ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಮುಂಬರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ 15 ಸದಸ್ಯರ ಆಯ್ಕೆ ಕುರಿತು ನವದೆಹಲಿಯಲ್ಲಿ ಭಾನುವಾರ ಅನೌಪಚಾರಿಕ ಸಭೆಯನ್ನು ನಡೆಸುವ ನಿರೀಕ್ಷೆಯಿದೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೆ ತಂಡವನ್ನು ಸಲ್ಲಿಸುವ ಗಡುವು ದಿನಾಂಕವಾದ ಮೇ 1ರಂದು ಮುಂಬೈನಲ್ಲಿ ಭಾರತ ತಂಡವನ್ನು ಘೋಷಿಸುವ ಸಾಧ್ಯತೆ ಇದೆ.

ಐಪಿಎಲ್ 2024ರಲ್ಲಿ ಕೆಲವು ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿರುವುದರಿಂದ, ಆಯ್ಕೆ ಸಮಿತಿಗೆ ಭಾರತ ತಂಡದ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯುವ ತಂಡವನ್ನು ಆಯ್ಕೆ ಮಾಡಬೇಕೆ ಅಥವಾ ಮಿಶ್ರ ತಂಡವನ್ನು ಕಳಿಸಬೇಕೆ ಎಂಬ ಗೊಂದಲದಲ್ಲಿದೆ.
ಭಾರತ ತಂಡದ ಆರಂಭಿಕರ ಬಗ್ಗೆ ಚರ್ಚೆ ನಡೆಸಬೇಕಿದೆ. ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲು ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಹೆಸರು ಕೇಳಿಬರುತ್ತಿದ್ದರೂ, ಯಶಸ್ವಿ ಜೈಸ್ವಾಲ್ ಹೆಸರು ಅಂತಿಮವಾಗಲಿದೆ.
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಶನಿವಾರದ ಐಪಿಎಲ್ ಪಂದ್ಯಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ದೆಹಲಿಗೆ ತೆರಳಿದ್ದರು. ಟೀಮ್ ಇಂಡಿಯಾ ನಾಯಕ ರೋಹಿತ್ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅಂತಿಮ ತಂಡವನ್ನು ಆಯ್ಕೆ ಮಾಡಲು ತಮ್ಮ ಸಹ ಸದಸ್ಯರೊಂದಿಗೆ ಕುಳಿತುಕೊಳ್ಳುವ ಮೊದಲು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲಿದ್ದಾರೆ.

ಇದೇ ವೇಳೆ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಲವು ಸ್ಲಾಟ್ಗಳು ಚರ್ಚೆಗೆ ಬರುತ್ತವೆ. ಹೆಚ್ಚಿನ ಅಚ್ಚರಿಗಳು ಇರುವುದಿಲ್ಲ, ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್ಮೆಂಟ್ಗೆ ಮನವರಿಕೆ ಮಾಡಬೇಕಾದ ಏಕೈಕ ವಿಷಯವೆಂದರೆ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಫಿಟ್ನೆಸ್.
ಹಾರ್ದಿಕ್ ಪಾಂಡ್ಯ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದರೆ, ಸ್ಫೋಟಕ ಬ್ಯಾಟರ್ಗಳಾದ ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಬಹುದು. ಇನ್ನು ರಾಹುಲ್ ದ್ರಾವಿಡ್ ನೇತೃತ್ವದ ಪ್ರಸ್ತುತ ಕೋಚಿಂಗ್ ಸಿಬ್ಬಂದಿಯ ನೆಚ್ಚಿನವರಲ್ಲಿ ಒಬ್ಬರಾದ ಕೆಎಲ್ ರಾಹುಲ್ ತಮ್ಮ ಸಮೀಪದ ಸ್ಪರ್ಧಿ ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ.
ಎಡಗೈ ಆಟಗಾರರ ಆಯ್ಕೆಯ ಸಾಧ್ಯತೆ ತುಂಬಾ ಕಡಿಮೆ ಇದೆ ಮತ್ತು ಒಂದು ಆಯ್ಕೆ ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಆಗಿರಬಹುದು. ಐಪಿಎಲ್ 2024ರಲ್ಲಿ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ವಿಶ್ವಕಪ್ನಲ್ಲಿ ಎದುರಾಳಿ ತಂಡವು ಹೆಚ್ಚು ಎಡಗೈ ಆಟಗಾರರನ್ನು ಹೊಂದಿರುವ ಸಂದರ್ಭದಲ್ಲಿ ಆಫ್-ಸ್ಪಿನ್ ಬೌಲ್ ಮಾಡಬಹುದು.
ಇದೇ ವೇಳೆ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಮೂರನೇ ಸ್ಪಿನ್ನರ್ ಸ್ಥಾನಕ್ಕಾಗಿ ಹೋರಾಡುತ್ತಿರುವುದರಿಂದ ಅದು ಸಂಭವಿಸುವ ಸಾಧ್ಯತೆ ಎಷ್ಟಿದೆ ಎಂದು ಖಚಿತವಾಗಿಲ್ಲ.
ಭಾರತದ ಅತ್ಯಂತ ಕೌಶಲ್ಯಪೂರ್ಣ ವೈಟ್ಬಾಲ್ ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ಕೋಚಿಂಗ್ ಸ್ಟಾಫ್ನ ಪ್ರಭಾವಿ ಸದಸ್ಯರಿಗೆ ಆದ್ಯತೆಯ ಆಯ್ಕೆಯಾಗಿಲ್ಲ ಎಂದು ವರದಿಯಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಆಯ್ಕೆಯಾಗಲಿದ್ದರೂ, ಸಂದೀಪ್ ಶರ್ಮಾ, ಮಯಾಂಕ್ ಯಾದವ್, ಮುಕೇಶ್ ಕುಮಾರ್ ಹೆಸರುಗಳು ಚರ್ಚೆಗೆ ಬರಲಿವೆ. ಈ ಐಪಿಎಲ್ ಋತುವಿನಲ್ಲಿ ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ ಕಳಪೆ ಪ್ರದರ್ಶನ ನೀಡಿರುವುದು ಕಳವಳಕಾರಿಯಾಗಿದೆ.