ಜೂನ್ 13 ಗುರುವಾರ, ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಅತಿಥೇಯ ಅಮೆರಿಕಾ (ಜೂನ್ 11) ವಿರುದ್ಧ ಭಾರತ 7 ವಿಕೆಟ್ಗಳಿಂದ ಗೆದ್ದು ಸೂಪರ್-8 ಕ್ಕೆ ಎಂಟ್ರಿ ಕೊಟ್ಟಿದೆ.
ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಕೆಳ ಕ್ರಮಾಂಕದ ಬ್ಯಾಟರ್ಗಳಿಲ್ಲದೆ ಕೊನೆ ಕೊನೆಯಲ್ಲಿ ಪಂದ್ಯ ಸೋಲುವ ಪರಿಸ್ಥಿತಿಗೆ ತಲುಪಿತ್ತು. ಇದು ತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ಆದರೇ ಇದೀಗ ಟೀಮ್ ಇಂಡಿಯಾಕ್ಕೆ ಕೆಲ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಪಂದ್ಯವನ್ನು ಗೆಲ್ಲಿಸಿ ಕೊಡಬಲ್ಲ ವೇಗದ ಬೌಲರ್ ಇದ್ದಾರೆ.

ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಇತ್ತೀಚಿನ ದಿನಗಳಲ್ಲಿ ತಮ್ಮ ಬೌಲಿಂಗ್ನಿಂದ ಹಲವು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಆದರೆ ಇಷ್ಟಕ್ಕೆ ಮಾತ್ರ ಅರ್ಷದೀಪ್ ತೃಪ್ತರಾಗಿಲ್ಲ. ಅರ್ಷದೀಪ್ ಸಿಂಗ್ ಅವರು ವಿಶ್ವಾಸಾರ್ಹ ಕೆಳ ಕ್ರಮಾಂಕದ ಬ್ಯಾಟರ್ ಆಗಲು ಬಯಸುತ್ತಿದ್ದಾರೆ.
ಅದಕ್ಕಾಗಿ ಅರ್ಷದೀಪ್ ಅವರು ತಮ್ಮ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ನೆರವನ್ನು ಪಡೆಯುತ್ತಿದ್ದಾರೆ. ಅಮೆರಿಕ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 9 ರನ್ಗಳಿಗೆ ನಾಲ್ಕು ವಿಕೆಟ್ ಪಡೆದರು.
ಈ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಭಾರತಕ್ಕೆ ಸತತ ಮೂರನೇ ಜಯವಾಗಿದ್ದು, ಈ ಮೂಲಕ ಸೂಪರ್-8ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಅರ್ಷದೀಪ್ ಸಿಂಗ್, 'ನಾವು ಯಾವಾಗಲೂ ಹೊಸದನ್ನು ಕಲಿಯಲು ಪ್ರಯತ್ನಿಸುತ್ತೇವೆ. ಬೌಲಿಂಗ್, ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಆಗಿರಲಿ ನಾವು ಎಲ್ಲಾ ವಿಭಾಗಗಳಲ್ಲಿ ಉತ್ತಮವಾಗಿರಲು ಪ್ರಯತ್ನಿಸುತ್ತೇವೆ.
ಏಕೆಂದರೆ ತಂಡಕ್ಕೆ ನಮ್ಮಿಂದ ಕೆಲವು ರನ್ಗಳು ಯಾವಾಗ ಬೇಕು ಎಂದು ನಿಮಗೆ ತಿಳಿದಿಲ್ಲ. ಇದು ಎರಡು ಅಥವಾ ನಾಲ್ಕು ರನ್ ಆಗಿರಬಹುದು. ಆದ್ದರಿಂದ ನಾವು ನಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕು. ನನ್ನ ಬ್ಯಾಟಿಂಗ್ಗೆ ಸಂಬಂಧಿಸಿದಂತೆ, ನಾನು ವಿಕ್ರಮ್ ಭಾಯ್ ಅವರೊಂದಿಗೆ ಸಾಧ್ಯವಾದಷ್ಟು ಶ್ರಮಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಜೂನ್ 9 ರಂದು ಪಾಕಿಸ್ತಾನದ ವಿರುದ್ಧ 9ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅರ್ಷದೀಪ್ ಸಿಂಗ್ 13 ಎಸೆತಗಳಲ್ಲಿ 9 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಎಡಗೈ ವೇಗದ ಬೌಲರ್ ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲು ಬ್ಯಾಟಿಂಗ್ಗೆ ಇಳಿಸುವಂತೆ ವಿನಂತಿಸಿದ್ದರು ಎಂಬುದು ಪಂದ್ಯ ನಂತರ ತಿಳಿದು ಬಂದಿದೆ.
ಸ್ವತಃ ಈ ಕುರಿತು ಪ್ರತಿಕ್ರಿಯಿಸಿರುವ ಅರ್ಷದೀಪ್ ಸಿಂಗ್, 'ನನಗಿಂತ ಮೊದಲು ಜಸ್ಸಿ ಭಾಯ್ ಬ್ಯಾಟಿಂಗ್ಗೆ ಬರಬೇಕಿತ್ತು. ಆದರೆ ರೋಹಿತ್ ಅವರು ಹೇಳಿದ ನಂತರ ನಾನು ಮೊದಲು ಹೋದೆ. ಇದರಿಂದ ಅವರು ಆಶ್ಚರ್ಯಚಕಿತರಾದರು.
ಆದರೆ ನೀವು ಏನು ಹೇಳಿದರೂ ನಾನು ಮೊದಲು ಬ್ಯಾಟಿಂಗ್ಗೆ ಹೋಗುತ್ತೇನೆ ಎಂದು ಹೇಳಿದೆ. ನನ್ನ ಬ್ಯಾಟಿಂಗ್ನಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಪರಿಸ್ಥಿತಿಗೆ ಹೊಂದಿಕೊಳ್ಳುವುದು ಯಶಸ್ಸಿಗೆ ಬಹಳ ಮುಖ್ಯ ಎಂದಿದ್ದಾರೆ.
ಫ್ಲೋರಿಡಾದ ಲಾಡರ್ಹಿಲ್ನಲ್ಲಿ ಭಾರತ ತಂಡ ಕೆನಡಾ ವಿರುದ್ಧ ಎ ಗುಂಪಿನ ಕೊನೆಯ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಸೂಪರ್- 8ರ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್ ಗೆ ತೆರಳಲಿದೆ.