
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 2020 21ನೇ ಆವೃತ್ತಿಯ ಚಾಂಪಿಯನ್ ಆಗಿ ತಮಿಳುನಾಡು ಹೊರಹೊಮ್ಮಿದೆ. ಬರೋಡಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಸುಲಭ ಜಯ ಸಾಧಿಸಿ ಚಾಂಪಿಯನ್ ಆಗಿ ಮೆರೆದಿದೆ. ಈ ಮೂಲಕ ದೇಶೀಯ ಕ್ರಿಕೆಟ್ನ ಚುಟುಕು ಕದನದ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಹಾಗೂ ತಮಿಳು ನಾಡು ತಂಡಗಳು ಅಜೇಯವಾಗಿಯೇ ಫೈನಲ್ ಹಂತಕ್ಕೇರಿದ್ದವು. ಆದರೆ ಫೈನಲ್ ಪಂದ್ಯದಲ್ಲು ಬರೋಡಾ ತಂಡದ ಗೆಲುವಿನ ಸರಪಳಿಯನ್ನು ತುಂಡರಿಸುವಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಯಶಸ್ವಿಯಾಗಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಬರೋಡಾ ಆರಂಭದಿಂದಲೇ ಎಡವಿತ್ತು. ತಮಿಳುನಾಡು ಬೌಲರ್ಗಳ ದಾಳಿಯನ್ನು ಎದುರಿಸುವಲ್ಲಿ ವಿಫಲವಾದ ಬರೊಡಾ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಸೇರಿಕೊಳ್ಳಲಾರಂಭಿಸಿದ್ದರು. 36 ರನ್ ಗಳಿಸುವಷ್ಟರಲ್ಲಿ ತಂಡದ ಪ್ರಮುಖ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.
ಆದರೆ ಬಳಿಕ ವಿಷ್ಣು ಸೋಲಂಕಿಯ ಸಮಯೋಚಿತ ಆಟ ತಂಡಕ್ಕೆ ಬಲುದೊಡ್ಡ ಆಸರೆಯಾಯಿತು. ಆರಂಭದಲ್ಲಿ ಎಚ್ಚರಿಕೆಯಿಂದ ವಿಕೆಟ್ ಕಾಪಾಡಿಕೊಂಡ ವಿಷ್ಣು ಸೋಲಂಕಿ ಬಳಿಕ ತಂಡದ ರನ್ ಗತಿಯನ್ನು ಮೇಲಕ್ಕೇರಿಸುವ ಪ್ರಯತ್ನ ನಡೆಸಿದರು. ಸೋಲಂಕಿ ಅಮೂಲ್ಯ 49 ರನ್ಗಳ ಕೊಡುಗೆಯನ್ನು ನೀಡುವ ಮೂಲಕ ತಂಡದ ಮೊತ್ತ 120 ತಲುಪಿಸುವಲ್ಲಿ ಯಶಸ್ವಿಯಾದರು. ಅಂತಿಮ ಘಟ್ಟದಲ್ಲಿ ಎರಡು ರನ್ ಕದಿಯುವ ಪ್ರಯತ್ನದಲ್ಲಿ ಸೋಲಂಕಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಈ ಮೂಲಕ ತಮಿಳು ನಾಡು ಗೆಲ್ಲಲು 121 ರನ್ಗಳ ಸಾಮಾನ್ಯ ಗುರಿಯನ್ನು ಪಡೆಯಿತು.
ಈ ಗುರಿಯನ್ನು ತಮಿಳುನಾಡು ತಂಡ ಯಾವುದೇ ಆತಂಕವಿಲ್ಲದೆ ನಿರಾಯಾಸವಾಗಿ ತಲುಪಿತು. ಆರಂಭಿಕ ಆಟಗಾರ ಹರಿ ನಿಶಾಂತ್ 34 ರನ್ ಗಳಿಸಿದರೆ ಬಾಬಾ ಅಪರಾಜಿತ್ ಅಜೇಯ 29, ದಿನೇಶ್ ಕಾರ್ತಿಕ್ 22 ಹಾಗೂ ಶಾರೂಖ್ ಖಾನ್ ಮಿಂಚಿನ 18 ರನ್ಗಳನ್ನು ಬಾರಿಸಿ ಗೆಲುವನ್ನು ಸಾರಿದರು.