ಸಯ್ಯದ್ ಮುಷ್ತಾಕ್ ಅಲಿ: ಹಾಲಿ ಚಾಂಪಿಯನ್ಸ್ ಕರ್ನಾಟಕಕ್ಕೆ ದೊಡ್ಡ ಹಿನ್ನಡೆ

ಬೆಂಗಳೂರು: ಕೊರೊನಾವೈರಸ್ ಭೀತಿಯಿಂದಾಗಿ ಬದಿಗೆ ಸರಿದಿದ್ದ ದೇಸಿ ಕ್ರಿಕೆಟ್ ಟೂರ್ನಿಗಳು ಮತ್ತೆ ಚಾಲನೆಗೊಳ್ಳುವುದರಲ್ಲಿವೆ. ಇದಕ್ಕೂ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯ ಹಾಲಿ ಚಾಂಪಿಯನ್ಸ್ ಕರ್ನಾಟಕ್ಕೆ ದೊಡ್ಡ ಹಿನ್ನಡೆಯ ಸಂಗತಿ ಕೇಳಿ ಬಂದಿದೆ. ಕರ್ನಾಟಕ ತಂಡದ ನಾಯಕ, ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಮನೀಶ್ ಪಾಂಡೆ ತಂಡದಿಂದ ಹೊರ ಬಿದ್ದಿದ್ದಾರೆ. ಪ್ರಮುಖ ಆಟಗಾರರಿಲ್ಲದೆ ಚಿಂತೆಯಲ್ಲಿದ್ದ ಕರ್ನಾಟಕಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಮೊಣಕೈ ಗಾಯಕ್ಕೀಡಾಗಿರುವ ಮನೇಶ್ ಪಾಂಡೆ ಮುಂದಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೀಸನ್ನಲ್ಲಿ ಆಡುತ್ತಿಲ್ಲ. 31ರ ಹರೆಯದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಶ್ ಅವರ ಎಡ ಮೊಣಕೈಗೆ ಗಾಯವಾಗಿತ್ತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ನಿಯಮಿತ ಓವರ್ಗಳ ಸರಣಿಯ ವೇಳೆ ಮನೀಶ್ ಗಾಯಕ್ಕೀಡಾಗಿದ್ದರು.
ಆಸ್ಟ್ರೇಲಿಯಾ ವಿರುದ್ಧ ಟಿ20ಐ ಸರಣಿಯ ಒಂದು ಪಂದ್ಯದಲ್ಲಿ ಆಡಿದ್ದ ಮನೀಶ್, ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು.

ಕಳೆದ ಸೀಸನ್ನಲ್ಲಿ ಅತ್ಯಧಿಕ ರನ್
2019ರಲ್ಲಿ ಕರ್ನಾಟಕ ತಂಡ ಇದೇ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದಾಗ ಮನೀಶ್ ಪಾಂಡೆ ಅವರು ಮುಂಚೂಣಿ ರನ್ ಸರದಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಆವತ್ತು ಟೂರ್ನಿಯಲ್ಲಿ ಮನೀಶ್ 314 ರನ್ ಬಾರಿಸಿದ್ದರು. ಇದರಲ್ಲಿ ಅಜೇಯ 129 ರನ್ ಅಲ್ಲದೆ ಎರಡು ಅರ್ಧ ಶತಕಗಳೂ ಸೇರಿತ್ತು.

ತಂಡದಲ್ಲಿ ಪ್ರಮುಖ ಆಟಗಾರರಿಲ್ಲ
ಮನೀಶ್ ಅಲಭ್ಯತೆ ಕರ್ನಾಟಕ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ ಯಾಕೆಂದರೆ ನಾಯಕನಾಗಿರುವ ಮನೇಶ್ ಅವರೇ ಆಡುತ್ತಿಲ್ಲ. ಅಲ್ಲದೆ, ತಂಡದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿ ಆಡುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮನೀಶ್ ಮತ್ತು ರಾಹುಲ್ ಟೆಸ್ಟ್ ಸರಣಿಯೊಂದಿಗೆ ರಾಷ್ಟ್ರೀಯ ತಂಡದ ಜವಾಬ್ದಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಟೂರ್ನಿಯ ಪ್ರಮುಖ ಮಾಹಿತಿ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಸಂಬಂಧಿಸಿ 20 ಮಂದಿಯ ತಂಡಗಳು ಶೀಘ್ರ ಪ್ರಕಟವಾಗುವ ನಿರೀಕ್ಷೆಯಿದೆ. ಟೂರ್ನಿಯು ಜನವರಿ 10ರಿಂದ ಜನವರಿ 31ರ ವರೆಗೆ ನಡೆಯಲಿದೆ. ಕರ್ನಾಟಕ ತಂಡ ಗ್ರೂಪ್ 'ಎ'ಯಲ್ಲಿದ್ದು, ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಜನವರಿ 10ರಂದು ಮೊದಲ ಪಂದ್ಯವನ್ನಾಡಲಿದೆ.ಲೀಗ್ ಹಂತದ ಎಲ್ಲಾ ಪಂದ್ಯಗಳು 3 ಓವಲ್, ಆಲೂರು ಮತ್ತು ಬೆಂಗಳೂರು ತಾಣಗಳಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications