ಮೇ 20 ಸೋಮವಾರ, ಕ್ರಿಕೆಟ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳು ಭಾವನಾತ್ಮಕವಾಗಿ ಬೆಸೆಯುವ ಆಟವಾಗಿದೆ. ಆಟಗಾರರು ಸಹ ಈ ಆಟವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಕ್ರಿಕೆಟ್ನಲ್ಲಿ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ.
ಇನ್ನೂ ಕೆಲವರಿಗೆ ಕ್ರಿಕೆಟ್ ಆಡುವ ಸಾಮರ್ಥ್ಯವಿದ್ದರೂ ಅವಕಾಶ ಸಿಗದೆ ವಂಚಿತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಹೋರಾಟದ ಕಥೆ ಹೇಳುವಾಗ ಅವರ ಆಸೆಗಳು ಮತ್ತೆ ಕಣ್ಣೀರಾಗಿ ಹರಿಯುತ್ತವೆ. ಈ ರೀತಿ ಕಥೆಗಳು ಬಹಳಷ್ಟು ಕ್ರಿಕೆಟಿಗರ ಜೀವನದಲ್ಲಿವೆ.

ಸತತ ಸೋಲಿನಿಂದ ಕಂಗೆಟ್ಟು ಟೂರ್ನಿಯಿಂದ ಹೊರ ಬೀಳುವ ಸ್ಥಿತಿಯಲ್ಲಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಲಕ್ಕಿ ಮ್ಯಾನ್ ಆಗಿ ಬಂದ ಸ್ವಪ್ನಿಲ್ ಸಿಂಗ್ ಅವರ ಕ್ರಿಕೆಟ್ ವೃತ್ತಿಜೀವನ ಕೂಡ ಯಾವುದೇ ಸಿನಿಮಾಕ್ಕೂ ಕಮ್ಮಿ ಎಂಬಂತಿದೆ.
ಅಷ್ಟರ ಮಟ್ಟಿಗೆ ಸ್ವಪ್ನಿಲ್ ಸಿಂಗ್ ತಮ್ಮ ಹೋರಾಟದಿಂದ ದೂರ ಸರಿಯದ ಇಂದು ಅಪಾರ ಮೆಚ್ಚುಗೆ ಕಾರಣನಾಗಿದ್ದಾರೆ. ಈ ಬಗ್ಗೆ ಸ್ವತಃ ಸ್ವಪ್ನಲ್ ಸಿಂಗ್ ಹೇಳುವಾಗ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋವನ್ನು ಆರ್ಸಿಬಿ ಬಿಡುಗಡೆ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಾತನಾಡಿರುವ ಸ್ವಪ್ನಿಲ್ ಸಿಂಗ್, ಹರಾಜಿನ ದಿನ ನಾನು ರಣಜಿ ಆಡಲು ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದೆ. ರಾತ್ರಿ 7-8 ರ ಸುಮಾರಿಗೆ ನಾವು ಎಲ್ಲೋ ಬಂದಿಳಿದೆವು. ಕೊನೆಯ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅಲ್ಲಿಯವರೆಗೆ ನಾನು ಆಯ್ಕೆ ಆಗಿರಲಿಲ್ಲ.
ಆಗ ನಾನು ಯೋಚಿಸಿದೆ, ಹರಾಜು ಮುಗಿದಿದೆ. ನಾನು ಈಗ ನಡೆಯುತ್ತಿರುವ ರಣಜಿ ಅನ್ನು ಆಡುತ್ತೇನೆ. ಅಗತ್ಯವಿದ್ದರೆ ಮುಂದಿನ ಆವೃತ್ತಿಯನ್ನು ಆಡಿ ಕ್ರಿಕೆಟ್ ಅನ್ನು ತ್ಯಜಿಸುತ್ತೇನೆ. ಏಕೆಂದರೆ ಜಗತ್ತನ್ನು ಮತ್ತು ಇತರ ವಸ್ತುಗಳನ್ನು ಗೆಲ್ಲಲು ಜೀವನದುದ್ದಕ್ಕೂ ನಾನು ಕ್ರಿಕೆಟ್ ಆಡಲು ಇಷ್ಟವಿರಲಿಲ್ಲ.
ನನಗೆ ಅಂದು ತುಂಬಾ ನಿರಾಸೆಯಾಯಿತು. ಆದರೆ ಈ ವೇಳೆ ಮನೆಯವರು ನಾನು ಆಯ್ಕೆಯಾಗಿದ್ದೇನೆ ಹೇಳಿದ ಕ್ಷಣ, ನಾವು ಮುರಿದುಬಿದ್ದೆವು. ಅದು ಎಷ್ಟು ಭಾವನಾತ್ಮಕ ಪ್ರಯಾಣವಾಗಿತ್ತು ಎಂಬುದು ಹಲವರಿಗೆ ತಿಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಇಂದು ಕ್ರಿಕೆಟ್ ಆಡುತ್ತಿರುವುದಕ್ಕೆ ನನ್ನ ತಂದೆಯೇ ಕಾರಣ. ಹೀಗಾಗಿ ಅವರೆ ನನ್ನ ಮೊದಲ ಕೋಚ್. ವಿರಾಟ್ ಕೊಹ್ಲಿ ಜೊತೆ ಅಂಡರ್-19 ವಿಶ್ವಕಪ್ ಆಡಿರುವ ನಾನು ಮಲೇಷ್ಯಾ ಮತ್ತು ಶ್ರೀಲಂಕಾಕ್ಕೆ ಪ್ರವಾಸ ಮಾಡಿದ್ದೇನೆ.
ಅಲ್ಲದೆ ನಾನು ಕೂಡ ವಿರಾಟ್ ಅವರ ರೂಮ್ ಪಾರ್ಟ್ನರ್ ಆಗಿದೆ. ಬಹಳ ದಿನಗಳ ನಂತರ ಅವರನ್ನು ಭೇಟಿ ಮಾಡಿದೆ. ಅದು ಅವರೊಂದಿಗೆ ತುಂಬಾ ಆತ್ಮೀಯ ಭೇಟಿಯಾಗಿತ್ತು ಎಂದು ಸ್ವಪ್ನಿಲ್ ಹೇಳಿದ್ದಾರೆ.
2008ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ವಪ್ನಿಲ್ ಸಿಂಗ್ ಆಡಿದ್ದರು. ತಮ್ಮ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ವಿಕೆಟ್ ಪಡೆಯುವಲ್ಲಿ ಯಶ್ವಸಿಯಾಗಿದ್ದರು. ಈ ಕಥೆಯನ್ನು ಆರ್ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸ್ವಪ್ನಿಲ್ ಹೇಳಿಕೊಂಡಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುತ್ತಿದ್ದ ಸ್ವಪ್ನಿಲ್ ತಮ್ಮ ಹೋರಾಟದ ಕುರಿತು ಮಾತನಾಡಿದ್ದಾರೆ. ಒಂದು ಕಾಲದಲ್ಲಿ ನಾನು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಎರಡನೇ ಅಥವಾ ಮೂರನೇ ಸ್ಥಾನದಲ್ಲಿದ್ದೆ.
ಆ ವೇಳೆ ಬರೋಡಾ ತಂಡದ ಆಯ್ಕೆ ನಡೆಯುತ್ತಿದ್ದು, ನಮ್ಮ ತಂಡದ ನಾಯಕನ ಬಳಿಗೆ ಹೋಗಿದ್ದೆ, ತಂಡದಲ್ಲಿ ನಿಮಗೆ ಸ್ಥಾನವಿಲ್ಲ. ನಿಮ್ಮ ಜಾಗದಲ್ಲಿ ಯುವಕನೊಬ್ಬನಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟವಾಗಿ ತಂಡದಿಂದ ನನ್ನನ್ನು ಕೈ ಬಿಟ್ಟಿದ್ದರು ಎಂದು ಅಂದು ತಮಗಾದ ನೋವನ್ನು ತಿಳಿಸಿದ್ದಾರೆ.
ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್ ಇರ್ಪಾನ್ ಪಠಾಣ್ ಅವರನ್ನು ಸ್ವಪ್ನಿಲ್ ಸಾಕಷ್ಟು ಹೊಗಳಿದ್ದಾರೆ. ನಾನು ಕ್ರಿಕೆಟ್ ಆಡಲು ಹೊಸ ರಾಜ್ಯವನ್ನು ಹುಡುಕುವಲ್ಲಿ ಇರ್ಫಾನ್ ಪಠಾಣ್ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ.
ಜೊತೆಗೆ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ನನಗೆ ನೆಟ್ ಬೌಲರ್ ಆಗಲು ಆಫರ್ ಬಂದಿತ್ತು. ಆಗ ಇರ್ಫಾನ್ ಸರ್ ಗೆ ಕರೆ ಮಾಡಿ ಕೇಳಿದೆ. ಅವರ ಅಭಿಪ್ರಾಯಕ್ಕೆ ತಲೆ ಬಾಗಿ ಲಕ್ನೋಗೆ ಹೋದೆ.
ಆದರೆ ನನಗೆ ನೆಟ್ ಬೌಲರ್ ಆಗಿ ಹೋಗಿರುವುದು ಇಷ್ಟ ಇರಲಿಲ್ಲ. ಆ ನಂತರ ಕೋಚ್ ಆಂಡಿ ಫ್ಲೇವರ್ ನನ್ನ ಬ್ಯಾಟಿಂಗ್ ಸುಧಾರಿಸಲು ಮತ್ತು ಬೇರೆ ರೀತಿಯಲ್ಲೂ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಸ್ವಪ್ನಿಲ್ ಹೇಳಿದ್ದಾರೆ.