
ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಟೀಮ್ ಇಂಡಿಯಾ ಈಗ ಸಜ್ಜಾಗುತ್ತಿದೆ. ಮೊದಲ ಪಂದ್ಯವನ್ನು ಭಾರತ ಸೋತಿರುವ ಕಾರಣದಿಂದಾಗಿ ಈ ಪಂದ್ಯ ಭಾರತವನ್ನು ಭಾರತ ಗೆಲ್ಲಲೇ ಬೇಕಿದೆ. ಮತ್ತೊಂದೆಡೆ ಎದುರಾಳಿ ನ್ಯೂಜಿಲೆಂಡ್ ತಂಡವೂ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕಾರಣದಿಂದಾಗಿ ಅದೇ ರೀತಿಯ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಮಾಡಬೇಕಾದ ಬದಲಾವಣೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೀಡಿರುವ ಸಲಹೆ ಗಮನಾರ್ಹವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆಯನ್ನು ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯದ ಇಬ್ಬರು ಆಟಗಾರರಿಗೆ ಸ್ಥಾನವನ್ನು ನೀಡುವುದು ಮುಖ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸುನಿಲ್ ಗವಾಸ್ಕರ್.
ಇಶಾನ್ ಕಿಶನ್, ಶಾರ್ದೂಲ್ ಠಾಕೂರ್ ಸೇರ್ಪಡೆಗೊಳಿಸಿ: ನ್ಯೂಜಿಲೆಂಡ್ ತಂಡದ ವಿರುದ್ಧದ ಪಂದ್ಯದಕ್ಕೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಯುವ ಆಟಗಾರ ಇಶಾನ್ ಕಿಶನ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಸೇರ್ಪಡೆಗೊಳಿಸಬೇಕೆಂದು ದಿಗ್ಗಜ ಆಟಗಾರ ಸಲಹೆ ನೀಡಿದ್ದಾರೆ. ಈ ಇಬ್ಬರು ಆಟಗಾರರು ಕ್ರಮವಾಗಿ ಹಾರ್ದಿಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನದಲ್ಲಿ ಆಡುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ ಗವಾಸ್ಕರ್.
ಹಾರ್ದಿಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಇಬ್ಬರು ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಅಂತರದಿಂದ ಭಾರೀ ಸೋಲು ಅನುಭವಿಸಿದೆ. ವಿಶ್ವಕಪ್ ವೇದಿಕೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಅನುಭವಿಸಿದ ಪ್ರಥಮ ಸೋಲು ಇದಾಗಿದೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹಾರ್ದಿಕ್ ಪಾಂಡ್ಯ 8 ಎಸೆತಗಳಲ್ಲಿ 11 ರನ್ಗಳಿಸಿ ಔಟಾದರೆ ಭುವನೇಶ್ವರ್ ಕುಮಾರ್ 3 ಓವರ್ಗಳ ಬೌಲಿಂಗ್ನಲ್ಲಿ 25 ರನ್ ನೀಡಿದ್ದರು. ಹೀಗಾಗಿ ಈ ಇಬ್ಬರ ಸ್ಥಾನಕ್ಕೆ ಇಶಾನ್ ಕಿಶನ್ ಹಾಗೂ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಸುನಿಲ್ ಗವಾಸ್ಕರ್.
ಉತ್ತಮ ಫಾರ್ಮ್ನಲ್ಲಿ ಇಶಾನ್, ಶಾರ್ದೂಲ್: ಇನ್ನು ಯುವ ಆಟಗಾರ ಇಶಾನ್ ಕಿಶನ್ ಹಾಗೂ ಶಾರ್ದೂಲ್ ಠಾಕೂರ್ ಅವರ ಇತ್ತೀಚಿನ ಫಾರ್ಮ್ ಅತ್ಯದ್ಭುತವಾಗಿದೆ. ಈ ಹಿಂದಿನ ಮೂರು ಇನ್ನಿಂಗ್ಸ್ಗಳಲ್ಲಿ ಇಶಾನ್ ಕಿಶನ್ ಅರ್ಧ ಶತಕವನ್ನು ಗಳಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 70 ರನ್ಗಳನ್ನು ಗಳಿಸಿರುವುದು ಗಮನಾರ್ಹ ಸಂಗತಿ. ಇನ್ನು ಶಾರ್ದೂಲ್ ಠಾಕೂರ್ ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 16 ಪಂದ್ಯಗಳ ಪೈಕಿ 21 ವಿಕೆಟ್ ಕಬಳಿಸಿ ಶಾರ್ದೂಲ್ ಠಾಕೂರ್ ಉತ್ತಮ ಫಾರ್ಮ್ನಲ್ಲಿರಿಉವುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯ ಶಾರ್ದೂಲ್ ಅವರಲ್ಲಿದೆ.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೆ ಇಶಾನ್ ಕಿಶನ್ ಉತ್ತಮ: "ಇನ್ನು ಭುಜದ ನೋವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವುದು ಅಸಾಧ್ತವಾದರೆ ಅವರ ಸ್ಥಾನವನ್ನು ಇಶಾನ್ ಕಿಶನ್ ತುಂಬುವುದು ಅತ್ಯಂತ ಸೂಕ್ತ. ಯಾಕೆಂದರೆ ಇಶಾನ್ ಕಿಶನ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ ಅವರನ್ನು ಭುವನೇಶ್ವರ್ ಸ್ಥಾನದಲ್ಲಿ ಆಡಿಸುವುದು ಸೂಕ್ತ. ಅದಲ್ಲದೆ ಹೆಚ್ಚಿನ ಬದಲಾವಣೆಯನ್ನು ಆಡುವ ಬಳಗದಲ್ಲಿ ಮಾಡಿದರೆ ತಂಡ ಗಾಬರಿಯಾಗಿದೆ ಎಂದು ಎದುರಾಳಿ ಭಾವಿಸುತ್ತದೆ" ಎಂದು ಸುನಿಲ್ ಗವಾಸ್ಕರ್ ಸಲಹೆಯಲ್ಲಿ ಹೇಳಿದ್ದಾರೆ.