
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಾಮೆಂಟೇಟರ್ ಈಗಲೂ ಸಕ್ರಿಯ ವ್ಯಕ್ತಿ. ವಿಶ್ವ ಕ್ರಿಕೆಟ್ನ ಆಗು ಹೋಗುಗಳಿಗೆ ಪ್ರತಿಕ್ರಿಯಿಸುತ್ತಾ ತಮ್ಮ ವಿಶ್ಲೇಷಣೆಗಳ ಮೂಲಕ ಗವಾಸ್ಕರ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ಅವರು ಭಾರತ ಕ್ರಿಕೆಟ್ ತಂಡದ ಮುಂದೆ ಎರಡು ದೊಡ್ಡ ಬೇಡಿಕೆಯನ್ನಿಟ್ಟಿದ್ದಾರೆ. ಈ ಬೇಡಿಕೆ ಈಡೇರುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಈ ವರ್ಷ ಪುರುಷರ ಕ್ರಿಕೆಟ್ನಲ್ಲಿ ಎರಡು ಬಹು ದೊಡ್ಡ ಐಸಿಸಿ ಟೂರ್ನಿಗಳು ನಡೆಯಲಿದ್ದು ಒಂದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಹಾಗೂ ಏಕದಿನ ವಿಶ್ವಕಪ್ ಇದೇ ವರ್ಷ ನಡೆಯಲಿದೆ. ಈ ಎರಡು ಐಸಿಸಿ ಟೂರ್ನಿಯಲ್ಲಿ ಕೂಡ ಭಾರತ ಪುರುಷರ ತಂಡ ಚಾಂಪಿಯನ್ ಆಗುವುದನ್ನು ನಾನು ಬಯಸುತ್ತಿದ್ದೇನೆ ಎಂದು ಸುನಿಲ್ ಗವಾಸ್ಕರ್ ತಮ್ಮ ಬೇಡಿಕೆಯನ್ನಿಟ್ಟಿದ್ದಾರೆ.
2013ರ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿಲ್ಲ. ಅಲ್ಲದೆ ಈ ಹಿಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಹಂತಕ್ಕೇರಿದ್ದ ಭಾರತ ನ್ಯಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಇದೀಗ ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಹಂತಕ್ಕೇರುವ ಸನಿಹದಲ್ಲಿದ್ದು ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಸ್ಟಾರ್ಸ್ಪೋರ್ಟ್ಸ್ ಜೊತೆಗೆ ಮಾತನಾಡಿರುವ ಸುನಿಲ್ ಗವಾಸ್ಕರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಾನು ಭಾರತ ಎರಡು ಐಸಿಸಿ ಟ್ರೋಫಿಯನ್ನು ಗೆಲ್ಲುವುದನ್ನು ನೊಡಲು ಬಯಸುತ್ತಿದ್ದೇನೆ ಎಂದಿದ್ದಾರೆ ಗವಾಸ್ಕರ್. ಇದರ ಜೊತೆಗೆ ಏಷ್ಯಾ ಕಪ್ ಟ್ರೋಪಿ ಮತ್ತೊಮ್ಮೆ ಭಾರತಕ್ಕೆ ವಾಪಾಸಾಗಬೇಕು ಎಂದು ಕೂಡ ಹೇಳಿದ್ದಾರೆ ಸುನಿಲ್ ಗವಾಸ್ಕರ್.
"ಚಾಂಪಿಯನ್ನರು ಗೌರವ ಪಡೆಯುವದನ್ನು ನೋಡಿದಾಗ ನಿಮಗೂ ಕೂಡ ಚಾಂಪಿಯನ್ ಆಗಬೇಕು ಎಂಬ ಬಯಕೆ ಮೂಡುತ್ತದೆ. ನಿಮ್ಮ ಆಟಗಾರರು ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದ್ದಾಗ ಈ ಬಯಕೆಗೆ ಮತ್ತಷ್ಟು ಪುಷ್ಟಿ ದೊರೆಯುತ್ತದೆ. ಹಾಗಾಗಿ ಮುಂದೆ ಬರುವ ಎರಡು ಐಸಿಸಿ ಟೂರ್ನಿಗಳಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ ಗೆಲ್ಲುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಮಡಗಳ ನಡುವಿನ ಸೆಮಿಫೈನಲ್ ಕದನದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಹಳ ದೊಡ್ಡ ಅಡ್ಡಿಯಾಗಿದೆ ಎಂದಿರುವ ಗವಾಸ್ಕರ್ ಆಸ್ಟ್ರೇಲಿಯಾ ವಿರುದ್ಧ ಗೆದ್ದು ವಿಶ್ವಕಪ್ ಟ್ರೋಫಿಯನ್ನು ಕೂಡ ಗೆದ್ದುಕೊಂಡರೆ ಅದು ಬಹಳ ದೊಡ್ಡ ಬಲ ನೀಡುದಂತಾಗುತ್ತದೆ ಎಂದಿದ್ದಾರೆ.
"ಇತ್ತೀಚಿನ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ ಭಾರತ ತಂಡಕ್ಕೆ ದೊಡ್ಡ ಅಡ್ಡಿಯಾಗಿದೆ. 2018-19ರಲ್ಲಿ ಭಾರತದ ಪುರುಷರ ತಂಡ ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸಿದಂತೆಯೇ ಒಂದು ದೊಡ್ಡ ಗೆಲುವಿ ಅಗತ್ಯವಿದೆ. ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಲು ಸಾಧ್ಯವಾದರೆ ಬಹುತೇಕ ವಿಶ್ವಕಪ್ ಗೆದ್ದುಕೊಂಡತೆಯೇ ಲೆಕ್ಕ. ಅದು ಬಹಳ ದೊಡ್ಡ ಬಲ ನೀಡಲಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ.