ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಗೆದ್ದ ಭಾರತ ತಂಡವು ದೇಶಕ್ಕೆ ವಾಪಸ್ಸಾಗುತ್ತಿದ್ದಂತೆ ಅದ್ಧೂರಿ ಸ್ವಾಗತ ಸ್ವೀಕರಿಸಿದರು. ಇದೇ ವೇಳೆ ಭಾರತ ತಂಡದ ಆಟಗಾರರಿಗೆ ಭಾರೀ ಉಡುಗೊರೆ ಪಡೆಯುತ್ತಿದ್ದಾರೆ.
ಇದೀಗ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರು ಭಾರತೀಯ ಕ್ರಿಕೆಟ್ಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಮತ್ತು ವಿಶೇಷವಾಗಿ, ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅವರ ಪಾತ್ರಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮಂಗಳವಾರ, ಜುಲೈ 9ರಂದು ಪುರಸ್ಕರಿಸಿದ್ದಾರೆ.

ಕಳೆದ ವಾರ ಭಾರತ ತಂಡ ಟಿ20 ವಿಶ್ವಕಪ್ ಗೆಲುವಿನ ನಂತರ ತವರು ಹೈದರಾಬಾದ್ಗೆ ಮರಳಿದ ಮೊಹಮ್ಮದ್ ಸಿರಾಜ್, ಮುಖ್ಯಮಂತ್ರಿ ರೇವಂತ್ ರೆಡ್ಡಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಈ ವೇಳೆ ಸಿಎಂ ರೇವಂತ್ ರೆಡ್ಡಿ ಅವರು ಮೊಹಮ್ಮದ್ ಸಿರಾಜ್ ಅವರನ್ನು ಸನ್ಮಾನಿಸಿ, ಅವರ ಅಸಾಧಾರಣ ಪ್ರತಿಭೆಯನ್ನು ಶ್ಲಾಘಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಕರೆದರು.
ಮೊಹಮ್ಮದ್ ಸಿರಾಜ್ ಅವರು ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ತೆಲಂಗಾಣ ರಾಜ್ಯಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೊಗಳಿದರು.

"ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಮತ್ತು ನಮ್ಮ ತೆಲಂಗಾಣ ರಾಜ್ಯಕ್ಕೆ ಉತ್ತಮ ಕೀರ್ತಿ ತಂದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ. ಟಿ20 ವಿಶ್ವಕಪ್ ಗೆದ್ದು ಹೈದರಾಬಾದ್ಗೆ ಬಂದಿದ್ದ ಮೊಹಮ್ಮದ್ ಸಿರಾಜ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಿರಾಜ್ರನ್ನು ಸನ್ಮಾನಿಸಲಾಯಿತು," ಎಂದು ತೆಲಂಗಾಣ ಸಿಎಂಒ ಎಕ್ಸ್ (ಟ್ವಿಟ್ಟರ್) ಪೋಸ್ಟ್ಗೆ ಶೀರ್ಷಿಕೆ ನೀಡಿದೆ.
2024ರ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಪ್ರದರ್ಶನವನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಶ್ಲಾಘಿಸಿದರು. ರಾಜ್ಯ ಸರ್ಕಾರದ ಪರವಾಗಿ ಮೊಹಮ್ಮದ್ ಸಿರಾಜ್ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.
ಹೈದರಾಬಾದ್ ಅಥವಾ ಸಮೀಪದ ಪ್ರದೇಶದಲ್ಲಿ ಸೂಕ್ತ ನಿವೇಶನ ಹುಡುಕಲು ಮತ್ತು ಸರ್ಕಾರಿ ಉದ್ಯೋಗ ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
2024ರ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಸಿರಾಜ್ ಅವರ ಸಾಧನೆಗೆ ಶ್ಲಾಘನೆಯ ಸಂಕೇತವಾಗಿ, ತೆಲಂಗಾಣ ರಾಜ್ಯ ಸರ್ಕಾರವು ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಪುರಸ್ಕರಿಸಿ ಗೌರವಿಸುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ಮುಂಬೈನಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವದ ಮೆರವಣಿಗೆಯ ನಂತರ ಹೈದರಾಬಾದ್ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿದ ಮೊಹಮ್ಮದ್ ಸಿರಾಜ್, ಸಿಎಂ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಅವರ ಪುತ್ರ ಕೂಡ ಉಪಸ್ಥಿತರಿದ್ದರು.
ಟಿ20 ವಿಶ್ವಕಪ್ನ ಗುಂಪು ಹಂತದಲ್ಲಿ ಭಾರತದ ಆಡುವ 11ರ ಬಳಗದಲ್ಲಿದ್ದ ಮೊಹಮ್ಮದ್ ಸಿರಾಜ್, ನಂತರದ ಸೂಪರ್ 8 ಮತ್ತು ನಾಕೌಟ್ ಪಂದ್ಯಗಳಲ್ಲಿ ಬೆಂಚ್ ಕಾಯಿಸಬೇಕಾಯಿತು. ಅವರ ಬದಲಿಗೆ ಕುಲದೀಪ್ ಯಾದವ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು.