ಟೀಮ್ ಇಂಡಿಯಾಗೆ ವೇಗದ ಆರಂಭ ನೀಡುವ ಪ್ರಯತ್ನದಲ್ಲಿ ನಾಯಕ ರೋಹಿತ್ ಶರ್ಮಾ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರು ಪ್ರಸ್ತುತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದೇ ಒಂದು ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಆದರೂ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ.
ಮಾರ್ಚ್ 9 ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಬಿಗ್ ಇನ್ನಿಂಗ್ಸ್ ಆಡಲು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಟೀಮ್ ಇಂಡಿಯಾಗೆ ವೇಗದ ಆರಂಭ ನೀಡುವ ಬದಲು ದೀರ್ಘಕಾಲ ಬ್ಯಾಟಿಂಗ್ ಮಾಡುವಂತೆ ರೋಹಿತ್ ಶರ್ಮಾಗೆ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆ ಕೊಟ್ಟಿದ್ದಾರೆ. ರೋಹಿತ್ ಶರ್ಮಾ ದೀರ್ಘಕಾಲ ಬ್ಯಾಟಿಂಗ್ ಮಾಡಿದರೆ, ಅವರು ಖಂಡಿತವಾಗಿಯೂ ಟೀಮ್ ಇಂಡಿಯಾವನ್ನು ದೊಡ್ಡ ಸ್ಕೋರ್ಗೆ ಕೊಂಡೊಯ್ಯಬಹುದು ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದ ನಂತರ, ರೋಹಿತ್ ಶರ್ಮಾ ಅವರನ್ನು ಹೆಡ್ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದರು. ಸ್ಟಾರ್ ಬ್ಯಾಟರ್ ಅನ್ನು ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ ನಿರ್ಣಯಿಸಬೇಕು. ಅವರ ದಾಖಲೆಗಳಿಂದ ಅಲ್ಲ ಎಂದು ಹೇಳಿದ್ದರು.
ಗೌತಮ್ ಗಂಭೀರ್ ಅವರ ಈ ಹೇಳಿಕೆಗೆ ಸುನಿಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಅವರಂತಹ ಬ್ಯಾಟರ್ 25-30 ಓವರ್ಗಳ ಕಾಲ ಕ್ರೀಸ್ನಲ್ಲಿ ಉಳಿದರೆ, ಅವರು ಎದುರಾಳಿ ತಂಡದಿಂದ ಪಂದ್ಯವನ್ನು ದೂರ ತೆಗೆದುಕೊಂಡು ಹೋಗುತ್ತಾರೆ. ಇದನ್ನು ಅವರ ಆಟದ ಯೋಜನೆಯಲ್ಲಿ ಸೇರಿಸಬೇಕು ಎಂದು ರೋಹಿತ್ ಶರ್ಮಾ ಅವರಿಗೆ ಸುನಿಲ್ ಗವಾಸ್ಕರ್ ಕಿವಿ ಮಾತು ಹೇಳಿದ್ದಾರೆ.
ರೋಹಿತ್ ಶರ್ಮಾ ಕಳೆದ ಎರಡು ವರ್ಷಗಳಿಂದ ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದು ಭಾರತದಲ್ಲಿ ನಡೆದ 2023 ರ ವಿಶ್ವಕಪ್ ಸಮಯದಲ್ಲಿ ಪ್ರಾರಂಭವಾಯಿತು. ಅವರು ಅದೇ ಸೂತ್ರಕ್ಕೆ ಬದ್ಧರಾಗಿದ್ದಾರೆ. ರೋಹಿತ್ ಶರ್ಮಾ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಕಂಡಿದ್ದಾರೆ. ಆದರೆ ಬಹುಶಃ ಅವರ ಪ್ರತಿಭೆಗೆ ಅರ್ಹವಾದಷ್ಟು ಯಶಸ್ಸು ಸಿಗುತ್ತಿಲ್ಲ. ಅವರು ಪ್ರತಿಭಾನ್ವಿತ ಆಟಗಾರ, ಕ್ರಿಕೆಟ್ನಲ್ಲಿ ಬಹಳ ಕಡಿಮೆ ಜನರು ಹೊಂದಿರುವ ಹೊಡೆತಗಳನ್ನು ಹೊಂದಿದ್ದಾರೆ. ಅದರಿಂದ ಅವರು ವೇಗದ ಆರಂಭ ನೀಡುವ ಬದಲು ದೀರ್ಘಕಾಲ ಬ್ಯಾಟಿಂಗ್ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.