ಜೂನ್ 11 ಮಂಗಳವಾರ, 2024ರ ಐಸಿಸಿ ಟಿ20 ವಿಶ್ವಕಪ್ನ 21ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಸೋತಿದೆ. ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹರಿಣಗಳ ಪಡೆ 4 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ.
ಈ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡು ತಪ್ಪು ನಿರ್ಧಾರಗಳು ಮತ್ತು ವಿವಾದಾತ್ಮಕ ಡಿಆರ್ಎಸ್ ನಿಯಮದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಸೋತಿದೆಯೇ ಎಂಬ ಚರ್ಚೆ ನಡೆಯುತ್ತಿದೆ.

ಬಾಂಗ್ಲಾದೇಶ ಪಂದ್ಯ ಗೆಲ್ಲಲು 24 ಎಸೆತಗಳಲ್ಲಿ 27 ರನ್ ಗಳಿಸಬೇಕಿತ್ತು. ಜೊತೆಗೆ 6 ವಿಕೆಟ್ಗಳು ಉಳಿದಿದ್ದವು. ಇಂತಹ ಪರಿಸ್ಥಿಯಲ್ಲಿ ಎಲ್ಲರೂ ಬಾಂಗ್ಲಾ ಗೆಲ್ಲುತ್ತದೆ ಎಂದುಕೊಂಡಿದ್ದರು.
17ನೇ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಒಟ್ನೀಲ್ ಬಾರ್ಟ್ಮನ್ ಬೌಲಿಂಗ್ ಮಾಡಲು ಬಂದಾಗ, ಮಹಮ್ಮದುಲ್ಲಾ ಮತ್ತು ತೌಹೀದ್ ಹೃದಯ ಕ್ರೀಸ್ನಲ್ಲಿದ್ದರು. ಬಾರ್ಟ್ಮನ್ ಅವರ ಎರಡನೇ ಎಸೆತದಲ್ಲಿ ಮಹಮ್ಮದುಲ್ಲಾ ಫ್ಲಿಕ್ ಶಾಟ್ ಅನ್ನು ತಪ್ಪಿಸಿಕೊಂಡರು.
ಪರಿಣಾಮ ಚೆಂಡು ಅವರ ಪ್ಯಾಡ್ಗೆ ತಾಗಿ ಬೌಂಡರಿಯಿಂದ ಹೊರ ಹೋಗಿತ್ತು. ಆದರೆ, ಅಂಪೈರ್ ಸ್ಯಾಮ್ ನೊಗಾಜ್ಸ್ಕಿ ಮಹಮ್ಮದುಲ್ಲಾ ಅವರನ್ನು ಎಲ್ಬಿಡಬ್ಲ್ಯೂ ಎಂದು ಔಟ್ ನೀಡಿದರು.
ಈ ವೇಳೆ ಬಾಂಗ್ಲಾದೇಶ ಮೂರನೇ ಅಂಪೈರ್ ಬಳಿ ಹೋದರು. ಬಾಲ್ ಟ್ರ್ಯಾಕಿಂಗ್ ಚೆಂಡು ಲೆಗ್ ಸ್ಟಂಪ್ಗೆ ತಪ್ಪಿಹೋಗುತ್ತಿರುವುದನ್ನು ಮೂರನೇ ಅಂಪೈರ್ ತೋರಿಸಿದರು. ಇದರಿಂದಾಗಿ ಮೈದಾನದಲ್ಲಿದ್ದ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಿದರು.
ಅಂಪೈರ್ ನಿರ್ಧಾರವನ್ನು ರದ್ದುಗೊಳಿಸಿದರೂ ಬಾಂಗ್ಲಾದೇಶದ ಖಾತೆಗೆ 4 ರನ್ ಸೇರ್ಪಡೆಯಾಗಲಿಲ್ಲ. ಹೊಸ ನಿಯಮಗಳ ಪ್ರಕಾರ, ಬಾಂಗ್ಲಾದೇಶದ ಒಟ್ಟು ಸ್ಕೋರ್ಗೆ ಲೆಗ್-ಬೈ ಬೌಂಡರಿಗಳನ್ನು ಸೇರಿಸಲಿಲ್ಲ. ಏಕೆಂದರೆ ಅಂಪೈರ್ ಔಟ್ ನೀಡಿದಾಗ ಬಾಲ್ ಡೆಡ್ ಎಂದು ಪರಿಗಣಿಸಲ್ಪಟ್ಟಿತು.
ನಿರ್ಧಾರವನ್ನು ರದ್ದುಗೊಳಿಸಿದರೂ ಸ, ಈ ಡೆಡ್ ಬಾಲ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ ಲೆಗ್-ಬೈ 4 ರನ್ ಸಿಗಲಿಲ್ಲ. ಇದರಿಂದಾಗಿ ತಂಡ ಸೋಲನುಭವಿಸಬೇಕಾಯಿತು. ಈ ನ್ಯೂನತೆಯ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಮಾಜಿ ಬ್ಯಾಟರ್ ವಾಸಿಂ ಜಾಫರ್ ಅವರು ಕೂಡ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಪಂದ್ಯದ ವಿವಾದಾತ್ಮಕ ಅಂಪೈರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮಹ್ಮದುಲ್ಲಾ ಅವರನ್ನು ತಪ್ಪಾಗಿ ಎಲ್ಬಿಡಬ್ಲ್ಯೂ ನೀಡಲಾಯಿತು. ಚೆಂಡು 4 ರನ್ಗಳಿಗೆ ಲೆಗ್-ಬೈ ಮೂಲಕ ಹೋಯಿತು.
ಬಳಿಕ ಡಿಆರ್ಎಸ್ನಲ್ಲಿ ಅಂಪೈರ್ ನಿರ್ಧಾರವನ್ನು ರದ್ದುಗೊಳಿಸಲಾಯಿತು. ಆದರೆ ಬಾಂಗ್ಲಾದೇಶ 4 ರನ್ ಗಳಿಸಲಿಲ್ಲ. ಏಕೆಂದರೆ ಒಮ್ಮೆ ಬ್ಯಾಟರ್ ಔಟ್ ನೀಡಿದ ಬಾಲ್ ಡೆಡ್ ಆಗಿದೆ.
ಅದು ತಪ್ಪಾಗಿದ್ದರೂ ಸಹ, ದಕ್ಷಿಣ ಆಫ್ರಿಕಾ ಪಂದ್ಯವನ್ನು 4 ರನ್ಗಳಿಂದ ಗೆದ್ದುಕೊಂಡಿತು. ಬಾಂಗ್ಲಾದೇಶದ ಅಭಿಮಾನಿಗಳಿಗೆ ದುಃಖಕರವಾಗಿದೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.