ಐಸಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಬಾಬರ್ ಅಜಮ್ ಬದಲು ವಾರ್ನರ್ಗೆ ನೀಡಿದ್ದು ಈ ಬಲವಾದ ಕಾರಣಕ್ಕೆ!

ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್ 14ರ ಭಾನುವಾರದಂದು ನಡೆದ ಫೈನಲ್ ಪಂದ್ಯದ ಮೂಲಕ ಅಧಿಕೃತವಾಗಿ ತೆರೆಬಿದ್ದಿದೆ. ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ನವೆಂಬರ್ 14ರಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಇನ್ನು ನ್ಯೂಜಿಲೆಂಡ್ ತಂಡ ನೀಡಿದ 173 ರನ್ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 53 ರನ್ ಬಾರಿಸುವುದರ ಮೂಲಕ ಮತ್ತೊಮ್ಮೆ ಟೂರ್ನಿಯಲ್ಲಿ ಮಿಂಚು ಹರಿಸಿದರು. ನಂತರ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಭರ್ಜರಿ ಅಜೇಯ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ 18.5 ಓವರ್ಗಳಲ್ಲಿಯೇ ಗೆಲುವಿನ ಕೇಕೆ ಹಾಕಿತು. ಇನ್ನು ಈ ಪಂದ್ಯದಲ್ಲಿ ಅಬ್ಬರಿಸಿದ ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಡೇವಿಡ್ ವಾರ್ನರ್ ಸರಣಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಹೀಗೆ ಡೇವಿಡ್ ವಾರ್ನರ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವುದರ ಕುರಿತು ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಐಸಿಸಿ ಆಯ್ಕೆ ಸರಿಯಾಗಿದೆ ಡೇವಿಡ್ ವಾರ್ನರ್ ಈ ಪ್ರಶಸ್ತಿಗೆ ಅರ್ಹರು ಎಂದು ಬೆಂಬಲವನ್ನು ಸೂಚಿಸಿದರು. ಇನ್ನೂ ಮುಂತಾದವರು ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರಿಗಿಂತ ಹೆಚ್ಚಿನ ರನ್ ಬಾರಿಸಿರುವ ಬಾಬರ್ ಅಜಮ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕಾಗಿತ್ತು ಎಂದು ಐಸಿಸಿ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಕೂಡ ಮಾತನಾಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಹೆಚ್ಚಿನ ರನ್ ಬಾರಿಸಿದ್ದಕ್ಕಲ್ಲ, ತಂಡವನ್ನು ಗೆಲ್ಲಿಸಿದ್ದಕ್ಕಾಗಿ ವಾರ್ನರ್ ಸರಣಿಶ್ರೇಷ್ಠ ಪಡೆದರು
ಡೇವಿಡ್ ವಾರ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿರುವುದು ಕುರಿತು ಮಾತನಾಡಿರುವ ವಾಸಿಂ ಅಕ್ರಂ "ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವುದಿಲ್ಲ. ಯಾವ ಆಟಗಾರ ಟೂರ್ನಿಯುದ್ದಕ್ಕೂ ತನ್ನ ತಂಡಕ್ಕೋಸ್ಕರ ಪ್ರದರ್ಶನವನ್ನು ನೀಡುತ್ತಾನೋ ಅಂತಹ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ" ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯಾಗಿ ಹೇಳುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ಡೇವಿಡ್ ವಾರ್ನರ್ ಅವರಿಗಿಂತ ಹೆಚ್ಚಿನ ರನ್ ಬಾರಿಸಿದ್ದರೂ ಸಹ ಡೇವಿಡ್ ವಾರ್ನರ್ ತನ್ನ ತಂಡಕ್ಕೋಸ್ಕರ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಕಾರಣದಿಂದ ಆತನಿಗೆ ಸರಣಿಶ್ರೇಷ್ಠ ಲಭಿಸಿತು ಎಂಬುದನ್ನು ತಿಳಿಸಿದ್ದಾರೆ.

ಬಾಬರ್ ಅಜಮ್ ಅವರಿಗೆ ಸರಣಿಶ್ರೇಷ್ಠ ಸಿಗದೇ ಇದ್ದದ್ದು ಅನ್ಯಾಯ ಎಂದಿದ್ದ ಅಖ್ತರ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೇಬ್ ಅಖ್ತರ್ ಡೇವಿಡ್ ವಾರ್ನರ್ ಅವರಿಗೆ ಸರಣಿಶ್ರೇಷ್ಠ ಪ್ರಶಸ್ತಿ ಲಭಿಸಿದ ನಂತರ ಮಾತನಾಡಿದ್ದು ಐಸಿಸಿ ಆಯ್ಕೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ನಿಜಕ್ಕೂ ಬಾಬರ್ ಅಜಂ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನವಾಗುವುದನ್ನು ಎದುರು ನೋಡುತ್ತಿದ್ದೆ. ಖಂಡಿತಾ ಇದು ನ್ಯಾಯಯುವಲ್ಲದ ನಿರ್ಧಾರ" ಎಂದು ಟ್ವಿಟ್ಟರ್ನಲ್ಲಿ ಬರೆದು ಕೊಳ್ಳುವುದರ ಮೂಲಕ ಶೋಯೆಬ್ ಅಖ್ತರ್ ಡೇವಿಡ್ ವಾರ್ನರ್ ಬದಲು ಬಾಬರ್ ಅಜಮ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಾರ್ನರ್ ಪರ ಬ್ಯಾಟ್ ಬೀಸಿದ ಇರ್ಫಾನ್ ಪಠಾಣ್
ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ವಿಷಯದ ಕುರಿತಾಗಿ ಟ್ವೀಟ್ ಒಂದನ್ನು ಮಾಡಿ ಡೇವಿಡ್ ವಾರ್ನರ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆಟಗಾರನೊಬ್ಬ ಉತ್ತಮ ಪ್ರದರ್ಶನ ನೀಡುವುದೇ ಬೇರೆ, ಆಟಗಾರ ತನ್ನ ತಂಡಕ್ಕೊಸ್ಕರ ಅತ್ಯುತ್ತಮ ಪ್ರದರ್ಶನ ನೀಡುವುದೇ ಬೇರೆ. ಎರಡನ್ನೂ ಬೆರೆಸುವ ಕೆಲಸ ಮಾಡಬೇಡಿ. ಆಟಗಾರನೋರ್ವನಿಗೆ ತನ್ನ ತಂಡವೇ ಯಾವಾಗಲೂ ಮೊದಲನೇ ಆದ್ಯತೆಯಾಗಿರುತ್ತದೆ" ಎಂದು ಟ್ವೀಟ್ ಮಾಡುವ ಮೂಲಕ ಇರ್ಫಾನ್ ಪಠಾಣ್ ಡೇವಿಡ್ ವಾರ್ನರ್ ಅವರು ತಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಬೆಂಬಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications