ಬೆಂಗಳೂರು, ಅ.15: ಅಂತೂ ಕರ್ನಾಟಕದ ಇಬ್ಬರು ಪ್ರತಿಭಾವಂತ ಆಟಗಾರರ ಕನಸು ನನಸಾಗಿದೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ದಿನಗಳ ಪಂದ್ಯಕ್ಕೆ ಬಿಸಿಸಿಐ ಅಧ್ಯಕ್ಷೀಯ XI ತಂಡ ಪ್ರಕಟಿಸಲಾಗಿದ್ದು ಕನ್ನಡಿಗ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 25 ರಿಂದ 27ರ ತನಕ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ದಿನಗಳ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಬೋರ್ಡ್ ಪ್ರೆಸಿಡೆಂಟ್ XI ತಂಡಕ್ಕೆ ಸುರೇಶ್ ರೈನಾ ನಾಯಕರಾಗಿದ್ದು, ಟೆಸ್ಟ್ ತಂಡ ಸೇರುವ ಅವರ ಕನಸು ಮತ್ತೆ ಚಿಗುರೊಡೆದಿದೆ. ಜೊತೆಗೆ ಈಗ ಟೀಂ ಇಂಡಿಯಾದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಅವರು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಸಂದೀಪ್ ಪಾಟೀಲ್ ನೇತೃತ್ವ ಆಯ್ಕೆ ಸಮಿತಿ ಇತ್ತ್ತೀಚಿನ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸುರೇಶ್ ರೈನಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ. 27 ವರ್ಷ ವಯಸ್ಸಿನ ರೈನಾ ಅವರು ಸೆಪ್ಟೆಂಬರ್ 2012ರ ನಂತರ ಟೆಸ್ಟ್ ಪಂದ್ಯವನ್ನಾಡಿಲ್ಲ. ಭಾರತದ ಪರ 17 ಟೆಸ್ಟ್ ಪಂದ್ಯವಾಡಿ 768 ರನ್ ಗಳಿಸಿರುವ ರೈನಾ 1 ಶತಕ, 7 ಅರ್ಧಶತಕ ಬಾರಿಸಿದ್ದಾರೆ.
ಕರ್ನಾಟಕದ ರಣಜಿ ತಂಡದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರು ಇತ್ತೀಚಿನ ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ತೋರಿದ ಉತ್ತಮ ಆಟ ಫಲ ನೀಡಿದೆ. ಮಂಗಳೂರು ಯುನೈಟೆಡ್ ಪರ ಕರುಣ್ ಬ್ಯಾಟ್ ಬೀಸಿದರೆ, ರಾಹುಲ್ ಅವರು ಹುಬ್ಬಳ್ಳಿ ಟೈಗರ್ಸ್ ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. [ವಾರಿಯರ್ಸ್ ಕೆಪಿಎಲ್ ಚಾಂಪಿಯನ್]
ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಅಕ್ಟೋಬರ್ 30ರಂದು ಹೈದರಾಬಾದಿನಲ್ಲಿ ಹಾಗೂ ನವೆಂಬರ್ 7 ರಂದು ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯವಾಡಲಿದೆ.
ತಂಡ ಇಂತಿದೆ: ಸುರೇಶ್ ರೈನಾ(ನಾಯಕ), ಕೆಎಲ್ ರಾಹುಲ್, ನಮನ್ ಓಜಾ(ವಿಕೆಟ್ ಕೀಪರ್), ಜೀವನ್ ಜೋತ್ ಸಿಂಗ್, ರೋಹಿತ್ ಶರ್ಮ, ಮನೋಜ್ ತಿವಾರಿ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್, ಕರುಣ್ ನಾಯರ್, ಪರ್ವೇಜ್ ರಸೂಲ್, ಪಂಕಜ್ ಸಿಂಗ್, ಈಶ್ವರ್ ಪಾಂಡೆ, ಜಸ್ಪ್ರೀತ್ ಬರುವಾ, ಕರಣ್ ಶರ್ಮ, ಕುಲದೀಪ್ ಯಾದವ್.