್ 12 ಹಂತದ ಪಂದ್ಯದ ಹಿನ್ನೆಲೆಯಲ್ಲಿ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದರೆ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.
"ನನ್ನ ಪ್ರಕಾರ ಅಕ್ಷರ್ ಪಟೇಲ್ ನಿರ್ಣಾಯಕ ಪಾತ್ರವಹಿಸುವ ಆಟಗಾರನಾಗಲಿದ್ದಾರೆ. ಭಾರತ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ಬಯಸಿದರೆ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಕಣಕ್ಕಿಳಿಯಲಿದ್ದಾರೆ. ಮೂವರು ವೇಗಿಗಳು ಹಾಗೂ ಹಾರ್ದಿಕ್ ಪಾಂಡ್ಯ 6ನೇ ಬೌಲರ್ಆಗಿ ಕಾರ್ಯನಿರ್ವಹಿಸಬಹುದು. ಅಕ್ಷರ್ ಅದ್ಭುತ ಫೀಲ್ಡರ್ ಕೂಡ ಆಗಿದ್ದು ಯಾವುದೇ ಮಾದರಿಯಲ್ಲಾದರೂ ವಿಕೆಟ್ ಕೀಳುವ ಕೌಶಲ್ಯವನ್ನು ಅವರು ಹೊಂದಿದ್ದಾರೆ. ಇನ್ನು ಬ್ಯಾಟರ್ ಆಗಿ ಆತ ವಸ್ಟ್ ಇಂಡೀಸ್ನಲ್ಲಿ ಭಾರತ ತಂಡವನ್ನು ಗೆಲ್ಲಿಸಿರುವುದನ್ನು ಕೂಡ ನಾವು ನೋಡಿದ್ದೇವೆ" ಎಂದಿದ್ದಾರೆ.
ಶಮಿ ರಾಹುಲ್ ಬಗ್ಗೆ ಗವಾಸ್ಕರ್ ಮೆಚ್ಚುಗೆ: ಇನ್ನು ಇದೇ ಸಂದರ್ಭದಲ್ಲಿ ವಾರ್ಮ್ಅಪ್ ಪಂದ್ಯದ ಮೂಲಕ ಭಾರತ ತಂಡಕ್ಕೆ ಮರಳಿದ ಮೊಹಮ್ಮದ್ ಶಮಿ ಬಗ್ಗೆ ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಮೊಹಮ್ಮದ್ ಶಮಿ ಅಭ್ಯಾಸ ಪಂದ್ಯದಲ್ಲಿ ಒಂದೇ ಓವರ್ ಎಸೆಯುವ ಅವಕಾಶ ಪಡೆದುಕೊಂಡಿದ್ದರು ಕೂಡ ಆ ಮಹತ್ವದ ಓವರ್ನಲ್ಲಿ ನಿಖರವಾದ ಯಾರ್ಕರ್ಗಳನ್ನು ಎಸೆದಿರುವುದು ಮಹತ್ವದ್ದಾಗಿದೆ" ಎಂದಿದ್ದಾರೆ. ಇನ್ನು ಕೆಎಲ್ ರಾಹುಲ್ ಫಾರ್ಮ್ಗೆ ಮರಳಿರುವ ಬಗ್ಗೆಯೂ ಗವಾಸ್ಕರ್ ಸಂತಸ ಹಂಚಿಕೊಂಡಿದ್ದಾರೆ.