ವಿಶ್ವ ಚಾಂಪಿಯನ್ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಗೆದ್ದು ಬೀಗಿದೆ. ಇದೀಗ ಭಾರತ ಕೊನೆಯ ಪಂದ್ಯವನ್ನು ಗೆದ್ದು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಕ್ಲೀನ್ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕೊನೆಯ ಟಿ20 ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್-11 ರಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವುದರಿಂದ ಸೂರ್ಯಕುಮಾರ್ ಕೆಲವು ಪ್ರಯೋಗಗಳನ್ನು ಮಾಡಬಹುದು.

ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಬಹುದು. ಸರಣಿಯ ಮೊದಲ ಪಂದ್ಯದಲ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆದರೆ ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡಿ ಬರಲಿಲ್ಲ. ಕೇವಲ 29 ರನ್ಗಳಿ ಔಟಾದರು. ಇದಾದ ಬಳಿಕವೂ ಎರಡನೇ
ಟಿ20 ಪಂದ್ಯದಲ್ಲಿಯೂ ಸ್ಯಾಮ್ಸನ್ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಈ ಎರಡೂ ಪಂದ್ಯಗಳಲ್ಲಿ ಅವರು ಆರಂಭಿಕನಾಗಿ ಬ್ಯಾಟಿಂಗ್ ಮಾಡಿದ್ದು, ಯಶಸ್ಸು ಕಂಡಿಲ್ಲ. ಈ ಕಾರಣದಿಂದಾಗಿ ಅವರನ್ನು ಕೊನೆಯ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಿಂದ ನಾಯಕ ಕೈಬಿಡಬಹುದು. ಅವರ ಸ್ಥಾನದಲ್ಲಿ ಯುವ ವಿಕೆಟ್ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ಅವಕಾಶ ಸಿಗಬಹುದು.
ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯದಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅರ್ಷದೀಪ್ ಸಿಂಗ್ ಬದಲಿಗೆ ಪ್ಲೇಯಿಂಗ್-11 ರಲ್ಲಿ ಯುವ ವೇಗಿ ಹರ್ಷಿತ್ ರಾಣಾಗೆ ಅವಕಾಶ ನೀಡಬಹುದು. ಇದು ನಡೆದರೆ ಅವರು ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.
ಇನ್ನೊಂದೆಡೆ ಮಯಾಂಕ್ ಯಾದವ್ ಇದುವರೆಗೆ ಕೇವಲ 2 ಟಿ20 ಪಂದ್ಯಗಳನ್ನು ಆಡಿದ್ದು, ಅವರಿಗೆ ವಿಶ್ರಾಂತಿ ನೀಡದಿರಬಹುದು. ಇದರ ಹೊರತಾಗಿ ಸ್ಪಿನ್ನರ್ ವರುಣ್ ಚಕ್ರವರ್ತಿಗೂ ವಿಶ್ರಾಂತಿ ನೀಡುವ ನಿರೀಕ್ಷೆಯಿಲ್ಲ. ಏಕೆಂದರೆ ಅವರು ಮೂರು ವರ್ಷಗಳ ನಂತರ ತಂಡಕ್ಕೆ ಮರಳಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಇದಲ್ಲದೆ, ಭಾರತ ತಂಡದ ಆಡುವ ಹನ್ನೊಂದರಲ್ಲಿ ಮತ್ತೊಂದು ಬದಲಾವಣೆ ಆಗಬಹುದು. ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ವಿಶ್ರಾಂತಿ ಪಡೆಯಬಹುದು. ಅವರ ಜಾಗಕ್ಕೆ ಇಲ್ಲಿಯವರೆಗೆ ಬೆಂಚ್ ಕಾಯುತ್ತಿದ್ದ ತಿಲಕ್ ವರ್ಮಾ ಸೇರಿಸಿಕೊಳ್ಳುಬಹುದು. ಇನ್ನುಳಿದಂತೆ
ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ ಮತ್ತು ರಿಯಾನ್ ಪರಾಗ್ ತಂಡದಲ್ಲಿ ಉಳಿಯುವುದು ಖಚಿತವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಈ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ರಿಯಾನ್ ಪರಾಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮಯಾಂಕ್ ಯಾದವ್.