
ಮುಂಬೈನ ನೈಟ್ ಕ್ಲಬ್ವೊಂದರಲ್ಲಿ ಭಾಗಿಯಾಗಿದ್ದ ಟೀಮ್ ಇಂಡಿಯಾ ಆಟಗಾರ ಕೊರೊನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಬಂಧನಕ್ಕೆ ಒಳಪಟ್ಟಿದ್ದರು. ಬಳಿಕ ಜಾಮೀನಿನ ಮೂಲಕ ಅವರು ಬಿಡುಗಡೆಯಾಗಿದ್ದಾರೆ. ಈ ಘಟನೆ ದೊಡ್ಡ ಸದ್ದಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಮ್ಯಾನೇಜ್ಮೆಂಟ್ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.
ಸುರೇಶ್ ರೈನಾ ಕಳೆದ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಹೇಳಿದ್ದ ಸುರೇಶ್ ರೈನಾ ಅವರನ್ನು ಮಂಗಳವಾರ ಮುಂಜಾನೆ ಮುಂಬೈ ಪೊಲೀಸರು ಬಂಧಿಸಿದರು. ರೈನಾ ಮಾತ್ರವಲ್ಲದೆ ಈ ಕ್ಲಬ್ನಲ್ಲಿ ಭಾಗಿಯಾಗಿದ್ದ 34 ಮಂದಿ ಈ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದರು. ಬಳಿಕ ಜಾಮೀನು ಪಡೆದುಕೊಂಡು ರೈನಾ ಬಿಡುಗಡೆಯಾಗಿದ್ದಾರೆ.
"ಸುರೇಶ್ ರೈನಾ ಚಿತ್ರೀಕರಣದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದು ಅದು ನಿಗದಿಗಿಂತ ತಡವಾಗಿತ್ತು ಮುಗಿದಿತ್ತು. ಬಳಿಕ ಡೆಲ್ಲಿಗೆ ವಿಮಾನದಲ್ಲಿ ವಾಪಾಸಾಗುವ ಮುನ್ನ ಸ್ನೇಹಿತರೊಬ್ಬರು ಭೋಜನಕ್ಕಾಗಿ ಆಹ್ವಾನಿಸಿದ್ದರು. ಆದರೆ ಮುಂಬೈನ ಸ್ಥಳೀಯ ಕೊರೊನಾ ನೀತಿಸಂಹಿತೆ ಹಾಗೂ ಸಮಯದ ಬಗ್ಗೆ ಆತನಿಗೆ ಅರಿವಿರಲಿಲ್ಲ" ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ವಿಚಾರ ಸುರೇಶ್ ರೈನಾ ಅವರ ಅರಿವಿಗೆ ಬಂದ ಕೂಡಲೇ ಅಧಿಕಾರಿಗಳ ಕಾರ್ಯವಿಧಾನಗಳಿಗೆ ಸಹಕಾರವನ್ನು ನೀಡಿದ್ದಾರೆ. ಈ ಉದ್ಧೇಶಪೂರ್ವಕವಲ್ಲದ ಹಾಗೂ ದುರದೃಷ್ಟಕರ ಘಟನೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸುರೇಶ್ ಯಾವಾಗಲೂ ಸರ್ಕಾರ ನಿಗದಿಪಡಿಸಿದ ನಿಯಮಗಳು ಮತ್ತು ಕಾನೂನುಗಳ ಬಗ್ಗೆ ಅತ್ಯುನ್ನತ ಗೌರವದಿಂದ ಹೊಂದಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಸಹ ಅದನ್ನು ಮುಂದುವರಿಸುತ್ತಾರೆ" ಎಂದು ಈ ಹೇಳಿಕೆಯಲ್ಲಿ ಸುರೇಶ್ ರೈನಾ ಪರವಾಗಿ ಹೇಳಲಾಗಿದೆ.
ಮುಂಬೈ ಏರ್ಪೋರ್ಟ್ ಸಮೀಪದ ಖಾಸಗೀ ಕ್ಲಬ್ವೊಂದರಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಈ ಪೊಲೀಸ್ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಬಾಲಿವುಡ್ ಗಾಯಕ ಗುರು ರಾಂಧವ, ಬಾಲಿವುಡ್ ಸೆಲೆಬ್ರಿಟಿ ಸೂಪರ್ ಸ್ಟಾರ್ ಹೃತಿಕ್ ರೋಶನ್ ಅವರ ಮಾಜಿ ಪತ್ನಿ ಸುಝನ್ ಖಾನ್ ಕೂಡ ಬಂಧನಕ್ಕೊಳಗಾಗಿದ್ದರು.