ಚೆನ್ನೈ: ಭರವಸೆಯ ಆಟಗಾರ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೂಪರ್ 8 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 72 ರನ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು. ಅಲ್ಲದೆ ರನ್ ರೇಟ್ ಸುಧಾರಿಸಿಕೊಳ್ಳುವಲ್ಲಿ ಸಫಲವಾಯಿತು. ಇನ್ನೇನಿದ್ದರೂ ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ದಾಖಲಿಸುವುದೇ ಸೂರ್ಯ ಪಡೆಯ ಗುರಿಯಾಗಿದೆ.

ಸವಾಲಿನ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಆರಂಭಿಕರಾದ ಬ್ರಿಯಾನ್ ಬೆನೆಟ್ ಹಾಗೂ ತದಿವನಾಶೆ ಮರುಮಾನಿ (20) ತಂಡಕ್ಕೆ 44 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಡಿಯೋನ್ ಮೈಯರ್ಸ್ (6) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 3ನೇ ವಿಕೆಟ್ಗೆ ಬ್ರಿಯಾನ್ ಬೆನೆಟ್ ಜೊತೆಗೂಡಿದ ನಾಯಕ ಸಿಕಂದರ್ ರಾಜಾ ತಂಡಕ್ಕೆ 42 ಎಸೆತಗಳಲ್ಲಿ 72 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ ಸಿಕಂದರ್ ರಾಜಾ 31 ರನ್ ಬಾರಿಸಿದ್ದಾಗ ಅರ್ಶದೀಪ್ ಸಿಂಗ್ ಎಸೆತದಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿದರು.
ಉಳಿದಂತೆ ಬೇರೆ ಯಾವ ಬ್ಯಾಟರ್ಗಳು ಸಹ ಬ್ರಿಯಾನ್ ಬೆನೆಟ್ ಅವರಿಗೆ ಉತ್ತಮ ಸಾಥ್ ನೀಡಲಿಲ್ಲ. ಬ್ರಿಯಾನ್ ಬೆನೆಟ್ 59 ಎಸೆತಗಳಲ್ಲಿ 8 ಬೌಂಡರಿ,6 ಸಿಕ್ಸರ್ ಸಹಾಯದಿಂದ ಅಜೇಯ 97 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಜಿಂಬಾಬ್ವೆ 20 ಓವರ್ಗಳಲ್ಲಿ 6 ವಿಕೆಟ್ಗೆ 184 ರನ್ ಸೇರಿಸಿ ಸೋಲ ಕಂಡಿತು. ಟೀಮ್ ಇಂಡಿಯಾ ಈ ಗೆಲುವಿನ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆಯುವ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.
ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲ ಬ್ಯಾಟ್ ಮಾಡಿತು. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಸಂಜು ಸ್ಯಾಮ್ಸನ್ 24 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್ ಕಿಶನ್ 24 ಎಸೆತಗಳಲ್ಲಿ 38 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಅಲ್ಲದೆ ಎರಡನೇ ವಿಕೆಟ್ಗೆ ಅಭಿಷೇಕ್ ಶರ್ಮಾ ಜೊತೆಗೂಡಿ 72 ರನ್ಗಳ ಜೊತೆಯಾಟವನ್ನು ನೀಡಿದರು.
ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಅಭಿಷೇಕ್ ಶರ್ಮಾ ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟಿದರು. ಇವರು 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಔಟ್ ಆದರು. ನಾಯಕ ಸೂರ್ಯಕುಮಾರ್ ಯಾದವ್ 33 ರನ್ ಸಿಡಿಸಿದರು.

5ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಜೊತೆಗೂಡಿ 31 ಎಸೆತಗಳಲ್ಲಿ ಅಜೇಯ 81 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದರೆ, ತಿಲಕ್ ವರ್ಮಾ ಅಜೇಯ 44 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ ಕಲೆ ಹಾಕಿತು.
ಟೀಮ್ ಇಂಡಿಯಾ ಸೂಪರ್ 8 ಹಂತದ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದ್ದು, ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಹಸಿರಾಗಿಟ್ಟಕೊಂಡಿದೆ.