
ಟಿ20 ವಿಶ್ವಕಪ್ನಲ್ಲಿ ಬುಧವಾರ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಬುಧವಾರ ಮುಖಾಮುಖಿಯಾಗಿದ್ದು ಈ ರೋಚಕ ಕದನದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಯಶಸ್ವಿಯಾಯಿತು. ಈ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಆದರೆ ಈ ಪಂದ್ಯ ಭಾರತದ ಪಾಲಿಗೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂಬುದು ನಿಜ. ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ನೀಡಿದ ಸ್ಪೋಟಕ ಬ್ಯಾಟಿಂಗ್ನಿಂದಾಗಿ ಭಾರತದ ಅಭಿಮಾನಿಗಳು ಸೋಲಿನ ಆತಂಕಕ್ಕೂ ಒಳಗಾಗಿದ್ದರು. ಆದರೆ ಅಂತಿಮವಾಗಿ ಟೀಮ್ ಇಂಡಿಯಾ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು 5 ರನ್ಗಳ ಅಂತರದ ರೋಚಕ ಗೆಲುವು ಸಾಧಿಸಿದೆ.
ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬಾಂಗ್ಲಾದೇಶ ತಂಡದ ಆಟಗಾರ ಲಿಟನ್ ದಾಸ್ ಅವರಿಗೆ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಅಂಶ ತಡವಾಗಿ ಬಹಿರಂಗವಾಗಿದೆ. ಅಡಿಲೇಡ್ ಓವಲ್ನಲ್ಲಿ ಪಂದ್ಯ ಮುಕ್ತಾಯವಾದ ಬಳಿಕ ತಮ್ಮ ಬ್ಯಾಟನ್ನು ಬಾಂಗ್ಲಾದೇಶದ ಪರವಾಗಿ ಮಿಂಚಿನ ಪ್ರದರ್ಶನ ನೀಡಿದ ಲಿಟನ್ ದಾಸ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯ ಕ್ರಿಕೆಟ್ ಚಟುವಟಿಕೆಗಳ ಮುಖ್ಯಸ್ಥ ಜಲಾಲ್ ಯೂನಸ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. "ನಾವೆಲ್ಲಾ ಡೈನಿಂ್ ಹಾಲ್ನಲ್ಲಿ ಕುಳಿತಿದ್ದಾಗ ವಿರಾಟ್ ಕೊಹ್ಲಿ ಅಲ್ಲಿಗೆ ಬಂದು ಲಿಟನ್ಗೆ ಬ್ಯಾಟನ್ನು ಉಡುಗೊರೆಯಾಗಿ ನೀಡಿದರು. ಇದು ಲಿಟನ್ ದಾಸ್ಗೆ ಸ್ಪೂರ್ತಿ ನೀಡುವ ವಿಶೇಷ ಸಂದರ್ಭವಾಗಿತ್ತು"ಎಂದು ಜಲಾಲ್ ಯೂನಸ್ ಹೇಳಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಆರಂಭದಲ್ಲಿ ಬ್ಯಾಟಿಂಗ್ ನಡೆಸಿತು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 30 ರನ್ಗಳ ಕೊಡುಗೆಯಿಂದಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 184 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಅತ್ಯಂತ ಸ್ಪೋಟಕ ಆರಂಭ ದೊರೆಯಿತು.
ಆರಂಭಿಕ ಆಟಗಾರ ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 60 ರನ್ ಬಾರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯವನ್ನು 16 ಓವರ್ಗಳಿಗೆ ಇಳಿಸಿದ್ದು ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಬಾಂಗ್ಲಾದೇಶಕ್ಕೆ 150 ರನ್ಗಳನ್ನು ಗಳಿಸುವ ಗುರಿ ನಿಗದಿಯಾಗಿತ್ತು. ಆದರೆ ಮಳೆ ನಿಂತು ಪಂದ್ಯ ಪುನಾರಂಭವಾದ ಬಳಿಕ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಅಂತಿಮವಾಗಿ ಭಾರತ ತಂಡ 5 ರನ್ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.