ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಣಿಸಿತು. ಆರ್ಸಿಬಿ ತಂಡದ ಬೌಲರ್ಸ್ ಸಂಘಟಿತ ದಾಳಿಗೆ ರಾಜಸ್ಥಾನ ಗೆಲ್ಲುವ ಪಂದ್ಯವನ್ನು ಸೋತಿತು. ಈ ಮೂಲಕ ತವರಿನಲ್ಲಿ ಆರ್ಸಿಬಿ ಮೊದಲ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಟಾರ್ ಯುವ ಸ್ಪಿನ್ನರ್ ಸುಯಾಶ್ ಶರ್ಮಾ ಮಾಡಿದ ಎಡವಟ್ಟಿನಿಂದ ಎಲ್ಲರ ಗಮನ ಸೆಳೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಇನ್ನಿಂಗ್ಸ್ನ 9ನೇ ಓವರ್ ನಂತರ ಈ ಘಟನೆ ನಡೆದಿದೆ. ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುವಾಗ ಸುಯಶ್ ಶರ್ಮಾ ಅವರು ತಮ್ಮ ಕ್ಯಾಪ್ನಿಂದ ಚೆಂಡನ್ನು ಎತ್ತಿಕೊಂಡರು. ಇದು ವಿವಾದಕ್ಕೆ ದಾರಿ ಮಾಡಿಕೊಟ್ಟಿತು.

ಐಪಿಎಲ್ ಪಂದ್ಯದ ಆಟದ ನಿಯಮ 28.2.1.2 ರ ಪ್ರಕಾರ, ಒಬ್ಬ ಫೀಲ್ಡರ್ ತನ್ನ ಬಟ್ಟೆಯನ್ನು ವಿಸ್ತರಿಸಿ ಚೆಂಡನ್ನು ಫೀಲ್ಡಿಂಗ್ ಮಾಡಲು ಬಳಸಿದಾಗ ಅದರನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗುತ್ತದೆ. ಆಕ್ರಮ ಫೀಲ್ಡಿಂಗ್ ಪ್ರಕರಣದ ನಂತರ ಚೆಂಡನ್ನು ತಕ್ಷಣವೇ ಡೆಡ್ ಎಂದು ಘೋಷಿಸಲಾಗುತ್ತದೆ ಹಾಗು ಬೌಲಿಂಗ್ ಮಾಡುವ ತಂಡಕ್ಕೆ ಐದು ರನ್ಗಳ ದಂಡವನ್ನು ವಿಧಿಸಲಾಗುತ್ತದೆ.
ಸುಯಶ್ ಶರ್ಮಾ ಚೆಂಡನ್ನು ಥರ್ಡ್ ಮ್ಯಾನ್ ಬಳಿ ತನ್ನ ಕ್ಯಾಪ್ನಿಂದ ಹಿಡಿದು ಎಸೆತವನ್ನು ಬ್ಯಾಕಪ್ ಮಾಡಿದರು. ಮುಂದಿನ ಓವರ್ ಆರಂಭವಾಗುವ ಮೊದಲು ಟಿವಿ ಅಂಪೈರ್ ಮುರುಪಂದ್ಯಗಳನ್ನು ಪರಿಶೀಲಿಸಿದಾಗ ಸ್ವಲ್ಪ ವಿಳಂಬವಾಯಿತು. ಚೆಂಡು ಡೆಡ್ ಎಂದು ಘೋಷಿಸಲ್ಪಟ್ಟಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ರನ್ಗಳ ಪೆನಾಲ್ಟಿಯಿಂದ ಪಾರಾಯಿತು. ಸುಯಶ್ ಶರ್ಮಾ ತನ್ನ ಕ್ಯಾಪ್ನಿಂದ ಚೆಂಡನ್ನು ಎತ್ತಿಕೊಳ್ಳುವ ಮೊದಲು ಮೈದಾನದಲ್ಲಿದ್ದ ಇಬ್ಬರು ಅಂಪೈರ್ಗಳಲ್ಲಿ ಒಬ್ಬರು "ಓವರ್' ಎಂದರು.
ಗುರವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಬೆಂಗಳೂರು ತಂಡ ನೀಡಿದ 206 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 194 ರನ್ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇದರೊಂದಿಗೆ ಬೆಂಗಳೂರು 11 ರನ್ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.