ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಬರೋಡಾ ತಂಡ 8 ವಿಕೆಟ್ಗಳ ಜಯ ದಾಖಲಿಸಿತು. ಈ ಗೆಲುವಿನ ಮೂಲಕ ಬರೋಡಾ ಆಡಿದ 5 ಪಂದ್ಯಗಳಲ್ಲಿ 3 ಜಯ, 2 ಸೋಲು ಕಂಡಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಬರೋಡಾ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಬ್ಯಾಟರ್ಗಳ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಗುಜರಾತ್ ಪಡ ಆರ್ಯ ದೇಸಾಯಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 22 ಬಾರಿಸಿದರು. ಹೇಮಂಗ್ ಪಾಟೀಲ್ 18 ಎಸೆತಗಳಲ್ಲಿ 13 ರನ್ ಬಾರಿಸಿದರು. ಉಳಿದ ಬ್ಯಾಟರ್ಗಳು ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಅಂತಿಮವಾಗಿ ಗುಜರಾತ್ 14.1 ಓವರ್ಗಳಲ್ಲಿ 73 ರನ್ಗಳಿಗೆ ಆಲೌಟ್ ಆಯಿತು. ಬರೋಡಾ ತಂಡದ ಪರ ರಾಜ್ ಲಿಂಬಾಣಿ 3, ಅತೀತ ಶೇಠ್ 2 ವಿಕೆಟ್ ಕಬಳಿಸಿದರು.

ಗುರಿಯನ್ನು ಬೆನ್ನಟ್ಟಿದ ಬರೋಡಾ ತಂಡದ ಆರಂಭ ಭರ್ಜರಿಯಾಗಿತ್ತು. ಶಾಶ್ವತ್ ರಾವತ್ (ಅಜೇಯ 30) ಹಾಗೂ ವಿಷ್ಣು ಸೋಲಂಕಿ (27 ರನ್) ಮೊದಲ ವಿಕೆಟ್ಗೆ 55 ರನ್ ಜೊತೆಯಾಟದ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಬರೋಡಾ 6.4 ಓವರ್ಗಳಲ್ಲಿ 2 ವಿಕೆಟ್ಗೆ 74 ರನ್ ಸೇರಿಸಿತು.
ಬಿ ಗುಂಪಿನ ಪಂದ್ಯದಲ್ಲಿ ಬಿಹಾರ್ ತಂಡವನ್ನು 5 ವಿಕೆಟ್ಗಳನ್ನು ಗೋವಾ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಬಿಹಾರ್ 20 ಓವರ್ಗಳಲ್ಲಿ 7 ವಿಕೆಟ್ಗೆ 180 ರನ್ ಸೇರಿಸಿತು. ಬಿಹಾರ ತಂಡದ ಪರ ವೈಭವ್ ಸೂರ್ಯವಂಶಿ (46), ಸಕಿಬುಲ್ ಗನಿ (60), ಆಕಾಶ್ ರಾಜ್ (40) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಗೋವಾ ತಂಡದ ಪರ ದೀಪರಾಜ್ ಗಾಂವ್ಕರ್ 4 ವಿಕೆಟ್ ಉರುಳಿಸಿದರು.
ಗುರಿಯನ್ನು ಬೆನ್ನಟ್ಟಿದ ಗೋವಾ ತಂಡದ ಪರ ಕಶ್ಯಪ್ ಬಾಕ್ಳೆ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 64 ರನ್ ಸಿಡಿಸಿದರು. ಸುಯಶ್ ಪ್ರಭುದೇಸಾಯಿ ಸಹ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರು 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 79 ರನ್ ಬಾರಿಸಿದರು. ಲಲಿತ್ ಯಾದವ್ ಅಜೇಯ 21 ರನ್ ಕಲೆ ಹಾಕಿದರು. ಅಂತಿಮವಾಗಿ ಗೋವಾ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಸೇರಿಸಿ ಜಯ ಸಾಧಿಸಿತು.