ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದು, ತಮ್ಮ ದಶಕದ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಎದುರು ನೋಡುತ್ತಿದೆ.
ಇದೇ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 2026ರ ಟಿ20 ವಿಶ್ವಕಪ್ವರೆಗೆ ಮುಂದುವರಿಯಲು ಸಾಕಷ್ಟು ಫಿಟ್ ಆಗಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ಬುಧವಾರ, ಜೂನ್ 5ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಭಾರತ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿದೆ.
ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಶೋನಲ್ಲಿ ಮಾತನಾಡುತ್ತಾ, ವಿರಾಟ್ ಕೊಹ್ಲಿ ಇನ್ನೂ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಮಾಜಿ ನಾಯಕ ಅದನ್ನು ಸಾಧಿಸಲು ಗಮನಹರಿಸಿದ್ದಾರೆ ಎಂದು ಹೈಲೈಟ್ ಮಾಡಿದರು.
1983ರ ಏಕದಿನ ವಿಶ್ವಕಪ್ ವಿಜೇತ ಮಾಜಿ ಆರಂಭಿಕ ಕ್ರಿಸ್ ಶ್ರೀಕಾಂತ್, ವಿರಾಟ್ ಕೊಹ್ಲಿಯ ಕ್ರಿಕೆಟ್ ವೃತ್ತಿಜೀವನದ ದೀರ್ಘಾಯುಷ್ಯವನ್ನು ಊಹಿಸುವ ಸಂದರ್ಭದಲ್ಲಿ ಅವರ ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಒಂದು ತಂಡವಾಗಿ (ರೋಹಿತ್ ಮತ್ತು ಕೊಹ್ಲಿ) ಒಟ್ಟಾಗಿ ಟಿ20 ವಿಶ್ವಕಪ್ ಗೆಲ್ಲಲು ಇದು ಅವರಿಗೆ ಕೊನೆಯ ಅವಕಾಶವೇ ಎಂದು ಕೇಳಿದರೆ, ಬಹುಶಃ ಹೌದು ಎನ್ನುತ್ತೇನೆ. ನೆನಪಿನಲ್ಲಿಡಿ, 2026ರ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಆದ್ದರಿಂದ ಪ್ರತಿಯೊಬ್ಬರೂ ಭಾರತದಲ್ಲಿ ಆಡಲು ಬಯಸುತ್ತಾರೆ".
"ನನ್ನ ಮಟ್ಟಿಗೆ ಹೇಳುವುದಾದರೆ, ವಿರಾಟ್ ಕೊಹ್ಲಿ ಹೊಂದಿರುವ ಫಿಟ್ನೆಸ್, ಅವರು 2026ರವರೆಗೆ ಸುಲಭವಾಗಿ ಆಡಬಹುದು. ಹಾಗಾಗಿ 2026ರ ಟಿ20 ವಿಶ್ವಕಪ್ ವಿರಾಟ್ಗೆ ಕೊನೆಯದಾಗಿರಬಹುದು. ಕೊಹ್ಲಿಗೆ ಇದು ಕೊನೆಯ ಅವಕಾಶವಲ್ಲ. ಆದರೆ ಅವರು ಇನ್ನೂ ಟಿ20 ವಿಶ್ವಕಪ್ ಗೆದ್ದಿಲ್ಲದ ಕಾರಣ ತುಂಬಾ ಉತ್ಸುಕರಾಗಿದ್ದಾರೆ," ಎಂದು ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್ ಶ್ರೀಕಾಂತ್ ಅಭಿಪ್ರಾಯಪಟ್ಟರು.
2023ರ ಏಕದಿನ ವಿಶ್ವಕಪ್ ಫೈನಲ್ ಹೃದಯವಿದ್ರಾವಕ ಸೋಲಿನ ಆರೇಳು ತಿಂಗಳ ನಂತರ, ಭಾರತವು ಟಿ20 ವಿಶ್ವಕಪ್ ಪಂದ್ಯಾವಳಿಗೆ ತೆರಳಿದೆ. ರೋಹಿತ್ ಮತ್ತು ಕೊಹ್ಲಿ ಟಿ20 ಸ್ವರೂಪದಲ್ಲಿ ಕಿರಿಯ ಆಟಗಾರರಿಗೆ ಅವಕಾಶ ಮಾಡಿಕೊಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರಿಬ್ಬರೂ ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಟಿ20 ಸ್ವರೂಪಕ್ಕೆ ಮರಳಿದರು.
ಏಕದಿನ ವಿಶ್ವಕಪ್ಗೆ ತಯಾರಿ ನಡೆಸಲು ಕಳೆದ ವರ್ಷ ಹಿರಿಯ ಆಟಗಾರರು ಟಿ20 ಪಂದ್ಯಗಳಿಂದ ದೂರ ಉಳಿದಿದ್ದರು. ಅವರು ಯಾವಾಗಲೂ ಶಿಬಿರದಲ್ಲಿದ್ದಾರೆ ಎಂದು ರೋಹಿತ್ ಶರ್ಮಾ ದೃಢಪಡಿಸಿದ್ದರು.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರನ್ನು ನಾಯಕರನ್ನಾಗಿ ಭಾರತ ಪ್ರಯತ್ನಿಸಿತು. ಆದರೆ, ಅನುಭವಿ ಆರಂಭಿಕ ಬ್ಯಾಟರ್ ತಂಡವನ್ನು ಮುನ್ನಡೆಸಲು ತಂಡಕ್ಕೆ ಮರಳಿದರು.
ಇದೇ ವೇಳೆ, 2007ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದ ರೋಹಿತ್ ಶರ್ಮಾ, ಭಾರತದೊಂದಿಗೆ ನಾಯಕನಾಗಿ ಐಸಿಸಿ ಟ್ರೋಫಿ ಗೆಲ್ಲಲು ಉತ್ಸುಕರಾಗಿದ್ದಾರೆ ಮತ್ತು ಏಕದಿನ ವಿಶ್ವಕಪ್ ಸೋಲಿನ ನಂತರ, ಅವರು ಹೆಚ್ಚು ದೃಢವಾಗಿ ಇರುತ್ತಾರೆ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದರು.
"ರೋಹಿತ್ ಶರ್ಮಾ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದಾರೆ. ಅವರು ಏಕದಿನ ವಿಶ್ವಕಪ್ ಟ್ರೋಫಿಯನ್ನು ತುಂಬಾ ಬಯಸಿದ್ದರು, ಆದರೆ ಫೈನಲ್ನಲ್ಲಿ ಅದನ್ನು ತಪ್ಪಿಸಿಕೊಂಡರು. ನಾಯಕನಾಗಿ ಭಾರತಕ್ಕೆ ಗೆಲ್ಲಬೇಕು ಎಂದು ಇದೀಗ ಟಿ20 ವಿಶ್ವಕಪ್ನತ್ತ ನೋಡುತ್ತಿದ್ದಾರೆ".
"ನಾಯಕನಾಗಿ ವಿಶ್ವಕಪ್ ಗೆಲ್ಲುವುದು ದೊಡ್ಡ ವಿಷಯ. ಅದಕ್ಕಾಗಿಯೇ ಎಂಎಸ್ ಧೋನಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅವರು ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ ತನಗಿಂತ ಹೆಚ್ಚಾಗಿ ತಂಡಕ್ಕಾಗಿ ಮತ್ತು ದೇಶಕ್ಕಾಗಿ ಗೆಲ್ಲಲು ಉತ್ಸುಕನಾಗಿದ್ದಾನೆ, ಅದನ್ನೇ ನಾನು ಹೇಳಲು ಪ್ರಯತ್ನಿಸುತ್ತಿದ್ದೇನೆ," ಎಂದು ಕ್ರಿಸ್ ಶ್ರೀಕಾಂತ್ ತಿಳಿಸಿದರು.