ಜೂನ್ 1ರಿಂದ ಜೂನ್ 29ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ಕಾತರರಾಗಿದ್ದಾರೆ.
ಇದೇ ವೇಳೆ ಐಸಿಸಿ ಟಿ20 ಪಂದ್ಯಾವಳಿಗೆ ತಂಡಗಳ ಪ್ರಕಟ, ತಂಡಗಳ ಸಿದ್ಧತೆ ಮತ್ತು ಕಾರ್ಯತಂತ್ರಗಳು ವಿಶ್ವದಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2007ರ ನಂತರ ಮತ್ತೊಮ್ಮೆ ಟಿ20 ವಿಶ್ವಕಪ್ ಟ್ರೋಫಿ ಎತ್ತಲು ಎದುರು ನೋಡುತ್ತಿದೆ.

ಭಾರತ ತಂಡವು 2024ರ ಟಿ20 ವಿಶ್ವಕಪ್ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ, ಸಹ-ಆತಿಥೇಯ ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
2007ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಐಸಿಸಿ ಟಿ20 ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದೆ.
ಇದೇ ವೇಳೆ 2024ರ ಟಿ20 ವಿಶ್ವಕಪ್ ಆರಂಭವಾಗಲು ಒಂದು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ, ಭಾರತ ಕ್ರಿಕೆಟ್ ತಂಡದ ಹೊಸ ಜೆರ್ಸಿ ಸಾಮಾಜಿಕ ಮಾಧ್ಯಮದಲ್ಲಿ 'ಸೋರಿಕೆ'ಯಾಗಿದೆ ಎಂದು ವರದಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಶ್ವಕಪ್ ಟೂರ್ನಿಗಾಗಿ ಭಾರತದ ಹೊಸ ಕಿಟ್ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿವೆ. ಲೀಕ್ ಆದ ಫೋಟೋದಲ್ಲಿ ಟೀಮ್ ಇಂಡಿಯಾ ಜೆರ್ಸಿ ವಿ-ಆಕಾರದ ಕುತ್ತಿಗೆಯ ಮೇಲೆ ತ್ರಿವರ್ಣದ ಪಟ್ಟಿಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಕೇಸರಿ ತೋಳುಗಳ ಮೇಲೆ, ಕ್ರೀಡಾ ಉಡುಪುಗಳ ಪ್ರಾಯೋಜಕ ಅಡಿಡಾಸ್ನ ಸಾಂಪ್ರದಾಯಿಕ ಮೂರು ಬಿಳಿ ಪಟ್ಟಿಗಳನ್ನು ಕಾಣಬಹುದು.
ಭಾರತ ತಂಡದ ಹೊಸ ಕಿಟ್ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿರುವುದು ಇದೇ ಮೊದಲೇನಲ್ಲ. ಆದರೆ ಇಂತಹ ಬಿಡುಗಡೆಗಳನ್ನು ಸಾಮಾನ್ಯವಾಗಿ ಅಧಿಕೃತ ಚಾನೆಲ್ಗಳ ಮೂಲಕ ಮಾಡುವುದರಿಂದ ಈ ರೀತಿ ಸೋರಿಕೆಯಾಗುವುದು ದೊಡ್ಡ ಹಿನ್ನಡೆಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ, ಏಪ್ರಿಲ್ 30ರಂದು 2024ರ ಟಿ20 ವಿಶ್ವಕಪ್ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿತು. ಇದೇ ವೇಳೆ ತಂಡದೊಂದಿಗೆ 4 ಮೀಸಲು ಆಟಗಾರರನ್ನು ಸಹ ಹೆಸರಿಸಿದೆ.
ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯುಜ್ವೇಂದ್ರ ಚಹಾಲ್ ಭಾರತ ತಂಡಕ್ಕೆ ನಿರೀಕ್ಷಿತವಾಗಿ ಪುನರಾಗಮನ ಮಾಡಿದರು. ಇನ್ನು ಪ್ರಮುಖ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್ ಅವರನ್ನು 15 ಆಟಗಾರರ ಪಟ್ಟಿಯಿಂದ ಹೊರಗಿಡಲಾಯಿತು. ಅದರಲ್ಲಿಯೂ ರಿಂಕು ಸಿಂಗ್ ಅವರನ್ನು ಹೊರಗಿಟ್ಟಿದ್ದು ದೊಡ್ಡ ಅಪಘಾತವಾಗಿತ್ತು.
ನಾಲ್ಕು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ಅವರನ್ನು ವೇಗದ ಬೌಲಿಂಗ್ ರೂಪದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ.
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್