ಅಸಾಧ್ಯ ಗುರಿ ನೀಡಿದ ಟೀಮ್ ಇಂಡಿಯಾ
ರಾಜ್ಕೋಟ್ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ಅಬ್ಬರದ ಪ್ರದರ್ಶನ ನೀಡಿತು. ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ ಬರೊಬ್ಬರಿ 228 ರನ್ಗಳನ್ನು ಗಳಿಸಲು ಶಕ್ತವಾಯಿತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಆರಂಭದಿಂದಲೇ ತಮ್ಮ ಎಂದಿನ ಶೈಲಿಯ ಆಕ್ರಮಣಕಾರಿ ಆಟಕ್ಕೆ ಮುಂದಾದರು. ರಾಜ್ಕೋಟ್ ಮೈದಾನದಲ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಸೂರ್ಯಕುಮಾರ್ ಕೇವಲ 45 ಎಸೆತದಲ್ಲಿ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಚುಟುಕು ಮಾದರಿಯಲ್ಲಿ ತಮ್ಮ ಮೂರನೇ ಶತಕ ಪೂರ್ಣಗೊಳಿಸಿದರು.
ಸೂರ್ಯ ಸ್ಫೊಟಕ ಶತಕ
ಈ ಪಂದ್ಯದಲ್ಲಿ ಒಟ್ಟು 51 ಎಸೆತ ಎದುರಿಸಿದ ಸೂರ್ಯಕುಮಾರ್ ಯಾದವ್ 7 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. 219ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿರುವ ಸೂರ್ಯ 112 ರನ್ಗಳಿಸಿ ಅಜೇಯವಾಗುಳಿದಿದ್ದಾರೆ. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಕೂಡ ಸ್ಪೋಟಕ ಆಟವಾಡುವ ಮೂಲಕ ತಂಡದ ಸ್ಕೋರ್ ಮತ್ತಷ್ಟು ಹೆಚ್ಚಲು ಕಾರಣವಾದರು. 9 ಎಸೆತ ಎದುರಿಸಿದ ಅಕ್ಷರ್ 21 ರನ್ಗಳಿಸಿ ಅಜೇಯವಾಗುಳಿದರು. ಉಳಿದಂತೆ ಶುಬ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಕೂಡ ಬ್ಯಾಟಿಂಗ್ನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಭಾರೀ ಅಂತರದಲ್ಲಿ ಶರಣಾದ ಶ್ರೀಲಂಕಾ
ಇನ್ನು ಟೀಮ್ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಶ್ರೀಲಂಕಾಗೆ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಆಘಾತ ನೀಡಿತು. ಮೊದಲ ವಿಕೆಟ್ಗೆ 44 ರನ್ಗಳ ಜೊತೆಯಾಟ ಲಂಕಾ ಪರವಾಗಿ ಬಂತಾದರೂ ಬಳಿಕ ಟೀಮ್ ಇಂಡಿಯಾ ಬೌಲರ್ಗಳು ಮೇಲುಗೈ ಸಾಧಿಸಿದರು. ಶ್ರೀಲಂಕಾ ದಾಂಡಿಗರು ಕ್ರೀಸ್ನಲ್ಲಿ ಹೆಚ್ಚು ಕಾಲ ನೆಲೆಯೂರದಂತೆ ಮಾಡುವಲ್ಲಿ ಭಾರತೀಯ ಬೌಲರ್ಗಳು ಯಶಸ್ವಿಯಾದರು. ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಮುಂದಾದ ಶ್ರೀಲಂಕಾ ಪರವಾಗಿ ಯಾವ ಆಟಗಾರ ಕೂಡ 30 ರನ್ಗಳ ಗಡಿ ದಾಟಲು ಕೂಡ ಸಾಧ್ಯವಾಗಲಿಲ್ಲ. ಕುಸಾಲ್ ಮೆಂಡಿಸ್ ಹಾಗೂ ನಾಯಕ ಶನಕ ತಲಾ 23 ರನ್ಗಳಿಸಿದ್ದು ಅತೀ ಹೆಚ್ಚಿನ ಸ್ಕೋರ್ ಎನಿಸಿಕೊಂಡಿತು. ಶ್ರೀಲಂಕಾ ದಾಂಡಿಗರ ವಿಕೆಟ್ ಕೀಳುತ್ತಲೇ ಸಾಗಿದ ಭಾರತೀಯ ಬೌಲಿಂಗ್ ವಿಭಾಗ 16.4 ಓವರ್ಗಳಲ್ಲಿ 137 ರನ್ಗಳಿಗೆ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿದೆ. ಈ ಮೂಲಕ ಈ ಪಂದ್ಯದಲ್ಲಿ 91 ರನ್ಗಳ ಗೆಲುವು ಸಾಧಿಸಿತು. ಟೀಮ್ ಇಂಡಿಯಾ ಪರವಾಗಿ ಅರ್ಶ್ದೀಪ್ ಸಿಂಗ್3 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಅಕ್ಷರ್ ಪಟೇಲ್ ಪಾಲಾಯಿತು. ಈ ಗೆಲುವಿನಿಂದಗೆ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ವಶಕ್ಕೆ ಪಡೆದುಕೊಂಡಿದೆ.
ಭಾರತ ಆಡುವ ಬಳಗ
ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಅವಿಷ್ಕಾ ಫರ್ನಾಂಡೋ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಭಾನುಕಾ ರಾಜಪಕ್ಸೆ,, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ