ಮುಂಬೈ, ಡಿ.24: ಭಾರತದ ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಅವರನ್ನು 2015ನೇ ಸಾಲಿನ ಕರ್ನಲ್ ಸಿಕೆ ನಾಯ್ಡು ಪ್ರಶಸ್ತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಮಾಡಿದೆ. ಮುಂಬೈನಲ್ಲಿ ನಡೆದ ಸಭೆ ಬಳಿಕ ಈ ವಿಷಯನ್ನು ಗುರುವಾರ ಪ್ರಕಟಿಸಲಾಯಿತು.
ಸಿಕೆ ನಾಯ್ಡು ಪ್ರಶಸ್ತಿಯನ್ನು ಜೀವಮಾನದ ಶ್ರೇಷ್ಠ ಸಾಧನೆಗಾಗಿ ನೀಡಲಾಗುತ್ತದೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಗೌರವಾನ್ವಿತ ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ಎನ್ ರಾಮ್ (ಕಸ್ತೂರಿ ಅಂಡ್ ಸನ್ಸ್ ಲಿಮಿಟೆಡ್ ಹಾಗೂ ದಿ ಹಿಂದೂ ಪಬ್ಲಿಕೇಷನ್) ಅವರಿದ್ದ ಸಮಿತಿ ಒಕ್ಕೊರಲಿನಿಂದ ಆಯ್ಕೆ ಮಾಡಿದ್ದಾರೆ.

65 ವರ್ಷ ವಯಸ್ಸಿನ ಕರ್ನಾಟಕದ ಆಟಗಾರ ಸೈಯದ್ ಕಿರ್ಮಾನಿ ಅವರು ಭಾರತದ ಪರ 88 ಟೆಸ್ಟ್ ಹಾಗೂ 49 ಏಕದಿನ ಕ್ರಿಕೆಟ್ ಅವರು 1976 ಹಾಗೂ 1986 ರ ಅವಧಿಯಲ್ಲಿ ಆಡಿದ್ದರು. ಆಕ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದರು. 1976ರ ಫೆಬ್ರವರಿ 21ರಂದು ನ್ಯೂಜಿಲೆಂಡ್ ವಿರುದ್ಧವೇ ಮೊದಲ ಏಕದಿನ ಕ್ರಿಕೆಟ್ ಪಂದ್ಯವಾಡಿದ್ದರು. 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ಡೆವಿಲ್ಸ್ ಪಡೆಯಲ್ಲಿ ಕಿರ್ಮಾನಿ ಮಹತ್ವದ ಪಾತ್ರ ವಹಿಸಿದ್ದರು.
ಭಾರತದ ಪ್ರಥಮ ಟೆಸ್ಟ್ ನಾಯಕ ಕರ್ನಲ್ ಕೊಟ್ಟಾರಿ ಕನಕೈಯ ನಾಯುಡು ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಬಿಸಿಸಿಐ ನೀಡುತ್ತಾ ಬಂದಿದೆ. 1994ರಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 25 ಲಕ್ಷ ಚೆಕ್, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.