ದೊಡ್ಡ ಹೆಸರಿದೆ ಎಂದು ಕೆಟ್ಟ ಆಟವಾಡುವ ಈ ಸ್ಟಾರ್ ಆಟಗಾರರಿಗೆ ಅವಕಾಶ ಕೊಡಬೇಡಿ: ಕಪಿಲ್ ದೇವ್

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಹೀನಾಯ ಸೋಲುಗಳನ್ನು ಅನುಭವಿಸಿ ಕಳಪೆ ಪ್ರದರ್ಶನವನ್ನು ನೀಡಿದೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ಇದೀಗ ಸೆಮಿಫೈನಲ್ ಪ್ರವೇಶಿಸುವುದರಲ್ಲಿಯೂ ಅನುಮಾನವನ್ನು ಮೂಡಿಸಿದೆ.
ಹೌದು, ಈ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದ್ದ ಟೀಂ ಇಂಡಿಯಾ ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ನಡೆದ ತನ್ನ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ಸಾಧ್ಯತೆಗಳು ಕಡಿಮೆಯಾಗುವ ಸತ್ಯ ತಿಳಿದಿದ್ದರೂ ಕೂಡ ಟೀಮ್ ಇಂಡಿಯಾ ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಲೇ ಇಲ್ಲ. ಹೀಗೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಟೀಮ್ ಇಂಡಿಯಾ ಇದೀಗ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ತನ್ನ ಮುಂದಿನ ಎಲ್ಲಾ 3 ಪಂದ್ಯಗಳಲ್ಲಿಯೂ ಬೃಹತ್ ಅಂತರದಲ್ಲಿ ಗೆಲ್ಲಬೇಕಿದೆ. ಅಷ್ಟೇ ಅಲ್ಲದೇ ನ್ಯೂಜಿಲೆಂಡ್ ತಂಡ ತನ್ನ ಮುಂದಿನ 3 ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯದಲ್ಲಿ ಸೋಲಲೇಬೇಕಾಗಿದೆ.
ಹೀಗೆ ಟೀಮ್ ಇಂಡಿಯಾ ಉಳಿದ ಎಲ್ಲಾ 3 ಪಂದ್ಯಗಳಲ್ಲಿಯೂ ಗೆದ್ದರೆ ಹಾಗೂ ನ್ಯೂಜಿಲೆಂಡ್ ತಂಡ ಯಾವುದಾದರೊಂದು ಪಂದ್ಯ ಸೋತರೆ ನೆಟ್ ರನ್ ರೇಟ್ ಆಧಾರದ ಮೇಲೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ. ಒಂದುವೇಳೆ ಇವುಗಳಲ್ಲಿ ಯಾವುದಾದರೊಂದು ಅಂಶ ನಡೆಯದೇ ಇದ್ದರೂ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಲಿದೆ. ಸದ್ಯ ಈ ರೀತಿಯ ಕಳಪೆ ಹಂತಕ್ಕೆ ತಲುಪಿರುವ ಟೀಮ್ ಇಂಡಿಯಾ ವಿರುದ್ಧ ಸಾಕಷ್ಟು ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿದ್ದು, ಇದೀಗ ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಈ ಕೆಳಕಂಡಂತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವುದು ನಿಜವಾದ ಗೆಲುವಲ್ಲ
ಈ ಮುಂಚೆಯೇ ಹೇಳಿದಂತೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು, ನ್ಯೂಜಿಲೆಂಡ್ ವಿರುದ್ಧ ಬೇರೆ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಹೀಗೆ ಅನ್ಯ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಆಧಾರದ ಮೇಲೆ ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬಹುದಾಗಿದ್ದು ಇದರ ಕುರಿತು ಕಪಿಲ್ ದೇವ್ ಆಕ್ರೋಶ ಹೊರಹಾಕಿದ್ದಾರೆ. "ನಾವು ಇತರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿದರೆ ಅದನ್ನು ಯಾವತ್ತಿಗೂ ಭಾರತ ಕ್ರಿಕೆಟ್ ಪ್ರಶಂಸಿಸುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನಿಮ್ಮ ಸ್ವಂತ ಆಟದಿಂದ ಸಾಧಿಸಿ. ಇತರರ ಮೇಲೆ ಅವಲಂಬಿತವಾಗುವುದು ಒಳ್ಳೆಯದಲ್ಲ" ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸ್ಟಾರ್ ಆಟಗಾರರ ಬದಲು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ
"ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರರ ಕಡೆ ಗಮನ ಹರಿಸಬೇಕಿದೆ. ಕೆಟ್ಟ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರ ಬದಲು ಯುವ ಆಟಗಾರರಿಗೆ ಅವಕಾಶಗಳನ್ನು ನೀಡಬೇಕಿದೆ. ಆ ಯುವ ಆಟಗಾರರು ಸೋತರೆ ಅವರಿಗೆ ಒಂದೊಳ್ಳೆ ಅನುಭವ ಸಿಗಲಿದೆ. ಆದರೆ ದೊಡ್ಡ ದೊಡ್ಡ ಹೆಸರುಗಳನ್ನು ಹೊಂದಿರುವ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ ದೊಡ್ಡ ಮಟ್ಟದ ಟೀಕೆಗಳು ಎದುರಾಗುತ್ತವೆ. ಹೀಗಾಗಿ ಬಿಸಿಸಿಐ ಈ ಕುರಿತು ಮಧ್ಯಪ್ರವೇಶಿಸಬೇಕಾದ ಅಗತ್ಯತೆ ಇದೆ" ಎಂದು ಕಪಿಲ್ ದೇವ್ ಹೇಳಿದ್ದಾರೆ.

ಟೂರ್ನಿಯಲ್ಲಿ ಸ್ಟಾರ್ ಆಟಗಾರರೆಲ್ಲಾ ಫ್ಲಾಪ್!
ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದಂತೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರೆಲ್ಲಾ ಮುಗ್ಗರಿಸಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ತಂಡದ ಬೇರೆ ಯಾವುದೇ ಸ್ಟಾರ್ ಆಟಗಾರ ಕೂಡ ಜವಾಬ್ದಾರಿಯುತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications