ಜೂನ್ 10 ಸೋಮವಾರ, 2024ರ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಮೋಘ ಜಯ ದಾಖಲಿಸಿದೆ. ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡಿದರು.
ಪಂತ್ 31 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 135.48 ಸ್ಟ್ರೈಕ್ ರೇಟ್ನೊಂದಿಗೆ 42 ರನ್ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಪಂತ್ ಅವರ ಇನ್ನಿಂಗ್ಸ್ನಿಂದಾಗಿ ಭಾರತ 119 ರನ್ಗಳ ಸ್ಕೋರ್ ತಲುಪಲು ಸಾಧ್ಯವಾಯಿತು.

ಇದಾದ ಬಳಿಕ ಭಾರತ ನೀಡಿದ 120 ರನ್ ಗಳ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟುತ್ತಿದ್ದಾಗ ರಿಷಬ್ ಪಂತ್ ಅತ್ಯುತ್ತಮ ವಿಕೆಟ್ ಕೀಪಿಂಗ್ ಮಾಡಿ 3 ಅದ್ಭುತ ಕ್ಯಾಚ್ ಗಳನ್ನು ಹಿಡಿದರು. ಹೀಗಾಗಿ ಪಾಕ್ ವಿರುದ್ಧ ಭಾರತ ಗೆಲ್ಲುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದ್ದರು.
ಈ ರೋಚಕ ಪಂದ್ಯದಲ್ಲಿ ಭಾರತ 6 ರನ್ಗಳಿಂದ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ರಿಷಬ್ ಪಂತ್ ಆಟಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾ ಮಾಜಿ ಕೋಚ್ ಹಾಗು ದಿಗ್ಗಜ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ರಿಷಬ್ ಪಂತ್ ಪ್ರದರ್ಶನಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ.
ಪಂದ್ಯ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ರಿಷಬ್ ಪಂತ್ ಅವರಿಗೆ ಭಾರತ ತಂಡದಿಂದ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ನೀಡಲಾಯಿತು. ರವಿಶಾಸ್ತ್ರಿ ಅವರಿಂದ ಪಂತ್ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯನ್ನು ನೀಡುವಾಗ ರಿಷಬ್ ಬಗ್ಗೆ ರವಿಶಾಸ್ತ್ರಿ ಗುಣಗಾನ ಮಾಡುವುದರ ಜೊತೆಗೆ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.

ರಿಷಬ್ ಪಂತ್ ರಸ್ತೆ ಅಪಘಾತದ ಬಗ್ಗೆ ಓದಿದಾಗ ನನ್ನ ಕಣ್ಣಲ್ಲಿ ನೀರು ಬಂತು. ನಾನು ಆಸ್ಪತ್ರೆಯಲ್ಲಿ ನೋಡಿದಾಗ ಪಂತ್ ಪರಿಸ್ಥಿತಿ ಅತ್ಯಂತ ಭಯಾನಕವಾಗಿತ್ತು. ಆದರೆ ಪಾಕಿಸ್ತಾನ ಮತ್ತು ಭಾರತದಂತಹ ದೊಡ್ಡ ಒತ್ತಡದ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದ ಪಂತ್ ಮರಳಿ ಬಂದಿದ್ದಾರೆ.
ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ನಲ್ಲಿ ಪಂತ್ ಏನು ಮಾಡಬಹುದು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಪರೇಷನ್ ಮುಗಿಸಿ ಇಲ್ಲಿಗೆ ಬಂದು ಈ ರೀತಿ ಸಾಧನೆ ಮಾಡಿರುವುದು ಅವರಿಗೆ ಖುಷಿ ತಂದಿದೆ. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ರವಿಶಾಸ್ತ್ರಿ ತಮ್ಮ ನೆಚ್ಚಿನ ಆಟಗಾರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.