ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಜುಲೈ 4, ಗುರುವಾರದಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಬಾರ್ಬಡೋಸ್ನಿಂದ ಆಗಮಿಸಿದ ನಂತರ ಇಡೀ ಭಾರತ ತಂಡಕ್ಕೆ ಉಪಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆತಿಥ್ಯ ನೀಡಿದರು.

ಶನಿವಾರ, ಜೂನ್ 29ರಂದು 2024ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ನಂತರ, ಬೆರಿಲ್ ಚಂಡಮಾರುತ ಅಪ್ಪಳಿಸುವಿಕೆಯಿಂದಾಗಿ ಬಾರ್ಬಡೋಸ್ನಲ್ಲಿ ವಾಸ್ತವ್ಯ ವಿಸ್ತರಿಸಿದ ಬಳಿಕ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಮೂರು ದಿನಗಳ ತಡವಾಗಿ ಭಾರತಕ್ಕೆ ಮರಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿರುವುದು ದೊಡ್ಡ ಗೌರವ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ ಮತ್ತು ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯವು ಹಂಚಿಕೊಂಡ ದೃಶ್ಯಗಳಲ್ಲಿ, ಬ್ರೇಕ್ಫಾಸ್ಟ್ ಸೆಷನ್ನಲ್ಲಿ ವಿರಟ್ ಕೊಹ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.

ಪ್ರಧಾನಮಂತ್ರಿಯವರು ಟಿ20 ವಿಶ್ವ ಚಾಂಪಿಯನ್ಗಳ ಗೆಲುವಿನ ಸಂಭ್ರಮವನ್ನು ತೀವ್ರ ಆಸಕ್ತಿಯಿಂದ ಆಲಿಸಿದ್ದರಿಂದ ಇಡೀ ಸಭೆಯು ನಗುಮುಖವಾಗಿತ್ತು.
"ಇಂದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರನ್ನು ಭೇಟಿಯಾಗುವುದು ಎಂತಹ ದೊಡ್ಡ ಗೌರವ. ಪ್ರಧಾನಮಂತ್ರಿಗಳ ನಿವಾಸಕ್ಕೆ ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು ಸರ್," ಎಂದು ವಿರಾಟ್ ಕೊಹ್ಲಿ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಉಪಹಾರ ಸಮಯದ ನಂತರ ವಿರಾಟ್ ಕೊಹ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಹಸ್ತಲಾಘವ ಮಾಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಟ್ರೋಫಿಯನ್ನು ಹಿಡಿದಿರುವ ಫೋಟೋಗೆ ಪ್ರಧಾನಿ ನರೇಂದ್ರ ಮೋದಿ ಇಡೀ ಭಾರತೀಯ ಪಡೆಯೊಂದಿಗೆ ಪೋಸ್ ನೀಡಿದರು.
ಇದೇ ವೇಳೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಭಾರತ ತಂಡವನ್ನು ಹೆಚ್ಚಿನ ಯಶಸ್ಸನ್ನು ಸಾಧಿಸಲು ಪ್ರೋತ್ಸಾಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
ನಾಯಕ ರೋಹಿತ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರು ಉಪಹಾರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿ20 ವಿಶ್ವಕಪ್ ಅನುಭವವನ್ನು ಹಂಚಿಕೊಂಡವರಲ್ಲಿ ಸೇರಿದ್ದಾರೆ.
ನವದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಮುನ್ನ ಭಾರತ ಕ್ರಿಕೆಟ್ ತಂಡವು ನಂ. 7, ಲೋಕ ಕಲ್ಯಾಣ ಮಾರ್ಗದಲ್ಲಿ ಸುಮಾರು 90 ನಿಮಿಷಗಳ ಕಾಲ ಕಳೆದರು. ಅಲ್ಲಿಂದ ತಂಡವು ಸಂಜೆ ಅಭಿನಂದನಾ ಸಮಾರಂಭಗಳಿಗಾಗಿ ಮುಂಬೈಗೆ ಪ್ರಯಾಣಿಸಲಿದೆ.
ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಭಾರತೀಯ ಕ್ರಿಕೆಟಿಗರನ್ನು ಸ್ವಾಗತಿಸಿದರು. ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತರಕ್ಕೆ ಹಿಡಿದಿಟ್ಟುಕೊಂಡು ತಂಡದ ಬೆಂಬಲಿಗರಿಗೆ ಅದರ ನೋಟವನ್ನು ನೀಡಿದ ಕಾರಣ, ಮುಂಜಾನೆ ಮಳೆಯನ್ನು ಲೆಕ್ಕಿಸದೆ ನೆರೆದಿದ್ದ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ.
ವಿರಾಟ್ ಕೊಹ್ಲಿ ಅವರು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಗೆ ಕೈ ಬೀಸಿದರು ಮತ್ತು ನವದೆಹಲಿಯ ತಂಡದ ಹೋಟೆಲ್ನಲ್ಲಿ ತಮ್ಮ ಅಲ್ಪಾವಧಿಯ ಕಾಲ ತಂಗಿದ್ದಾಗ ಕೆಲವು ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಭಾರತ ಕ್ರಿಕೆಟ್ ತಂಡವು ಗುರುವಾರ ಸಂಜೆ ಮುಂಬೈನ ಮರೈನ್ ಡ್ರೈವ್ನಲ್ಲಿ ತೆರೆದ ಬಸ್ ಪರೇಡ್ ಶೋನಲ್ಲಿ ಭಾಗವಹಿಸಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಓಪನ್ ಟಾಪ್ ಬಸ್ ಗುರುವಾರ ಮಧ್ಯಾಹ್ನ ವಾಂಖೆಡೆ ಸ್ಟೇಡಿಯಂ ತಲುಪಿದೆ.
ವಿಜಯೋತ್ಸವದ ನಂತರ ನಡೆಯಲಿರುವ ಅಭಿನಂದನಾ ಸಮಾರಂಭಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಘೋಷಿಸಿದೆ. ಸಮಾರಂಭದಲ್ಲಿ ಭಾರತ ತಂಡಕ್ಕೆ 125 ಕೋಟಿ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸುವ ನಿರೀಕ್ಷೆಯಿದೆ.