
ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಟಿ ನಟರಾಜನ್ ಐದು ತಿಂಗಳ ವಿರಾಮದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಐಪಿಎಲ್ನ ಎರಡನೇ ಚರಣದಲ್ಲಿ ಪಾಲ್ಗೊಳ್ಳಲು ಸಜ್ಜಾಗಿರುವ ನಟರಾಜನ್ ಯುಎಇನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಟೂರ್ನಿಗೆ ಸಿದ್ಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುತ್ತಿರುವುದು ಹರ್ಷವಾಗುತ್ತಿದೆ ಎಂದಿದ್ದಾರೆ.
ಐಪಿಎಲ್ 14ನೇ ಆವೃತ್ತಿಯ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ನಟರಾಜನ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಭಾಗವಹಿಸಿದ್ದರು. ಬಳಿಕ ಅವರಿಗೆ ಮೊಣಕಾಲಿನ ನೋವು ಬಾಧಿಸತೊಡಗಿತ್ತು. ಹೀಗಾಗಿ ಕೆಲ ಪಂದ್ಯಗಳಲ್ಲಿ ವಿಶ್ರಾಂತಿಯನ್ನು ಪಡೆದಿದ್ದ ನಟ್ಟು ಬಳಿಕ ಟೂರ್ನಿಯಿಂದಲೇ ಹೊರಗುಳಿದಿದ್ದರು. ಈ ವರ್ಷಾರಂಭದಲ್ಲಿ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೂ ಅವರು ಒಳಗಾಗಿದ್ದರು. ಇದೀಗ ಗಾಯದಿಂದ ನಟರಾಜನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಐಪಿಎಲ್ನ ಉಳಿದ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸವನ್ನು ಹೊಂದಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ ನಟರಾಜನ್ ವಾಪಾಸಾದ ಬಗ್ಗೆ ನೀಡಿದ ಪ್ರತಿಕ್ರಿಯೆಯನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ನಟರಾಜನ್ ತಮ್ಮ ಉತ್ಸುಕತೆಯನ್ನು ಹಂಚಿಕೊಂಡಿದ್ದಾರೆ. "ನಾನು ಐದು ತಿಂಗಳ ಬಳಿಕ ಮೈದಾನಕ್ಕೆ ಇಳಿಯುತ್ತಿದ್ದೇನೆ. ಶಸ್ತ್ರಚಿಕಿತ್ಸೆಗೂ ಒಳಗಾದ ಬಳಿಕ ಚೇತರಿಸಿಕೊಂಡಿದ್ದು ನನಗೆ ತುಂಬಾ ಸಂತೋಷವಾಗಿದೆ. ನಾನು ಬಹಳ ವಿರಾಮದ ನಂತರ ಆಡುತ್ತಿರುವ ಕಾರಣ ಈಗ ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ. ಈ ಅವಧಿಯಲ್ಲಿ ನಾನು ಸ್ವಲ್ಪ ಹತಾಶನಾಗಿದ್ದೆ. ಆದರೆ ಈಗ ನನಗೆ ಬಹಳಷ್ಟು ಸಂತೋಷವಾಗಿದೆ" ಎಂದಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಟಿ ನಟರಾಜನ್ ತಮ್ಮ ಚೇತರಿಕೆಗೆ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ ಬಹಳಷ್ಟು ಮಹತ್ವದ ಪಾತ್ರವಹಿಸಿತು ಎಂದಿದ್ದಾರೆ. "ನನ್ನ ಚೇತರಿಕೆಯಲ್ಲಿ ಎನ್ಸಿಎ ಎಲ್ಲಾ ಪಾತ್ರವನ್ನು ಕೂಡ ವಹಿಸಿತ್ತು. ಎನ್ಸಿಎನಲ್ಲಿ ಎಲ್ಲವೂ ಹಂತ ಹಂತವಾಗಿ ನಡೆದಿತ್ತು. ನನ್ನನ್ನು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ತಂದಿರಿಸಿದರು. ಅದು ನನ್ನ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿದೆ. ನಾನೀಗ ತುಂಬಾ ಸಂತೋಷಗೊಂಡಿದ್ದೇನೆ" ಎಂದಿದ್ದಾರೆ ಟಿ ನಟರಾಜನ್.
ಇನ್ನು ಸನ್ರೈಸರ್ಸ್ ತಂಡಕ್ಕೆ ಮರಳಿದ ಬಗ್ಗೆ ಮಾತನಾಡಿದ ನಟರಾಜನ್ ತಮ್ಮ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಪೂರಕವಾಗಿ ದೈಹಿಕ ಸಾಮರ್ಥ್ಯವನ್ನು ಗಳಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ. ಮಾನಸಿಕವಾಗಿ ತನ್ನನ್ನು ಸಿದ್ಧಪಡಿಸಿಕೊಂಡಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ನಟರಾಜನ್ ಆತ್ಮ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇನ್ನು ಶ್ರೀಮಂತ ಕ್ರಿಕೆಟ್ ಲೀಗ್ನ ಎರಡನೇ ಹಂತದಲ್ಲಿ ವೈಯಕ್ತಿಕ ಗುರಿಯ ಬಗ್ಗೆ ಕೇಳಿದ ಪ್ರಶ್ನೆಗೆ ನಟರಾಜನ್ "ತಾನು ಫಿಟ್ ಆಗಿದ್ದು ಮೈದಾನದಲ್ಲಿ ತಂಡಕ್ಕೆ ನೂರು ಪ್ರತಿಶತ ಸಾಮರ್ಥ್ಯದ ಪ್ರದರ್ಶನ ನೀಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
2016ರ ಐಪಿಎಲ್ ಟೂರ್ನಿಯ ಚಾಂಪಿಯನ್ ತಂಡವಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಯುಎಇ ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದೆ. ಸದ್ಯ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಟೂರ್ನಿಯಲ್ಲಿ ಭರ್ತಿ ಏಳು ಪಂದ್ಯಗಳು ಉಳಿದುಕೊಂಡಿದೆ. ಇದರಲ್ಲಿ ಪ್ಲೇಆಫ್ ಹಂತಕ್ಕೇರಬೇಕಾದರೆ ಕನಿಷ್ಠ ಆರು ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲವು ಸಾಧಿಸಲೇಬೇಕಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಮುಂದಿನ ಭಾಗದಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ದ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಟರ್ಸ್ ತಂಡವನ್ನು ಎದುರಿಸಲಿದೆ