
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕುಲ್ದೀಪ್ ಕಣಕ್ಕಿಳಿಯದಿರುವುದು ನನಗೆ ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಹೇಳಿದ್ದಾರೆ. ಆರ್ ಅಶ್ವಿನ್ ಗಾಯಗೊಂಡಿರುವ ಕಾರಣ ಕುಲ್ದೀಪ್ ಯಾದವ್ ಕಣಕ್ಕಿಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು.
ಅಜಿತ್ ಅಗರ್ಕರ್ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದ ಬಗ್ಗೆ ಪ್ರತಿಕ್ರಿಯಿಸುತ್ತಾ ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದ ಕುಲ್ದೀಪ್ ಯಾದವ್ ಅಂತಿಮ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಯದ ಬಗ್ಗೆ ತುಂಬಾ ನಿರಾಶೆಗೊಂಡಿರುತ್ತಾರೆ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಮೂರು ಮಾದರಿಯ ತಂಡದಲ್ಲೂ ಸ್ಥಾನವನ್ನು ಪಡೆದುಕೊಂಡಿದ್ದ ಕುಲ್ದೀಪ್ ಯಾದವ್ ಕೇವಲ ಒಂದು ಏಕದಿನ ಪಂದ್ಯ ಹಾಗೂ ಒಂದು ಅಭ್ಯಾಸ ಪಂದ್ಯವನ್ನು ಮಾತ್ರವೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಸಿಡ್ನಿ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದ ಆರ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಗಾಯಗೊಂಡು ಹೊರಗುಳಿದಿದ್ದಾರೆ. ಆದರೆ ಈ ಸ್ಥಾನಕ್ಕಾಗಿ ವಾಶಿಂಗ್ಟನ್ ಸುಂದರ್, ಟಿ ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ಮಕಾಂಗ್ ಅಗರ್ವಾಲ್ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ 2018-19ರ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದ ಕುಲ್ದೀಪ್ ಯಾದವ್ ಬಗ್ಗೆ ಅಂದು ಕೋಚ್ ರವಿ ಶಾಸ್ತ್ರಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ವಿದೇಶಿ ಅಂಗಳದಲ್ಲಿ ಕುಲ್ದೀಪ್ ಯಾದವ್ ನಮ್ಮ ಪ್ರಾಥಮಿಕ ಆಯ್ಕೆ ಎಂದು ಕುಲ್ದೀಪ್ ಬೆಂಬಲಕ್ಕೆ ನಿಂತಿದ್ದರು. ಆ ಸರಣಿಯ ಕೊನೆಯ ಪಂದ್ಯದಲ್ಲಿ 5 ವಿಕೆಟ್ಗಳ ಗೊಚಲು ಪಡೆದಿದ್ದ ಕುಲ್ದೀಪ್ ಬಳಿಕ ಟೆಸ್ಟ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ.