ಜೂನ್ 30 ಭಾನವಾರ, 2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಗೆಲುವಿನ ಬಳಿಕ ಇಡೀ ದೇಶವು ಸಂಭ್ರಮಾಚರಣೆಯಲ್ಲಿ ಮುಳುಗಿದೆ. ತಡರಾತ್ರಿ ತ್ರಿವರ್ಣ ಧ್ವಜ ಹಿಡಿದು ರಸ್ತೆಗಳಲ್ಲಿ ಜಮಾಯಿಸಿದ ಜನರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಫೈನಲ್ ಪಂದ್ಯದ ನಂತರ ರಾತ್ರಿ ದೇಶದ ಹಲವು ನಗರಗಳಲ್ಲಿ ಈ ದೃಶ್ಯ ಕಂಡು ಬಂದಿತು. 2013ರಿಂದ ಅಭಿಮಾನಿಗಳು ಈ ಸಂಭ್ರಮಾಚರಣೆಕ್ಕಾಗಿ ಕಾಯುತ್ತಿದ್ದರು. ಇದೀಗ ಟೀಮ್ ಇಂಡಿಯಾ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದಿದೆ.

ಆದರೆ ಈ ಸಂಭ್ರಮದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಡೆ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ ಬ್ರೇಕ್ ಹಾಕಿ ಕೊನೆ ಓವರ್ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ಟೀಮ್ ಇಂಡಿಯಾಗೆ ಗೆಲುವು ತಂದು ಕೊಟ್ಟ ಹಾರ್ದಿಕ್ ಪಾಂಡ್ಯ ಅವರಿಗೆ ರೋಹಿತ್ ಶರ್ಮಾ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ.
ಏಕೆಂದರೆ 2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯಗೆ ವಹಿಸಲಾಗಿತ್ತು. ಇದಾದ ಬಳಿಕ ಹಾರ್ದಿಕ್ ಮತ್ತು ರೋಹಿತ್ ನಡುವೆ ಉತ್ತಮ ಬಾಂಧವ್ಯವಿದ್ದರೂ, ಹಿಟ್ಮ್ಯಾನ್ ಅಭಿಮಾನಿಗಳು ಪಾಂಡ್ಯರನ್ನು ಕಿಚಾಯಿಸುತ್ತಿದ್ದರು.
ಇದನ್ನು ಮಾತ್ರ ಹಾರ್ದಿಕ್ ಪಾಂಡ್ಯ ನಯವಾಗಿಯೇ ಸ್ವೀಕರಿಸುತ್ತದ್ದರು. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿತ್ತು. ಅಲ್ಲದೆ, ಹಾರ್ದಿಕ್ ಪಾಂಡ್ಯ ಕೂಡ ನಾಯಕತ್ವದ ವೈಫಲ್ಯ ಅನುಭವಿಸಿದ್ದರು.
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಸನಿಹದಲ್ಲಿತ್ತು. ಇದಕ್ಕಾಗಿ ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ಗಳ ಬೇಕಿದಾಗ ಹಾರ್ದಿಕ್ ಪಾಂಡ್ಯ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದರು.
ಕೊನೆಯ ಓವರ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ (17 ಎಸೆತಗಳಲ್ಲಿ 21 ರನ್) ವಿಕೆಟ್ ಪಡೆದು ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು. ಇದರೊಂದಿಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳಿಂದ ಗೆದ್ದು ಎರಡನೇ ಟಿ20 ವಿಶ್ವಕಪ್ ಎತ್ತಿ ಹಿಡಿಯಲು ಪಾಂಡ್ಯ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನ ಸಂತಸದಲ್ಲಿ ಇದ್ದ ರೋಹಿತ್ ಶರ್ಮಾ ಅವರ ಕಣ್ಣಲ್ಲಿ ನೀರು ಕಂಡು ಬಂತು. ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯ ಅವರನ್ನು ರೋಹಿತ್ ಅಪ್ಪಿಕೊಂಡು ಮುತ್ತಿಟ್ಟರು.
ಪಂದ್ಯದ ನಂತರ ಹಾರ್ದಿಕ್ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸ್ಟಾರ್ ಸ್ಪೋರ್ಟ್ಸ್ಗೆ ಭಾವನಾತ್ಮಕ ಸಂದರ್ಶನ ನೀಡುತ್ತಿದ್ದಾಗ ಈ ದೃಶ್ಯ ಕಂಡುಬಂದಿತು. ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಗೆಲುವಿನ ಖುಷಿಯ ನಡುವೆಯೇ ಹಾರ್ದಿಕ್ ಹತ್ತಿರ ಬಂದು ತಬ್ಬಿ ಕೆನ್ನೆಗೆ ಮುತ್ತಿಟ್ಟರು.