ನವದೆಹಲಿ, ಆಗಸ್ಟ್ 16: ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಿರುವ ಹೊತ್ತಿನಲ್ಲಿ ರಸ್ತೆಯಲ್ಲಿ ನಿಂತು ಪೊಲೀಸರ ಆಕ್ಷೇಪದ ಹೊರತಾಗಿಯೂ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆಯೊಬ್ಬಳನ್ನು ಸುರೇಶ್ ರೈನಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀನಗರದ ಪ್ರತ್ಯೇಕತಾವಾದಿಗಳ ಎಚ್ಚರಿಕೆಯ ನಡುವೆಯೂ ಬೀದಿಗಿಳಿದ ಈ ಮಹಿಳೆ ಶ್ರೀನಗರದ ಲಾಲ್ ಚೌಕ್ ಬಳಿ, ಧೈರ್ಯದಿಂದ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಹಾಗಾಗಿ, ರೈನಾ ಅವರು ಈ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ದೇಶದ ಎಲ್ಲೆಡೆ ಮಂಗಳವಾರ (ಆಗಸ್ಟ್ 15) ಸ್ವಾತಂತ್ರ್ಯೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದ್ದರೆ, ಅತ್ತ ಕಾಶ್ಮೀರದಲ್ಲಿ ಬಿಗುವಿನ ವಾತಾವರಣವಿತ್ತು. ರಾಜಧಾನಿಯಾದ ಶ್ರೀನಗರದ ಬಾಂಕಿ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತಾದರೂ ಗಣ್ಯ ವ್ಯಕ್ತಿಗಳಿಗೆ ಹಾಗೂ ಕೆಲವೇ ಕೆಲವು ನಾಗರಿಕರು ಮಾತ್ರ ಆಗಮಿಸಿದ್ದರು.
ಇದಕ್ಕೆ ಕಾರಣ, ಕಾಶ್ಮೀರದ ಪ್ರತ್ಯೇಕತವಾದಿಗಳು ಭಾರತದ ಸ್ವಾತಂತ್ರ್ಯೋತ್ಸವವನ್ನು ಬಹಿಷ್ಕರಿಸಿದ್ದು. ಹಾಗಾಗಿ, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆಗಳು ಬಿಕೋ ಎನ್ನುವಂತಿದ್ದವು.
ಕಾಶ್ಮೀರದ ಪ್ರತ್ಯೇಕತಾವಾದಿಗಳ ಗುಟುರಿಗೆ ಸೊಪ್ಪು ಹಾಕದ ಕಾಶ್ಮೀರಿ ಪಂಡಿತರ ಮಹಿಳೆಯೊಬ್ಬರು ರಸ್ತೆಗಿಳಿದು ಒಂದೇ ಸಮನೆ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಲಾರಂಭಿಸಿದರು. ಪೊಲೀಸರೂ ತಬ್ಬಿಬ್ಬಾದರು. ಪೊಲೀಸರು ಬೇಡವೆಂದು ಮನವಿ ಮಾಡಿದರೂ, ಆ ಮಹಿಳೆ ಮಾತ್ರ ತಮ್ಮ ಘೋಷಣೆಯನ್ನು ಮುಂದುವರಿಸಿದ್ದರು.
ಇದರ ವಿಡಿಯೋವೊಂದನ್ನು ಬ್ಯಾಟ್ಸ್ ಮನ್ ಎಂಬ ವ್ಯಕ್ತಿಯು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದೆ. ಸುರೇಶ್ ರೈನಾಗೂ ಇದು ಮೆಚ್ಚುಗೆಯಾಗಿದೆ.