ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಪಡೆ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಳಿಕ ಹಲವು ಟೀಕೆಗಳು ಕೇಳಿ ಬಂದಿವೆ. ಟೀಮ್ ಇಂಡಿಯಾ ಪ್ರದರ್ಶನದ ಬೆನ್ನಲ್ಲೆ ಕೋಚಿಂಗ್ ಸ್ಟಾಫ್ ಹಾಗೂ ಸಹಾಯಕ ಸಿಬ್ಬಂದಿಗಳ ಕಾರ್ಯದ ಮೇಲೆ ಪ್ರಶ್ನೆಗಳು ಎದ್ದಿವೆ. ಈ ಸಾಲಿಗೆ ದಿಗ್ಗಜ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಸಹ ಸೇರಿದ್ದಾರೆ. ಇವರು ಕೋಚಿಂಗ್ ಸ್ಟಾಫ್ ಕೆಲಸದ ಬಗ್ಗೆ ಪ್ರಶ್ನೆಗಳನ್ನು ಎದ್ದಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿರುವ ದಿಗ್ಗಜ ಬ್ಯಾಟರ್ ಗವಾಸ್ಕರ್, "ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ಹನಿಮೂನ್ ಅವಧಿ ಮುಗಿದಿದೆ. ತವರಿನಲ್ಲಿ ಟೀಮ್ ಇಂಡಿಯಾ ಮಾಡಿದ ತಪ್ಪನ್ನು ಮರೆಯಬಾರದು. ಇದರಿಂದ ಪಾಠ ಕಲಿತು ಮುಂದೆ ಸಾಗಬೇಕು. ಇದೇ ತಿಂಗಳು ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸ ಆರಂಭವಾಗಲಿದೆ. ಈ ವೇಳೆ ಕೋಚ್ ಗೌತಮ್ ಗಂಭೀರ್ ಅಚ್ಚುಕಟ್ಟಾಗಿ ತಮ್ಮ ಕಾರ್ಯವನ್ನು ಮಾಡಬೇಕಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲವುದು ಸುಲಭದ ಮಾತಲ್ಲ ಎಂದಿದ್ದಾರೆ.

ಟೀಮ್ ಇಂಡಿಯಾದ ಹಾಲಿ ಕೋಚ್ ಕಾರ್ಯವಿಧಾನದ ಬಗ್ಗೆ ಸುನಿಲ್ ಗವಾಸ್ಕರ್ ಅವರಿಗೆ ಯಾವುದೇ ಪ್ರಶ್ನೆಗಳು ಇಲ್ಲ. ಹಾಗೂ ಅನುಮಾನವೂ ಇಲ್ಲ. ಆದರೆ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಚೇಟ್ ಅವರ ಪಾತ್ರದ ಬಗ್ಗೆ ಗವಾಸ್ಕರ್ ಅನುಮಾನ ವ್ಯಕ್ತ ಪಡಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಅಭಿಷೇಕ್ ನಾಯರ್ ಏನು ಕೆಲಸ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಬ್ಯಾಟಿಂಗ್ ಕೋಚ್ ಅಥವಾ ಸಹಾಯಕ ಕೋಚ್ ಎನ್ನುವ ಬಗ್ಗೆ ಗೊಂದಲವಿದೆ ಎಂದು ತಿಳಿಸಿದ್ದಾರೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಪರ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರೇ ಮುಂದೆ ಬಂದು ಆಗಿರುವ ತಪ್ಪುಗಳಿಗೆ ಉತ್ತರ ಹುಡುಕಬೇಕು. ಅಭಿಷೇಕ್ ನಾಯರ್ಗಿಂತಲೂ ಗಂಭಿರ್ ಹೆಚ್ಚು ರನ್ ಬಾರಿಸಿದ್ದಾರೆ. ಇದರ ಅನುಭವವನ್ನು ಅವರು ಆಟಗಾರರೊಂದಿಗೆ ಹಂಚಿಕೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ಆಟಗಾರರಿಗೆ ಕೆಲವು ಸಲಹೆಗಳನ್ನು ನೀಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
ಗೌತಮ್ ಗಂಭೀರ್ ಬರೀ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಮಾತ್ರ ನಿಭಾಯಿಸುತ್ತಿಲ್ಲ. ಇವರಿಗೆ ತಂಡವನ್ನು ಆಯ್ಕೆ ಮಾಡುವ ಹಕ್ಕನ್ನು ಸಹ ನೀಡಲಾಗಿದೆ. ಈ ಹಿಂದೆ ಇದ್ದ ಕೋಚ್ಗಳಾದ ರವಿ ಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಅವರಿಗೆ ಈ ಅಧಿಕಾರ ಇರಲಿಲ್ಲ. ಈಗ ಗೌತಮ್ ಗಂಭೀರ್ ದ್ವಿಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ನ್ಯೂಜಿಲೆಂಡ್ ಸರಣಿಯಲ್ಲಿ ರನ್ ಗಳಿಸುವಲ್ಲಿ ವಿಫಲರಾದ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಇವರ ಆಟದ ಬಗ್ಗೆ ಟೀಕೆಗಳು ಎದ್ದಿವೆ.