ನಾಯಕನಾಗಿ ಕೊಹ್ಲಿ ಮುಂದುವರಿಯುವುದನ್ನು ಪ್ರಶ್ನಿಸಿದ ಗವಾಸ್ಕರ್!

ಹೊಸದಿಲ್ಲಿ, ಜುಲೈ 29: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ಸೋಲನುಭವಿಸುವುದರೊಂದಿಗೆ ಟೀಮ್ ಇಂಡಿಯಾದ ನಾಯಕನ ಅವಧಿಯೂ ಅಂತ್ಯಗೊಂಡಿದೆ. ಆದರೂ ಅವರನ್ನು ಯಂತ್ರಿಕವಾಗಿ ನಾಯಕನ ಸ್ಥಾನದಲ್ಲಿ ಕೊಹ್ಲಿ ಅವರನ್ನೇ ಮುಂದುವರಿಯುವಂತೆ ಮಾಡಿರುವುದೇಕೆ ಎಂದು ಭಾರತೀಯ ಕ್ರಿಕೆಟ್ನ ದಂತಕತೆ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ ಅಚ್ಚರಿಯ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿತ್ತು.
"ಕ್ಯಾಪ್ಟನ್ ಯಾರಾಗಬೇಕೆಂದು ಚರ್ಚಿಸಲು ಸಭೆ ಕರೆಯದೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಇದರರ್ಥ ಆಯ್ಕೆ ಸಮಿತಿಯ ಸಮ್ಮತಿಯಿಂದಲೇ ವಿರಾಟ್ ಕೊಹ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ," ಎಂದು ಸುನಿಲ್ ಗವಾಸ್ಕರ್ ಮಿಡ್ ಡೇಯಲ್ಲಿ ಬರೆದಿರುವ ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ.
"ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ ಟೂರ್ನಿವರೆಗೆ ಭಾರತ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ನಾಯಕನ ಆಯ್ಕೆ ವಿಚಾರದಲ್ಲಿ ಆಯ್ಕೆ ಸಮಿತಿ ಸದಸ್ಯರು ಕನಿಷ್ಠಪಕ್ಷ 5 ನಿಮಿಷಗಳ ವರೆಗಾದರೂ ಸಭೆ ನಡೆಸಬೇಕಿತ್ತು," ಎಂದಿದ್ದಾರೆ.
ಕಳೆದ ವಾರ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತದ ಟೆಸ್ಟ್, ಏಕದಿನ ಹಾಗೂ ಟಿ20-ಐ ತಂಡಗಳನ್ನು ಪ್ರಕಟಿಸಿ ಮೂರೂ ಮಾದರಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ಸ್ ನೇಮಿತ ಬಿಸಿಸಿಐನ ಆಡಳಿತ ಸಮಿತಿ(ಸಿಒಎ)ಯು ವಿಶ್ವಕಪ್ನಲ್ಲಿ ಭಾರತ ತಂಡ ನೀಡಿರುವ ಪ್ರದರ್ಶನವನ್ನು ಪರಾಮರ್ಶಿಸುವುದಿಲ್ಲ ಎಂದು ಹೇಳಿತ್ತು.
ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ ಆಯ್ಕೆಯ ತಂಡವನ್ನೇ ಏಕೆ ಕೇಳಿ ಪಡೆಯುತ್ತಿದ್ದಾರೆ ಎಂಬುದನ್ನು ಕೂಡ ಗವಾಸ್ಕರ್ ಪ್ರಶ್ನಿಸಿದ್ದಾರೆ.
"ಟೀಮ್ ಇಂಡಿಯಾದ ಆಯ್ಕೆ ಸಮಿತಿಯು ಕೈಗೊಂಬೆ ಆಗಿಬಿಟ್ಟಿದೆ. ಕೊಹ್ಲಿ ನಾಯಕನಾಗಿ ಮರು ನೇಮಕವಾಗುವುದಕ್ಕೂ ಮೊದಲೇ ತಂಡದ ಆಟಗಾರ ಆಯ್ಕೆ ಸಲುವಾಗಿ ನಡೆದ ಸಭೆಗೆ ಆಹ್ವಾನ ಪಡೆದಿದ್ದರು. ಬಳಿಕ ವಿಶ್ವಕಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈ ಬಿಡಲಾಯಿತು. ಆದರೆ, ವಿಶ್ವಕಪ್ನಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸುವಲ್ಲಿ ವಿಫಲಗೊಂಡ ನಾಯಕ ಮಾತ್ರ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾನೆ," ಎಂದು ಗವಾಸ್ಕರ್ ಟೀಕೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications