ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ಆರಂಭವಾಗಲಿರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಪ್ರಾಥಮಿಕ ತಂಡಗಳನ್ನು ಪ್ರಕಟಿಸಲು ಮೇ 1 ಅಂತಿಮ ಗಡುವು ಆಗಿದ್ದು, ಈಗಾಗಲೇ ನ್ಯೂಜಿಲೆಂಡ್ ತಮ್ಮ ತಂಡವನ್ನು ಪ್ರಕಟಿಸಿದೆ.
ಇದೀಗ ಎಲ್ಲ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕಣ್ಣುಗಳು ಭಾರತ ತಂಡದ ಆಯ್ಕೆ ಮೇಲೆ ನೆಟ್ಟಿದ್ದು, ಯಾರಿಗೆಲ್ಲಾ ಯುಎಸ್ಎ ವಿಮಾನದ ಟಿಕೆಟ್ ಪಡೆಯಲಿದ್ದಾರೆ ಎಂಬುದಕ್ಕೆ ಕ್ಷಣಗಣನೆ ಶುರುವಾಗಿದೆ. ಮಂಗಳವಾರದ ಸಭೆಯ ನಂತರ ಬಿಸಿಸಿಐ ತಂಡವನ್ನು ಹೆಸರಿಸುವ ನಿರೀಕ್ಷೆಯಿದೆ.

ಹೌದು. ಅಹಮದಾಬಾದ್ನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆಯ ನಂತರ ಮಂಗಳವಾರ, ಏಪ್ರಿಲ್ 30ರಂದು 2024ರ ಐಸಿಸಿ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗುವುದು.
ಇತ್ತೀಚಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭೇಟಿಯಾಗಿದ್ದರು ಎಂದು ವರದಿಯಾಗಿದೆ.
ಭಾರತ ಅಂತಿಮ ತಂಡವನ್ನು ಆಯ್ಕೆ ಮಾಡಲು ತಮ್ಮ ಸಹ ಆಯ್ಕೆಗಾರರೊಂದಿಗೆ ಕುಳಿತುಕೊಳ್ಳುವ ಮೊದಲು, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಲು ಮತ್ತು ಹೆಚ್ಚಿನ ಸ್ಪಷ್ಟತೆ ಪಡೆಯಲು ಅವಕಾಶ ಸಿಗುತ್ತದೆ ಎಂದು ಅಜಿತ್ ಅಗರ್ಕರ್ ನವದೆಹಲಿಯಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದೆ.

ಭಾರತ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆಗೆ ಒಳಪಡುವ ಕೆಲವು ಸ್ಥಾನಗಳಿವೆ. ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಟಿ20 ವಿಶ್ವಕಪ್ ತಂಡದ ವಿಕೆಟ್ ಕೀಪರ್ ಸ್ಥಾನವು ಚರ್ಚೆಯ ದೊಡ್ಡ ವಿಷಯವಾಗಿದೆ.
ಈ ಮೂವರು ಆಟಗಾರರು ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಪಂದ್ಯಾವಳಿಯ ತಲಾ 350ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಭಾರತ ತಂಡದಲ್ಲಿ ಆದ್ಯತೆಯ ವಿಕೆಟ್ ಕೀಪರ್ ಅಗಿ ರಿಷಭ್ ಪಂತ್ ಸ್ಥಾನ ಪಡೆಯಲಿದ್ದರೆ, ಎರಡನೇ ವಿಕೆಟ್ಕೀಪರ್ ಸ್ಥಾನಕ್ಕಾಗಿ ಕೆಎಲ್ ರಾಹುಲ್ ಅವರು ಸಂಜು ಸ್ಯಾಮ್ಸನ್ಗಿಂತ ಮುಂದಿದ್ದಾರೆ ಎಂದು ವರದಿಯಾಗಿದೆ.
ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಐವರು ಬೌಲರ್ಗಳಾಗಿದ್ದಾರೆ.
ಮೇಲಿನ ಐದು ಆಟಗಾರರಲ್ಲಿ ಐಪಿಎಲ್ 2024ರ ಅಭಿಯಾನದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಮಾತ್ರ ಉತ್ತಮ ಫಾರ್ಮ್ನಲ್ಲಿದ್ದಾರೆ. ಅರ್ಷ್ದೀಪ್, ಸಿರಾಜ್ ಮತ್ತು ಜಡೇಜಾ ಅವರಿಂದ ಇನ್ನೂ ಸ್ಥಿರ ಪ್ರದರ್ಶನ ಕಂಡುಬಂದಿಲ್ಲ.
ಆದರೆ, ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಹೆಚ್ಚುವರಿ ಬೌಲರ್ ಸ್ಥಾನಕ್ಕಾಗಿ ಅವೇಶ್ ಖಾನ್, ರವಿ ಬಿಷ್ಣೋಯ್ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಆಲ್ರೌಂಡರ್ ಹಾಗೂ ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮವಾದ ಪ್ರದರ್ಶನ ನೀಡಿಲ್ಲ. ಅವರ ಕಳಪೆ ಫಾರ್ಮ್ ರಾಷ್ಟ್ರೀಯ ಆಯ್ಕೆ ಸಮಿತಿಗೆ ಆತಂಕಕಾರಿಯಾಗಿದೆ ಎಂದು ಹೇಳಬಹುದು.
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆಡಿದ 9 ಪಂದ್ಯಗಳಲ್ಲಿ 197 ರನ್ ಗಳಿಸಿದ್ದು, ಗರಿಷ್ಠ ಸ್ಕೋರ್ 46 ರನ್ಗಳಾಗಿವೆ. ಇದೇ ವೇಳೆ ಶಿವಂ ದುಬೆ ಅವರು ಸಿಎಸ್ಕೆ ತಂಡದ ಪರ ಆಡಿದ 9 ಪಂದ್ಯಗಳಲ್ಲಿ 350 ರನ್ ಗಳಿಸಿ ಬ್ಯಾಟಿಂಗ್ನೊಂದಿಗೆ ಅದ್ಭುತ ಫಾರ್ಮ್ನಲ್ಲಿದ್ದಾರೆ.