ಅಡಿಲೇಡ್, ಫೆ. 17: ಕಳೆದ ವಿಶ್ವಕಪ್ ಸರಣಿ ಪುರುಷೋತ್ತಮ ಯುವರಾಜ್ ಸಿಂಗ್ ಈ ಬಾರಿ ಭಾರತ ತಂಡದ ಭಾಗವಾಗಿಲ್ಲ. ಭಾರತದ ಭರವಸೆಯ ಆಟಗಾರ ಸುರೇಶ್ ರೈನಾ ಯುವರಾಜ್ ಜಾಗವನ್ನು ತುಂಬಲಿದ್ದಾರೆ ಎಂದೇ ಅಂಕಿ ಅಂಶಗಳು ಹೇಳುತ್ತವೆ. ರೈನಾ ಸಹ ಈ ಮಾತಿಗೆ ಪುಷ್ಠಿ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸಿದ ರೈನಾ ಆಟ ಭಾರತದ ಗೆಲುವಿಗೆ ನೆರವಾಯಿತು. 56 ಎಸೆತಗಳಲ್ಲಿ 74 ರನ್ ದೋಚಿದ ರೈನಾ ಪಾಕಿಸ್ತಾನದ ಬೌಲರ್ ಗಳ ಬೆವರಿಳಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ರೈನಾ ಪಕ್ಕಾ ಯುವರಾಜ್ ಶೈಲಿಯಲ್ಲೇ ರನ್ ಹೊಳೆ ಹರಿಸಿದ್ದರು.["ವಿಶ್ವಕಪ್ ತಂಡದಿಂದ ಯುವಿ ಹೊರ ಹಾಕಿದ್ದು ಧೋನಿ"]

ಅಗತ್ಯ ಎಂದೆನಿಸಿದಾಗ ಆಕ್ರಮಣಕಾರಿ ಆಟ ಆಡಿದೆ. ಅದರೊಂದಿಗೆ ಸ್ಟ್ರೈಕ್ ರೋಟೆಟ್ ಸಹ ಮಾಡಿದೆ. ಇದು ರನ್ ಗಳಿಕೆಗೆ ನೆರವಾಯಿತು ಎಂದು ಪಂದ್ಯ ಗೆದ್ದ ನಂತರ ಬಿಸಿಸಿಐ ವೆಬ್ ಸೈಟ್ ಗೆ ನೀಡಿರುವ ಹೇಳಿಕೆಯಲ್ಲಿ ರೈನಾ ತಿಳಿಸಿದ್ದಾರೆ.
ನೇರವಾಗಿ ಆಡಲು ವಿಶೇಷ ಗಮನ ನೀಡಿದ್ದೆ. ಯಾವ ಬೌಲರ್ ವಿರುದ್ಧ ದೊಡ್ಡ ಹೊಡೆತಗಳು ಸಾಧ್ಯವಾಗುವುದಿಲ್ಲವೋ ಆಗ ಒಂದು ಎರಡು ರನ್ ಗಳಿಕೆಗೆ ಒತ್ತು ನೀಡಬೇಕು. ಇದೇ ತಂತ್ರ ನನಗೆ ನೆರವಾಯಿತು ಎಂದು ರೈನಾ ಹೇಳಿದ್ದಾರೆ.[ವಿರಾಟ್ ವಿಕ್ರಮ ಕೊಂಡಾಡಿದ ಕನ್ನಡ ದಿನಪತ್ರಿಕೆಗಳು]
ನಾಯಕ ಮಹೇಂದ್ರ ಸಿಂಗ್ ಧೊನಿ ಮತ್ತು ಯುವರಾಜ್ ಸಿಂಗ್ ಅವರಿಂದ ಕೆಳ ಕ್ರಮಾಂಕದ ಆಟದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಾನು ಕಳೆದ ವಿಶ್ವಕಪ್ ನಲ್ಲಿ ಅತಿ ಕಡಿಮೆ ಪಂದ್ಯ ಆಡಿದ್ದರೂ ಕೆಳ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡಿದ್ದೆ. ಹಿಂದಿನ ವಿಶ್ವಕಪ್ ನಲ್ಲಿ ಯುವರಾಜ್ ಮತ್ತು ಧೋನಿ ಯಾವ ರೀತಿ ಪಂದ್ಯದ ಅಂತ್ಯದವರೆಗೆ ಆಡಿದ್ದರು ಎಂಬುದನ್ನು ಗಮನವಿಟ್ಟು ನೋಡಿದ್ದೆ ಎಂದು ಹೇಳಿದ್ದಾರೆ.
ಈ ವಿಶ್ವಕಪ್ ನಲ್ಲಿ ನಾನು ಯುವರಾಜ್ ಸಿಂಗ್ ಸ್ಥಾನ ತುಂಬಲು ಬಯಸಿದ್ದೇನೆ. ಅವರಂತೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ರೈನಾ ಹೇಳಿದ್ದಾರೆ.