
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ಗಾಯಗೊಂಡಿದ್ದು ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳಿದ ಹೊರಗುಳಿಯಲಿದ್ದಾರೆ. ಹೀಗಾಗಿ ನಟರಾಜನ್ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆಯುವ ಸಾಧ್ಯತೆಗಳು ಗೋಚರಿಸುತ್ತಿದೆ. ಸದ್ಯ ಟಿ ನಟರಾಜನ್ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರಾದರೂ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿಲ್ಲ.
ಬಾಕ್ಸಿಂಗ್ ಡೇ ಟೆಸ್ಟ್ನ ಮೂರನೇ ದಿನದಾಟದ ವೇಳೆಯಲ್ಲಿ ವಿದರ್ಭದ ವೇಗಿ ಉಮೇಶ್ ಯಾದವ್ ಮಂಡಿರಜ್ಜು ಸೆಳೆತಕ್ಕೆ ಒಳಗಾದರು. ಹೀಗಾಗಿ ಅವರು ಬಳಿಕ ಮೈದಾನಕ್ಕೆ ಇಳಿದಿರಲಿಲ್ಲ. ಸದ್ಯ ಅವರು ಸ್ಕ್ಯಾನಿಂಗ್ಗೆ ಒಳಗಾಗಿದ್ದು ವಿಶ್ರಾಂತಿಯಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಮೊದಲನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಬ್ಯಾಟಿಂಗ್ ವೇಳೆಯಲ್ಲಿ ಕೈಗೆ ಏಟು ಮಾಡಿಕೊಂಡಿದ್ದರು. ಹೀಗಾಗಿ ಸರಣಿಯಿಂದಲೇ ಹೊರಬಿದ್ದರು. ಇದೀಗ ಉಮೇಶ್ ಯಾದವ್ ಕೂಡ ಗಾಯಗೊಂಡಿರುವುದು ತಂಡದ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ಗೆ ಭಾರತ ಮೂರನೇ ಬೌಲರ್ನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ನಲ್ಲಿ ಶಾರ್ದೂಲ್ ಠಾಕೂರ್ ಅಥವಾ ನವ್ದೀಪ್ ಸೈನಿ ಕಣಕ್ಕಿಳಿಯಲಿದ್ದಾರೆ.
ಟೀಮ್ ಇಂಡಿಯಾ ಮೂಲಗಲ ಮಾಹಿತಿಯ ಪ್ರಕಾರ "ಉಮೇಶ್ ಯಾದವ್ ಸ್ಕ್ಯಾನಿಂಗ್ ವರದಿಗಳು ಬಂದಿದ್ದು ಅವರು ಮೂರು ಹಾಗೂ ನಾಲ್ಕನೇ ಟೆಸ್ಟ್ನಲ್ಲಿ ಪಾಳ್ಗೊಳ್ಳುವ ಸಾಧ್ಯತೆಯಿಲ್ಲ. ಅವರನ್ನು ಆಸ್ಟ್ರೇಲಿಯಾದಲ್ಲೇ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹೀಓಗಾಗಿ ಅವರು ಭಾರತಕ್ಕೆ ಬುಧವಾರ ಮರಳಲಿದ್ದು ಬಳಿಕ ಎನ್ಸಿಎನಲ್ಲಿ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿ ಪಾಳ್ಗೊಳ್ಳಲಿದ್ದಾರೆ" ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಏಕದಿನ ಹಾಗೂ ಟಿ20 ಮಾದರಿಗೆ ಪದಾರ್ಪಣೆ ಮಾಡಿದ ಟಿ ನಟರಾಜನ್ ಅವರನ್ನು ಮೂರನೇ ಟೆಸ್ಟ್ ವೇಳೆಗೆ ಟೆಸ್ಟ್ ತಂಡಕ್ಕೆ ಸೇರಿಸಿಕೊಲ್ಳುವ ಸಂಭವವಿದೆ. ಆದರೆ ಆಡುವ ಬಳಗದಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ಲಭ್ಯವಾಗಿದೆ.