ಶ್ರೀಲಂಕಾ ಒಡ್ಡಿದ್ದ 160ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ 19.5 ಓವರ್ ಗಳಲ್ಲಿ 160/8 ಸ್ಕೋರ್ ಮಾಡಿ ಜಯಭೇರಿ ಬಾರಿಸಿತು. ಕೊನೆ ಓವರ್ ನಲ್ಲಿ ಸಿಕ್ಸರ್ ಬಾರಿಸಿದ ಮಹಮ್ಮದುಲ್ಲಾ ಅವರು ಪಂದ್ಯದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದರು.
ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ಲಿಟೋನ್ ದಾಸ್ ಶೂನ್ಯಕ್ಕೆ ಔಟಾದರೂ, ತಮೀಮ್ ಇಕ್ಬಾಲ್ 42 ಎಸೆತಗಳಲ್ಲಿ 4 ಬೌಂಡರಿ, 2ಸಿಕ್ಸರ್ ಇದ್ದ 50ರನ್ ಚೆಚ್ಚಿದರು. ನಿರಂತರವಾಗಿ ವಿಕೆಟ್ ಕಳೆದುಕೊಂಡು ಆತಂಕದ ಕ್ಷಣ ಎದುರಿಸಿದರೂ ಪಂದ್ಯದ ಹೀರೋ ಆಗಿ ಮೆರೆದಿದ್ದು ಮಹಮ್ಮದುಲ್ಲಾ. 18 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 43ರನ್ ಗಳಿಸಿ ಅಜೇಯರಾಗಿ ತಂಡಕ್ಕೆ ಜಯ ತಂದಿತ್ತರು.
ಇದಕ್ಕೂ ಮುನ್ನ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಸಾಲು ಸಾಲಾಗಿ ಬಾಂಗ್ಲಾ ಆಟಗಾರರು ರನ್ ಔಟ್ ಆಗಿದ್ದರು. ಬೌನ್ಸರ್ ಎಸೆತದ ಬಗ್ಗೆ ಗೊಂದಲ ಮೂಡಿತು. ಮೈದಾನದಲ್ಲಿ ಬಾಂಗ್ಲಾ ಆಟಗಾರರು ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ಬಾಂಗ್ಲಾ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಬನ್ನಿ ಎಂದು ಶಕೀಬ್ ಉಲ್ ಹಸನ್ ಕರೆದಿದ್ದು ಆಯಿತು. ಪಂದ್ಯ ಮುಗಿದ ಬಳಿಕವೂ ಪರಸ್ಪರ ತಿಕ್ಕಾಟ ಮುಂದುವರೆಯಿತು. ಕೋಚ್ ಕಾರ್ಟ್ನಿ ವಾಲ್ಶ್, ಆಟಗಾರರನ್ನು ಸಮಾಧಾನ ಪಡಿಸಿದರು.
ಶ್ರೀಲಂಕಾ ಪರ ಅಕಿಲ ಧನಂಜಯ 2 ವಿಕೆಟ್ ಪಡೆದರೆ, ಅಪೊನ್ಸೋ, ಗುಣತಿಲಕ, ಮೆಂಡಿಸ್, ಉದಾನಾ ತಲಾ 1 ವಿಕೆಟ್ ಗಳಿಸಿದರು ಕೊನೆ ಓವರ್ ನಲ್ಲಿ ಇಸುರು ಉದಾನಾರಂಥ ಅನನುಭವಿಗೆ ಬೌಲಿಂ ಗ್ ನೀಡಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾಕ್ಕೆ ಕುಸಲ್ ಪೆರೆರಾ 61 ಹಾಗೂ ಥಿಸಾರಾ ಪೆರೆರಾ 58ರನ್ (37 ಎಸೆತ, 3 ಬೌಂಡರಿ, 3 ಸಿಕ್ಸರ್) ನೆರವಾದರು. 20 ಓವರ್ ಗಳಲ್ಲಿ 159/7 ಸ್ಕೋರ್ ಮಾಡಿತು.