ಸೂರ್ಯಕುಮಾರ್ ಕೈಬಿಟ್ಟಿದ್ದು ಪೆಟ್ಟು ಬಿತ್ತಾ? ಟೀಮ್ ಇಂಡಿಯಾ ಸೋಲಿನ ಪೋಸ್ಟ್ಮಾರ್ಟಮ್!
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ನಿರಾಶಾದಾಯಕ ಆರಂಭ ಪಡೆದಿದ್ದು, ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 1 ರನ್ಗಳ ರೋಚಕ ಸೋಲು ಕಂಡಿದೆ. ಈ ಪರಾಜಯದೊಂದಿಗೆ ಐರ್ಲೆಂಡ್ ತಂಡ ಭಾರತದ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ ಗೆದ್ದುಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾರತ ತಂಡ ಟಿ20 ಮಾದರಿಯಲ್ಲಿ 2023ರ ಆಗಸ್ಟ್ ಬಳಿಕ ಸರಣಿಯೊಂದನ್ನು ಕೈಚೆಲ್ಲಿದೆ.
ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಸುಲಭವಾಗಿ ಜಯ ಸಾಧಿಸಿ, ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ. ಟೀಮ್ ಇಂಡಿಯಾ ಐರ್ಲೆಂಡ್ನಲ್ಲಿ ಸರಣಿ ಸೋಲಿನ ಕಹಿಯನ್ನು ಕಂಡಿದೆ. ಈ ಸರಣಿ ಸೋಲಿಗೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಸೂರ್ಯಕುಮಾರ್ ಕೈಬಿಟ್ಟಿದ್ದು ಪೆಟ್ಟು ಬಿತ್ತಾ?
ಟೀಮ್ ಇಂಡಿಯಾವನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಘೋಷಿಸಿದ್ದಾಗ ತಂಡದ ಚುಕ್ಕಾಣಿಯನ್ನು ಸೂರ್ಯಕುಮಾರ್ ಯಾದವ್ ಬದಲಿಗೆ, ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಯಿತು. ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಈ ನಿರ್ಧಾರವನ್ನು ಕೈಗೊಂಡಿತ್ತು. ಬಿಸಿಸಿಐನ ಈ ನಿರ್ಧಾರದ ಕುರಿತು ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ಸೂರ್ಯಕುಮಾರ್ ಯಾದವ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು ನಿಜ. ಆದರೆ ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಸರಣಿಯನ್ನು ಸೋತಿರಲಿಲ್ಲ. ಹೀಗಾಗಿ ಬಿಸಿಸಿಐ ನಿರ್ಧಾರ ಈಗ ಚರ್ಚೆಯನ್ನು ಹುಟ್ಟುಹಾಕಿದೆ.
ಬಾರದ ಜೊತೆಯಾಟ, ಹೆಚ್ಚಿದ ಒತ್ತಡ
ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ರನ್ ಕಲೆ ಹಾಕಲು ಪರದಾಟವನ್ನು ನಡೆಸಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟರ್ಗಳು ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಸ್ಟ್ರೈಕ್ ರೊಟೆಟ್ ಮಾಡಿ ಇನಿಂಗ್ಸ್ ಬೆಳೆಸುವ ಕಲೆಯನ್ನು ಮರೆತಂತೆ ಕಂಡಿದೆ. ಈ ಸರಣಿಯಲ್ಲಿ ಜೊತೆಯಾಟಗಳು ಬಾರದೇ ಇರುವುದು ತಂಡದ ಸೋಲಿನಲ್ಲಿ ಎದ್ದು ಕಂಡಿದೆ.
ದೊಡ್ಡ ಹೆಸರು, ಕಳಪೆ ಆಟ
ಟೀಮ್ ಇಂಡಿಯಾದಲ್ಲಿ ಹಲವು ಸ್ಟಾರ್ ಆಟಗಾರರ ದಂಡೇ ಇದೆ. ವಿಶ್ವದ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ, ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹೀಗೆ ಸಾಲು ಸಾಲು ದೊಡ್ಡ ದೊಡ್ಡ ಹೆಸರುಗಳು ಇದ್ದರೂ ಸಹ ತಂಡ ಐರ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿರುವುದು ಆತ್ಮಾವಲೋಕನ ಮಾಡುವಂತೆ ಮಾಡಿದೆ.
ಶ್ರೇಯಸ್ ಅಯ್ಯರ್ ಕಳಪೆ ಬ್ಯಾಟಿಂಗ್
ಸೂರ್ಯಕುಮಾರ್ ಯಾದವ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ, ಶ್ರೇಯಸ್ ಅಯ್ಯರ್ ಅವರಿಗೆ ಈ ಸರಣಿಯಲ್ಲಿ ನಾಯಕತ್ವ ನೀಡಲಾಯಿತು. ಇವರು ಈ ಸರಣಿಯಲ್ಲಿ ಒಂದೇ ಒಂದು ಬಿಗ್ ಇನಿಂಗ್ಸ್ ಕಟ್ಟದೇ ನಿರಾಸೆ ಅನುಭವಿಸಿದ್ದಾರೆ. ಅಂಕಿ-ಅಂಶಗಳನ್ನು ಗಮನಿಸಿದರೆ, ಶ್ರೇಯಸ್ ಅವರ ಕಳಪೆ ಫಾರ್ಮ್ ಮಧ್ಯಮ ಕ್ರಮಾಂಕದ ಮೇಲೆ ನೇರ ಪರಿಣಾಮ ಬೀರಿದೆ.
ವೈಭವ್ ಸೂರ್ಯವಂಶಿಗೆ ಅವಕಾಶ ನೀಡುವಂತೆ ನೆಟ್ಟಿಗರ ಆಕ್ರೋಶ
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ 15 ವರ್ಷ ವೈಭವ್ ಸೂರ್ಯವಂಶಿ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಬೇಕಿತ್ತು ಎಂದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಮೊದಲ ಪಂದ್ಯದಲ್ಲಿ ವೈಭವ್ಗೆ ಅವಕಾಶ ಸಿಗದೇ ಇದ್ದಾಗ, ಎರಡನೇ ಪಂದ್ಯದಲ್ಲಾದ್ರೂ ಇವರಿಗೆ ಚಾನ್ಸ್ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಭಾನುವಾರದ ಪಂದ್ಯದಲ್ಲೂ ಇವರನ್ನು ತಂಡದಿಂದ ಕೈ ಬಿಟ್ಟಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಒಟ್ಟಾರೆಯಾಗಿ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿಯುವ ಅನಿವಾರ್ಯತೆ ಇದೆ. ಮುಂದೆ ಟೀಮ್ ಇಂಡಿಯಾ ಮುಂದೆ ಸಾಲು ಸಾಲು ಸವಾಲುಗಳು ಕಾದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications