2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹೊರಬಿದ್ದ ನಂತರ, ಮಿನಿ-ವಿರಾಮ ತೆಗೆದುಕೊಂಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 2024ರ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಭಾರತ ತಂಡದ ಏಕೈಕ ಅಭ್ಯಾಸ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.
ಜೂನ್ 1ರಂದು ನ್ಯೂಯಾರ್ಕ್ನಲ್ಲಿ ನಡೆಯುವ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಶನಿವಾರ, ಮೇ 25ರಂದು ಮುಂಬೈನಿಂದ ಭಾರತ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ಯುಎಸ್ಎ ಪ್ರಯಾಣ ಬೆಳೆಸಿತು. ಆದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಕೆಲವು ಸ್ಟಾರ್ಗಳು ಶನಿವಾರ ಮುಂಬೈನಿಂದ ಹೊರಡುವ ನಿರೀಕ್ಷೆಯಿತ್ತು. ಆಟಗಾರರು ಯುಎಸ್ಎಗೆ ತೆರಳುವ ಮೊದಲು ದುಬೈಗೆ ತೆರಳುವ ನಿರೀಕ್ಷೆಯಿದೆ.
ವಿರಾಟ್ ಕೊಹ್ಲಿ ಅವರ ಕೆಲವು ಕಡತಗಳೊಂದಿಗೆ ಸ್ವಲ್ಪ ವಿಳಂಬವಾಗಿರುವುದರಿಂದ ಯುಎಸ್ಎಗೆ ಹೊರಡುವ ಭಾರತೀಯ ಆಟಗಾರರ ಮೊದಲ ಬ್ಯಾಚ್ನಿಂದ ಗೈರುಹಾಜರಾಗಲು ಕಾರಣ ಬಹಿರಂಗವಾಗಿದೆ.
ಅಧುನಿಕ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ತಡವಾಗಿ ಭಾರತ ತಂಡವನ್ನು ಸೇರಲಿದ್ದೇನೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ ಆಡಿದ 15 ಪಂದ್ಯಗಳಿಂದ 61.75ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಬ್ಯಾಟ್ ಮೂಲಕ ನೆರವಾದರು. ಆರ್ಸಿಬಿ ತಂಡ ಎಲಿಮಿನೇಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಹೊರಬಿತ್ತು.
ಬಿಸಿಸಿಐ ಅಧಿಕಾರಿಯ ಪ್ರಕಾರ, ವಿರಾಟ್ ಕೊಹ್ಲಿ ಅವರು ಮೇ 30ರ ಮುಂಜಾನೆ ನ್ಯೂಯಾರ್ಕ್ಗೆ ತೆರಳಲಿದ್ದಾರೆ. "ವಿರಾಟ್ ಕೊಹ್ಲಿ ತಡವಾಗಿ ಭಾರತ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು. ಅದಕ್ಕಾಗಿಯೇ ಬಿಸಿಸಿಐ ಅವರ ವೀಸಾ ನೇಮಕಾತಿಯನ್ನು ನಂತರದ ದಿನಾಂಕಕ್ಕೆ ಇರಿಸಿದೆ. ಅವರು ಮೇ 30ರ ಮುಂಜಾನೆ ನ್ಯೂಯಾರ್ಕ್ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಅವರ ಮನವಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಮಾತ್ರವಲ್ಲದೆ, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಡವಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವನ್ನು ಕ್ವಾಲಿಫೈಯರ್ 2ಕ್ಕೆ ಮುನ್ನಡೆಸಿರುವ ಸಂಜು ಸ್ಯಾಮ್ಸನ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಮ್ಮ ತಡವಾದ ನಿರ್ಗಮನಕ್ಕೆ "ದುಬೈನಲ್ಲಿ ವೈಯಕ್ತಿಕ ಕೆಲಸ' ಎಂದು ಕಾರಣ ತಿಳಿಸಿದ್ದಾರೆ. ಬಿಸಿಸಿಐ ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ತಡವಾಗಿ ಸೇರಲು ಅವಕಾಶ ನೀಡಿದೆ.
ಭಾರತೀಯ ಆಟಗಾರರ ಮೊದಲ ಬ್ಯಾಚ್ ಶನಿವಾರ ಯುಎಸ್ಎಗೆ ತೆರಳಿದೆ. ಇದೇ ವೇಳೆ, ಉಳಿದ ಆಟಗಾರರ ಮತ್ತೊಂದು ಬ್ಯಾಚ್ ಸೋಮವಾರ ಹೊರಡಲಿದೆ. ಭಾನುವಾರದಂದು ಐಪಿಎಲ್ 2024ರ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶಿವಂ ದುಬೆ, ಕುಲದೀಪ್ ಯಾದವ್, ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ಮುಖ್ಯ ರಾಹುಲ್ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿ ಶನಿವಾರ ರಾತ್ರಿ ಮುಂಬೈನಿಂದ ಹೊರಟರು.
ಭಾರತ ತಂಡ ತಮ್ಮ 2024ರ ಟಿ20 ವಿಶ್ವಕಪ್ ಅಭಿಯಾನವನ್ನು ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲು ಪ್ರಾರಂಭಿಸಲಿದೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ಜೂನ್ 9ರಂದು ಇದೇ ಸ್ಥಳದಲ್ಲಿ ನಿಗದಿಯಾಗಿದೆ.