ಭಾರೀ ನಿರೀಕ್ಷೆಯೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಟೀಮ್ ಇಂಡಿಯಾ 1-3 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಇದಾದ ನಂತರ ಹೆಡ್ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಸೇರಿದಂತೆ ಇಡೀ ಭಾರತ ತಂಡ ಟೀಕೆಗಳನ್ನು ಎದುರಿಸಬೇಕಾಯಿತು. ಇದೀಗ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಮತ್ತೊಮ್ಮೆ ನಾಯಕ ಮತ್ತು ಕೋಚ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ವಿರುದ್ಧ ಸುನಿಲ್ ಗವಾಸ್ಕರ್ ವ್ಯಂಗ್ಯವಾಡಿದ್ದಾರೆ. ಭಾರತ ತಂಡವು ನಾಯಕ, ಕೋಚ್ ಮತ್ತು ಉಪನಾಯಕರಿಲ್ಲದೆ ಆಡುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಗವಾಸ್ಕರ್ ಟೀಮ್ ಇಂಡಿಯಾದ ನ್ಯೂನತೆಗಳ ಬಗ್ಗೆ ಮಾತನಾಡಿದ್ದಾರೆ.

ಟೀಮ್ ಇಂಡಿಯಾದ ನ್ಯೂನತೆಗಳ ಬಗ್ಗೆ ಅಂಕಣವೊಂದರಲ್ಲಿ ಸುನಿಲ್ ಗವಾಸ್ಕರ್ ಬರೆದಿದ್ದಾರೆ. ಸತತ ಎರಡು ಟೆಸ್ಟ್ ಸರಣಿ ಸೋಲುಗಳ ನಂತರ, ಭಾರತ ತಂಡದಲ್ಲಿ ಉಳಿದ ಅಂತಾರಾಷ್ಟ್ರೀಯ ಋತುವಿನ ಬಗ್ಗೆ ಮಸುಕಾದ ಭಾವನೆ ಇದೆ. ಹೊಸ ಸರಣಿಯ ನಿರೀಕ್ಷೆಯಲ್ಲಿ ಸಾಮಾನ್ಯವಾಗಿ ಇರುವ ಸಂಭ್ರಮ ಕಾಣುತ್ತಿಲ್ಲ. ಮೈದಾನದಲ್ಲಿನ ನಿರಾಸಕ್ತಿ ಅಭಿಮಾನಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದಲ್ಲಿ ತಕ್ಷಣದ ಭವಿಷ್ಯವನ್ನು ನೋಡಬೇಕೆ? ಅಥವಾ ಭಾರತೀಯ ಕ್ರಿಕೆಟ್ ಅನ್ನು ಮತ್ತೆ ಮುಂದಕ್ಕೆ ಕೊಂಡೊಯ್ಯುವುದು ಹೇಗೆ? ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ಮುಂದೆ ಕಾದು ನೋಡಬೇಕಾಗಿದೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಮುಂದಿನ ಕೆಲವು ತಿಂಗಳುಗಳು ಸೀಮಿತ ಓವರ್ಗಳ ಕ್ರಿಕೆಟ್ ಮತ್ತು ಐಪಿಎಲ್ ಸುತ್ತ ಸುತ್ತಲಿವೆ. ಬಿಳಿ ಚೆಂಡಿನ ಪ್ರದರ್ಶನದಿಂದಾಗಿ ನಾವು ಟೆಸ್ಟ್ ಕ್ರಿಕೆಟ್ನ ನ್ಯೂನತೆಗಳನ್ನು ನಿರ್ಲಕ್ಷಿಸಬಾರದು. ಇವುಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಹೊಸ ಆವೃತ್ತಿಯೂ ಜೂನ್ ಮಧ್ಯಭಾಗದಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ಗಳ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ನ್ಯೂನತೆಗಳನ್ನು ನಿರ್ಲಕ್ಷಿಸಬಾರದು ಎಂದು ಗವಾಸ್ಕರ್ ಬರೆದಿದ್ದಾರೆ.
ಟೀಮ್ ಇಂಡಿಯಾ ನಾಯಕ ಮತ್ತು ಕೋಚ್ ಅನ್ನು ಗುರಿಯಾಗಿಸಿಕೊಂಡ ಗವಾಸ್ಕರ್, 'ಆಸ್ಟ್ರೇಲಿಯಾದಲ್ಲಿ ಮಾಡಿದ ತಪ್ಪುಗಳು ಮರುಕಳಿಸಬಾರದು. ಇಂಗ್ಲೆಂಡ್ಗೆ ಭಾರತ ತಂಡವು ಒಂದೇ ಗುಂಪಿನಲ್ಲಿ ಬರಬೇಕು. ಆಸ್ಟ್ರೇಲಿಯಾದಲ್ಲಿ ಮಾಡಿದಂತೆ ನಾಲ್ಕು ಬ್ಯಾಚ್ಗಳಲ್ಲಿ ಅಲ್ಲ. ಆಸ್ಟ್ರೇಲಿಯಾದಲ್ಲಿ ಮೊದಲ ಎರಡು ದಿನಗಳ ಕಾಲ ತಂಡವು ನಾಯಕ, ಉಪನಾಯಕ ಮತ್ತು ಕೋಚ್ ಇಲ್ಲದೆ ಪರದಾಡಿತು. ಇದು ತವರಿನ ತಂಡಕ್ಕೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತದೆ? ಎಂದು ರೋಹಿತ್-ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ.
ರೋಹಿತ್ ಶರ್ಮಾ ಎರಡನೇ ಮಗುವಿನ ಜನನದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನ ಆಡಿರಲಿಲ್ಲ. ಈ ವೇಳೆ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದರು. ಇದಾದ ಬಳಿಕ ಸರಣಿ ಮಧ್ಯೆದಲ್ಲಿ ಕೋಚ್ ಗಂಭೀರ್ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂತಿರುಗಿದ್ದರು. ಇದು ತಂಡದ ಮೇಲೂ ಪರಿಣಾಮ ಬೀರಿತ್ತು.