ಮೇ 24 ಶುಕ್ರವಾರ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಬಹು ನಿರೀಕ್ಷಿತ 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೇಮಕ ಮಾಡಿದೆ.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಮತ್ತು ಅತ್ಯಂತ ವೇಗದ ವ್ಯಕ್ತಿ ಉಸೇನ್ ಬೋಲ್ಟ್ ಅವರೊಂದಿಗೆ ಅಫ್ರಿದಿ ಕೂಡ ಟಿ20 ವಿಶ್ವಕಪ್ನ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದೀಗ ಪಾಕ್ ಮಾಜಿ ನಾಯಕ ರಾಯಭಾರಿಯಾಗುತ್ತಿದ್ದಂತೆಯೇ ಹೊಸ ವಿವಾದ ಹುಟ್ಟಿಕೊಂಡಿದೆ. ಈ ವಿವಾದದಲ್ಲಿ ಟೀಮ್ ಇಂಡಿಯಾದ ಮಾಜಿ ಎಡಗೈ ಬ್ಯಾಟರ್ ಸುರೇಶ್ ರೈನಾ ಮತ್ತು ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ಸಿದ್ದಿಕಿ ಹೆಸರು ತಗುಲಿ ಹಾಕಿಕೊಂಡಿದೆ.
2024 ಟಿ20 ವಿಶ್ವಕಪ್ನ ರಾಯಭಾರಿಯಾಗಿ ಅಫ್ರಿದಿ ಅವರನ್ನು ಮಾಡಿದ ಕೂಡಲೇ ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ಸಿದ್ದಿಕಿ ಟ್ವೀಟ್ ಮಾಡುವ ಮೂಲಕ ಸುರೇಶ್ ರೈನಾ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.
ಈ ಪೋಸ್ಟ್ನಲ್ಲಿ, ಸುರೇಶ್ ರೈನಾ ಅವರನ್ನು ಉದ್ದೇಶಿಸಿ, 'ಐಸಿಸಿ 2024ರ ಟಿ20 ವಿಶ್ವಕಪ್ 2024ರ ರಾಯಭಾರಿಯಾಗಿ ಶಾಹಿದ್ ಆಫ್ರಿದಿ ಅವರನ್ನು ಹೆಸರಿಸಿದೆ, ಹಲೋ ಸುರೇಶ್ ರೈನಾ' ಎಂದು ಬರೆದಿದ್ದಾರೆ.
ಈ ಮೂಲಕ ಸುರೇಶ್ ರೈನಾ ಅವರನ್ನು ಕೆಣಕಿದ್ದಾರೆ. ಆದರೆ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸುರೇಶ್ ರೈನಾ ಕೂಡ ಪೋಸ್ಟ್ ಮಾಡಿ ತೀರುಗೇಟು ನೀಡಿದ್ದಾರೆ.
ನಾನು ಐಸಿಸಿ ರಾಯಭಾರಿ ಅಲ್ಲ, ಆದರೆ 2011ರ ವಿಶ್ವಕಪ್ ನನ್ನ ಮನೆಯಲ್ಲಿದೆ. ನಿಮಗೆ ಮೊಹಾಲಿ ಪಂದ್ಯ ನೆನಪಿದೆಯೇ? ಇದು ನಿಮಗೆ ಕೆಲವು ಮರೆಯಲಾಗದ ನೆನಪುಗಳನ್ನು ತರುತ್ತದೆ ಎಂದು ಭಾವಿಸುತ್ತೇವೆ ಎಂದು ಪಾಕಿಸ್ತಾನಿ ಪತ್ರಕರ್ತನಿಗೆ ಸರಿಯಾಗಿ ರೈನಾ ರುಬ್ಬಿದ್ದಾರೆ. ಬಳಿಕ ಪತ್ರಕರ್ತನ ವಿರುದ್ಧ ಭಾರತೀಯ ಅಭಿಮಾನಿಗಳು ವಾಗ್ದಾಳಿ ನಡೆಸಿದ್ದಾರೆ.
ಟಿ20 ವಿಶ್ವಕಪ್ 2024 ಜೂನ್ 2 ರಿಂದ ಪ್ರಾರಂಭವಾಗಲಿದ್ದು, ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.
2022ರ ಟಿ20 ವಿಶ್ವಕಪ್ನಲ್ಲೂ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನವನ್ನು ಸೋಲಿಸಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶ ಸಿಕ್ಕಿದೆ.