
ಕಟಕ್, ಫೆಬ್ರವರಿ 24: ನಾಯಕ ಮನೀಶ್ ಪಾಂಡೆ ಸ್ಫೋಟಕ ಶತಕದ ನೆರವಿನಿಂದ ಕಟಕ್ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೊಫಿ ಮೂರನೇ ಸುತ್ತಿನ ಗ್ರೂಪ್ ಡಿ ಟಿ20 ಪಂದ್ಯದಲ್ಲಿ ಅರುಣಾಚಲ ಪ್ರದೇಶ ತಂಡದ ವಿರುದ್ಧ ಕರ್ನಾಟಕ 146 ರನ್ ಭರ್ಜರಿ ಗೆಲುವನ್ನಾಚರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಕರ್ನಾಟಕಕ್ಕೆ ಆರಂಭಿಕ ಆಟಗಾರ ರೋಹನ್ ಕದಮ್ 25, ಮಯಾಂಕ್ ಅಗರ್ವಾಲ್ 15 ರನ್ ಸೇರಿಸಿದರು. ಆದರೆ ಪಾಂಡೆ ಕೇವಲ 46 ಎಸೆತಕ್ಕೆ 111 ರನ್ ಚಚ್ಚಿದ್ದು ತಂಡವನ್ನು ಗಣನೀಯವಾಗಿ ಮೇಲೆತ್ತಿತು. ಜೊತೆಗೆ ಶರತ್ ಬಿಆರ್ 43 ರನ್ ಕೊಡುಗೆ ನೀಡಿದರು.
ರಾಜ್ಯ ತಂಡ 20 ಓವರ್ಗೆ 4 ವಿಕೆಟ್ ನಷ್ಟದೊಂದಿಗೆ 226 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಅರುಣಾಚಲಕ್ಕೆ ಆರಂಭಿಕ ಆಟಗಾರ ಸಮರ್ಥ್ ಸೇತ್ 49 ರನ್ ಕೊಡುಗೆ ಬಿಟ್ಟರೆ ಉಳಿದ ಯಾರೊಬ್ಬರ ಬ್ಯಾಟಿಂಗ್ ಬೆಂಬಲವೂ ಲಭಿಸಲಿಲ್ಲ. ಉಳಿದ 10 ಆಟಗಾರರು 6ಕ್ಕೂ ಕಡಿಮೆ ರನ್ನೊಂದಿಗೆ ಸಾಲಾಗಿ ವಿಕೆಟ್ ಒಪ್ಪಿಸಿದರು.
ಅತೀ ಕಳಪೆ ಬ್ಯಾಟಿಂಗ್ ತೋರಿಸಿದ ಅರುಣಾಚಲ ಪ್ರದೇಶ ತಂಡ 14.4 ಓವರ್ಗೆ ಎಲ್ಲಾ ವಿಕೆಟ್ ಕಳೆದು 80 ರನ್ ಪೇರಿಸುವುದರೊಂದಿಗೆ ಶರಣಾಯಿತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 11 ರನ್ನಿಗೆ 5, ವಿ. ಕೌಶಿಕ್ 2 ವಿಕೆಟ್ ಕೆಡವಿ ಎದುರಾಳಿಯನ್ನು ಕಾಡಿದರು.