ಕೊಹ್ಲಿ ತನ್ನನ್ನು ಮಾತ್ರ ನೋಡಿಕೊಂಡರೆ ಆಗದು; ಧೋನಿ ಮೇಲೆ ಭಾರ ಹಾಕುವುದು ಸರಿಯಲ್ಲ: ಗವಾಸ್ಕರ್

ಕಳೆದ ಭಾನುವಾರದಿಂದ ( ಅಕ್ಟೋಬರ್ 17 ) ಆರಂಭವಾಗಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತು ಮುಕ್ತಾಯವಾಗಿದ್ದು ಇಂದಿನಿಂದ ( ಅಕ್ಟೋಬರ್ 23 ) ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುತ್ತಿವೆ.
ಟೂರ್ನಿಯಲ್ಲಿ ಈಗಾಗಲೇ 2 ಅಭ್ಯಾಸ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಭರವಸೆಯನ್ನು ಹುಟ್ಟು ಹಾಕಿದೆ. ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿರುವುದು ಸದ್ಯ ತಂಡದ ಮೇಲೆ ಭರವಸೆ ಹೆಚ್ಚುವಂತೆ ಮಾಡಿದೆ. ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ತಂಡದ ಬೌಲರ್ಗಳೂ ಸಹ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.
ಇನ್ನು ಬಿಸಿಸಿಐ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದಾಗ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತಂಡಕ್ಕೆ ಮಾರ್ಗದರ್ಶಕರನ್ನಾಗಿ ನೇಮಿಸಿದ್ದು ಆಟಗಾರರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ಟಿ ಟ್ವೆಂಟಿ ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಟ್ರೋಫಿಗಳನ್ನು ನಾಯಕನಾಗಿ ಗೆಲ್ಲಿಸಿಕೊಟ್ಟಿರುವ ಎಂಎಸ್ ಧೋನಿ ಅವರಿಗೆ ವಿಶ್ವಕಪ್ ಕುರಿತು ಹೆಚ್ಚಿನ ಜ್ಞಾನ ಮತ್ತು ಅನುಭವವಿದೆ. ಹೀಗಾಗಿಯೇ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿವುದರಿಂದ ವಿಶ್ವಕಪ್ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿರುವ ಆಟಗಾರರಿಗೆ ಒಳ್ಳೆಯ ಮಾರ್ಗದರ್ಶನ ಸಿಗಲಿದೆ ಎಂಬ ಅಭಿಪ್ರಾಯಗಳನ್ನು ಹಲವಾರು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು. ಅದರಂತೆಯೇ ಅಭ್ಯಾಸ ಪಂದ್ಯಗಳು ಆರಂಭವಾಗುವ ಮುನ್ನ ಟೀಮ್ ಇಂಡಿಯಾ ಕ್ಯಾಂಪ್ ಸೇರಿದ ಎಂಎಸ್ ಧೋನಿ ತಂಡದ ವಿವಿಧ ಆಟಗಾರರಿಗೆ ಮೈದಾನದಲ್ಲಿ ತರಬೇತಿ ನೀಡಿದ ದೃಶ್ಯಗಳು ಕಂಡುಬಂದವು.
ಒಂದೆಡೆ ವಿರಾಟ್ ಕೊಹ್ಲಿ ನಾಯಕತ್ವ, ಮತ್ತೊಂದೆಡೆ ಎಂಎಸ್ ಧೋನಿ ಮಾರ್ಗದರ್ಶನ ಇರುವುದರಿಂದ ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲಿದೆ ಎಂಬುದು ಹಲವರ ಊಹೆಯಾಗಿದೆ. ಆದರೆ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಎಂಎಸ್ ಧೋನಿ ಮಾರ್ಗದರ್ಶನದ ಕುರಿತು ಮಾತನಾಡಿದ್ದು ಈ ಕೆಳಕಂಡಂತೆ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದ್ದಾರೆ.

"ಮಾರ್ಗದರ್ಶಕನಾಗಿ ಎಂಎಸ್ ಧೋನಿ ಎಲ್ಲವನ್ನು ಸರಿಪಡಿಸಲಾಗುವುದಿಲ್ಲ"
"ಮಾರ್ಗದರ್ಶಕನಾಗಿ ಎಂಎಸ್ ಧೋನಿ ಹೆಚ್ಚಿನ ಕೆಲಸ ನಿರ್ವಹಿಸುವುದು ಕಷ್ಟ. ಟಿ ಟ್ವೆಂಟಿ ಪಂದ್ಯಗಳು ವೇಗವಾಗಿ ನಡೆಯುವುದರಿಂದ ಡ್ರೆಸಿಂಗ್ ರೂಮ್ನಲ್ಲಿ ಆಟಗಾರರಿಗೆ ಅಗತ್ಯವಿದ್ದ ಸಲಹೆಗಳನ್ನು ನೀಡಬಹುದೇ ಹೊರತು ಪಂದ್ಯದುದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡುವುದು ಅಸಾಧ್ಯ. ಇನ್ನುಳಿದಂತೆ ಟೈಮ್ ಔಟ್ ಸಂದರ್ಭದಲ್ಲಿ ಒಂದೆರಡು ನಿಮಿಷಗಳ ಕಾಲ ಎಂಎಸ್ ಧೋನಿ ಬೌಲರ್ಗಳ ಜೊತೆ ಚರ್ಚಿಸಬಹುದು ಬಿಟ್ಟರೆ ಫೀಲ್ಡ್ನಲ್ಲಿದ್ದು ಸಲಹೆ ನೀಡಲು ಆಗುವುದಿಲ್ಲ. ಹೀಗಾಗಿ ಆಟಗಾರರು ಒತ್ತಡವನ್ನು ಎದುರಿಸಿ ಯಾವ ರೀತಿ ಪ್ರದರ್ಶನ ನೀಡುತ್ತಾರೋ ಆ ರೀತಿಯ ಫಲಿತಾಂಶ ಸಿಗಲಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

"ನಾಯಕನಾದವನು ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಸಾಲದು"
"ನಾಯಕನಾದವನು ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಸಾಲುವುದಿಲ್ಲ. ಕೆಟ್ಟ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್ಮನ್ ಬಳಿ ಚರ್ಚೆಯನ್ನು ನಡೆಸಬೇಕು ಹಾಗೂ ಬೌಲರ್ಗಳ ಜೊತೆ ನಿರಂತರ ಚರ್ಚೆಯಲ್ಲಿದ್ದು ಪಂದ್ಯದ ಗೆಲುವಿಗೆ ಬೇಕಾದ ತಂತ್ರಗಳನ್ನು ಹೆಣೆಯಬೇಕು. ಇಷ್ಟೆಲ್ಲಾ ಜವಾಬ್ದಾರಿ ಇರುವ ನಾಯಕ ತನ್ನ ಫಾರ್ಮ್ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನಾಯಕತ್ವದ ಜವಾಬ್ದಾರಿ ಇಲ್ಲದೆ ಇರುವಾಗ ತನ್ನ ವೈಯಕ್ತಿಕ ಪ್ರದರ್ಶನವನ್ನು ತೋರಿಸಬಹುದು. ಹೀಗಾಗಿ ನನ್ನ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ನಾಯಕತ್ವದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ತನ್ನ ಫಾರ್ಮ್ ಬಗ್ಗೆ ಗಮನ ಕೊಡುವುದು ಉತ್ತಮ" ಎಂದು ವಿರಾಟ್ ಕೊಹ್ಲಿಗೆ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಸೂಪರ್ 12 ಸುತ್ತಿನಲ್ಲಿ ಭಾರತದ ಪಂದ್ಯಗಳು
ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೂಪರ್ 12 ಹಂತದಲ್ಲಿ ಕಣಕ್ಕಿಳಿಯಲಿರುವ ಪಂದ್ಯಗಳ ಪಟ್ಟಿ ಈ ಕೆಳಕಂಡಂತಿದೆ.
1. ಭಾರತ vs ಪಾಕಿಸ್ತಾನ - ಅಕ್ಟೋಬರ್ 24
2. ಭಾರತ vs ನ್ಯೂಜಿಲೆಂಡ್ - ಅಕ್ಟೋಬರ್ 31
3. ಭಾರತ vs ಅಫ್ಘಾನಿಸ್ತಾನ - ನವೆಂಬರ್ 3
4. ಭಾರತ vs ಸ್ಕಾಟ್ಲೆಂಡ್ - ನವೆಂಬರ್ 5
5. ಭಾರತ vs ನಮೀಬಿಯಾ - ನವೆಂಬರ್ 8
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications