ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ಮುಕ್ತಾಯಗೊಂಡ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಚಾಂಪಿಯನ್ ಭಾರತ ಕ್ರಿಕೆಟ್ ತಂಡ ಜುಲೈ 4ರಂದು ಬಾರ್ಬಡೋಸ್ನಿಂದ ತವರಿಗೆ ಆಗಮಿಸಲಿದೆ.
ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡ ಮತ್ತು ಭಾರತೀಯ ಕ್ರೀಡಾ ಪತ್ರಕರ್ತರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿದೆ.

ಭಾರತ ತಂಡವು ಜುಲೈ 4ರ ಗುರುವಾರ ಬೆಳಿಗ್ಗೆಯೇ ನವದೆಹಲಿಗೆ ಆಗಮಿಸಲಿದೆ. ಬಳಿಕ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಸಂಭ್ರಮಾಚರಣೆಗಾಗಿ ಮುಂಬೈಗೆ ತೆರಳುವ ಭಾರತ ತಂಡವು ಗುರುವಾರ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುತ್ತದೆ.
ವಿಶ್ವ ಚಾಂಪಿಯನ್ ಭಾರತ ತಂಡ ಮುಂಬೈನ ವಾಂಖೆಡೆ ಸ್ಟೇಡಿಯಂ ಬಳಿ ತೆರೆದ ಬಸ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಸಿಸಿಐ ಗುರುವಾರ ಬಿಡುವಿಲ್ಲದ ವೇಳಾಪಟ್ಟಿಯನ್ನು ಸಿದ್ಧ ಮಾಡಿದೆ. ನಂತರ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಸಣ್ಣ ಸಮಾರಂಭ ನಡೆಯಲಿದೆ.

2011ರ ನಂತರ ಐಸಿಸಿ ವಿಶ್ವಕಪ್ ಗೆಲುವಿಗಾಗಿ ಕಾತರದಿಂದ ಕಾಯುತ್ತಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನವದೆಹಲಿ ಮತ್ತು ಮುಂಬೈನಲ್ಲಿ ಭಾರತ ತಂಡವನ್ನು ಭೇಟಿಯಾಗುವ ಅವಕಾಶವಿದೆ.
* ಬಾರ್ಬಡೋಸ್ನಿಂದ ಆಗಮಿಸುವ ವಿಮಾನವು ಜೂನ್ 4ರ ಬೆಳಿಗ್ಗೆ 6 ಗಂಟೆಗೆ ನವದೆಹಲಿ ತಲುಪಲಿದೆ.
* ಬೆಳಿಗ್ಗೆ 9:30ಕ್ಕೆ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಟೀಮ್ ಇಂಡಿಯಾ ತೆರಳಲಿದೆ.
* ಪ್ರಧಾನಿ ಭೇಟಿಯಾದ ನಂತರ ಭಾರತ ತಂಡ ಮುಂಬೈಗೆ ಚಾರ್ಟರ್ಡ್ ವಿಮಾನ ಏರಲಿದ್ದಾರೆ.
* ಮುಂಬೈ ವಿಮಾನ ನಿಲ್ದಾಣದಿಂದ ವಾಂಖೆಡೆ ಕ್ರೀಡಾಂಗಣಕ್ಕೆ ಪ್ರಯಾಣ.
* ವಾಂಖೆಡೆ ಸ್ಟೇಡಿಯಂಗೆ 1 ಕಿ.ಮೀ ಉದ್ದದ ತೆರೆದ ಬಸ್ ಮೆರವಣಿಗೆ.
* ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ವಿಶ್ವಕಪ್ ಟ್ರೋಫಿ ಹಸ್ತಾಂತರಿಸುವ ಸಣ್ಣ ಕಾರ್ಯಕ್ರಮ.
* ಭಾರತ ತಂಡ ಗುರುವಾರ ಸಂಜೆ ವಾಂಖೆಡೆ ಸ್ಟೇಡಿಯಂನಿಂದ ಚದುರಲಿದೆ.
ಭಾರತ ತಂಡದ 2024ರ ಟಿ20 ವಿಶ್ವಕಪ್ ಟ್ರೋಫಿ ಗೆಲುವಿನ ನಂತರ, ಬೆರಿಲ್ ಚಂಡಮಾರುತದಿಂದಾಗಿ ಭಾರತೀಯ ಆಟಗಾರರು ಬಾರ್ಬಡೋಸ್ನಿಂದ ತೆರಳಲು ಸಾಧ್ಯವಾಗಲಿಲ್ಲ. ನಂತರ ಬೆರಿಲ್ ಗ್ರೇಡ್ 5 ಚಂಡಮಾರುತವಾಗಿ ಅಭಿವೃದ್ಧಿಗೊಂಡಿತು.
ಭಾರತ ತಂಡ ಮತ್ತು ಭಾರತೀಯ ಪತ್ರಕರ್ತರನ್ನು ವಿಪತ್ತಿನಿಂದ ಹೊರತರಲು ಬಿಸಿಸಿಐ ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಿದೆ. ಏರ್ ಇಂಡಿಯಾ ಬೋಯಿಂಗ್ 777 ವಿಮಾನವನ್ನು ಕಳುಹಿಸಲಾಗಿದ್ದು, ಅದು ಭಾರತ ತಂಡವನ್ನು ನೇರವಾಗಿ ತವರಿಗೆ ಕರೆತರಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 176 ರನ್ ಕಲೆಹಾಕಲು ವಿರಾಟ್ ಕೊಹ್ಲಿ ಅವರ 59 ಎಸೆತಗಳಲ್ಲಿ 76 ರನ್ಗಳು ನಿರ್ಣಾಯಕವಾಗಿದ್ದವು.
ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಂತಿಮ ಓವರ್ನಲ್ಲಿ ಭಾರತಕ್ಕೆ 16 ರನ್ಗಳನ್ನು ಯಶಸ್ವಿಯಾಗಿ ರಕ್ಷಿಸಿದರು.
ಇದರ ಪರಿಣಾಮವಾಗಿ, ರೋಚಕ ಫೈನಲ್ ಹಣಾಹಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಗೆಲುವು ಸಾಧಿಸಿತು ಮತ್ತು 11 ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿತು.
ಮೆನ್ ಇನ್ ಬ್ಲೂ ತಂಡವು 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದುಕೊಂಡಿತು ಮತ್ತು ಅಂದಿನಿಂದ ಐದು ಫೈನಲ್ಗಳಲ್ಲಿ ಸೋತಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಒತ್ತಡವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಇಡೀ ರಾಷ್ಟ್ರ ಸಂಭ್ರಮಿಸಲು ಸೋಲಿನ ದವಡೆಯಿಂದ ಪಾರಾಗಿ ಗೆಲುವನ್ನು ಕಸಿದುಕೊಂಡರು.
ಫೈನಲ್ನಲ್ಲಿ ಗೆಲ್ಲುವ ಮೂಲಕ ಬಾರ್ಬಡೋಸ್ನಲ್ಲಿ "ರಾಷ್ಟ್ರಧ್ವಜ ಏರಿಸಿದ' ಭರವಸೆಯಂತೆ ವಿಶ್ವ ಚಾಂಪಿಯನ್ ತಂಡದ ಮರಳುವಿಕೆಯನ್ನು ಇಡೀ ಭಾರತವೇ ಕಾಯುತ್ತಿದೆ.