ಬುಧವಾರ, ಜೂನ್ 12ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ರೋಚಕ ಎ ಗುಂಪಿನ ಹಣಾಹಣಿಯಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ಯುಎಸ್ಎ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಸೂಪರ್ 8ರ ಹಂತಕ್ಕೆ ಪ್ರವೇಶಿಸಿತು.
ಯುಎಸ್ಎ ತಂಡದ ಪ್ರತಿರೋಧವು ಗಮನಾರ್ಹವಾಗಿದ್ದರೂ, ಐಸಿಸಿಯ ಹೊಸ ಓವರ್-ರೇಟ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕ ತಂಡಕ್ಕೆ ಐದು ಪೆನಾಲ್ಟಿ ರನ್ಗಳನ್ನು ವಿಧಿಸಿದ್ದು, ಭಾರತದ ಪರವಾಗಿ ವರವಾಗಿ ಪರಿಣಮಿಸಿದ್ದು ನಿರ್ಣಾಯಕ ಕ್ಷಣವಾಗಿದೆ.

ಐಸಿಸಿಯ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಪುರುಷರ ಟಿ20 ಪಂದ್ಯದ ಪರಿಸ್ಥಿತಿಗಳಲ್ಲಿ ನಿರ್ದಿಷ್ಟವಾಗಿ 41.9.4ರ ನಿಯಮವು, ಫೀಲ್ಡಿಂಗ್ ತಂಡವು ಹಿಂದಿನ ಓವರ್ ಅನ್ನು ಪೂರ್ಣಗೊಳಿಸಿದ 60 ಸೆಕೆಂಡುಗಳ ಒಳಗೆ ಹೊಸ ಓವರ್ ಪ್ರಾರಂಭಿಸಲು ಸಿದ್ಧರಾಗಿರಬೇಕು.
ಮೈದಾನದಲ್ಲಿ ಎಲ್ಲರಿಗೂ ಗೋಚರಿಸುವ ಎಲೆಕ್ಟ್ರಾನಿಕ್ ಗಡಿಯಾರವು ಸೆಕೆಂಡುಗಳನ್ನು ಎಣಿಸುತ್ತದೆ. ಈ ನಿಧಾನಗತಿ ಓವರ್-ರೇಟ್ ನಿಯಂತ್ರಣಕ್ಕೆ ನಿಖರತೆಯ ಪದರವನ್ನು ಸೇರಿಸುತ್ತದೆ. ನಿಯಮವು ಎಚ್ಚರಿಕೆ ಮತ್ತು ದಂಡಗಳ ಅನುಕ್ರಮವನ್ನು ನಿಗದಿಪಡಿಸುತ್ತದೆ.
ಮೊದಲ ಉಲ್ಲಂಘನೆ: ಬೌಲಿಂಗ್-ಎಂಡ್ ಅಂಪೈರ್ ಫೀಲ್ಡಿಂಗ್ ತಂಡದ ನಾಯಕನಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಬ್ಯಾಟರ್ಗಳು ಮತ್ತು ನಾನ್-ಕ್ರೀಸ್ ಅಂಪೈರ್ಗೆ ಮಾಹಿತಿ ನೀಡುತ್ತಾರೆ.
ಎರಡನೇ ಉಲ್ಲಂಘನೆ: ಅದೇ ವಿಧಾನವನ್ನು ಪುನರಾವರ್ತಿಸಲಾದರೆ, ಅಂತಿಮ ಎಚ್ಚರಿಕೆ ನೀಡಲಾಗುತ್ತದೆ.
ಮೂರನೇ ಉಲ್ಲಂಘನೆ: ಬೌಲಿಂಗ್-ಎಂಡ್ ಅಂಪೈರ್ ಬ್ಯಾಟಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್ಗಳನ್ನು ನೀಡುತ್ತಾರೆ ಮತ್ತು ಎಲ್ಲಾ ಸಂಬಂಧಿತ ತಂಡಗಳಗಳಿಗೆ ತಿಳಿಸುತ್ತಾರೆ.
ಭಾರತ ತಂಡದ ಚೇಸಿಂಗ್ನ 16ನೇ ಓವರ್ನ ಆರಂಭಕ್ಕೂ ಮೊದಲು ಪ್ರಮುಖ ಕ್ಷಣಕ್ಕೆ ಸಾಕ್ಷಿಯಾಯಿತು. ಭಾರತ ತಂಡಕ್ಕೆ 30 ಎಸೆತಗಳಲ್ಲಿ 35 ರನ್ಗಳ ಅಗತ್ಯವಿದ್ದಾಗ ವಾತಾವರಣವು ರೋಮಾಂಚಕವಾಗಿತ್ತು ಮತ್ತು ಉಭಯ ತಂಡಗಳ ಅಭಿಮಾನಿಗಳಲ್ಲಿ ಉದ್ವಿಗ್ನತೆ ಹೆಚ್ಚಿತ್ತು.
ಸಂಕ್ಷಿಪ್ತ ಚರ್ಚೆಯ ನಂತರ ಅಂಪೈರ್ಗಳು ನಿಗದಿತ 60 ಸೆಕೆಂಡ್ಗಳಲ್ಲಿ ಯುಎಸ್ಎ ತಂಡ ಹೊಸ ಓವರ್ ಪ್ರಾರಂಭಿಸಲು ವಿಫಲವಾದ ಮೂರನೇ ನಿದರ್ಶನಕ್ಕಾಗಿ, ಯುಎಸ್ಎ ತಂಡದ ಹಂಗಾಮಿ ನಾಯಕ ಆರನ್ ಜೋನ್ಸ್ ಅವರನ್ನು ಕರೆದು ತಿಳಿಸಲಾಯಿತು.
ಈ ವೇಳೆ ಭಾರತ ತಂಡಕ್ಕೆ ಐದು ಪೆನಾಲ್ಟಿ ರನ್ಗಳನ್ನು ನೀಡಲಾಯಿತು. ಹೀಗಾಗಿ ಟೀಮ್ ಇಂಡಿಯಾ ಗುರಿಯನ್ನು 30 ಎಸೆತಗಳಲ್ಲಿ ಗೆಲುವಿಗೆ ಬೇಕಾದ 30 ರನ್ಗಳಿಗೆ ಇಳಿಸಲಾಯಿತು.
ಆ ಐದು ರನ್ಗಳು ಭಾರತೀಯ ಬ್ಯಾಟ್ಸ್ಮನ್ಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸಿದವು. ಉತ್ತಮ ಫಾರ್ಮ್ನಲ್ಲಿದ್ದ ಸೂರ್ಯಕುಮಾರ್ ಯಾದವ್, ಈ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡರು. ನಿರ್ಣಾಯಕ ಅರ್ಧಶತಕ ಗಳಿಸುವ ಮೂಲಕ ಭಾರತ ತಂಡಕ್ಕೆ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವಿಗೆ ಮಾರ್ಗದರ್ಶನ ನೀಡಿದರು.
ಯುಎಸ್ಎ ವಿರುದ್ಧದ ಈ ಗೆಲುವು ಭಾರತದ ಸೂಪರ್-8ರ ಅರ್ಹತೆಯನ್ನು ಖಚಿತಪಡಿಸಿತು ಮತ್ತು ಐಸಿಸಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯ ಸ್ಥಾನವನ್ನು ಬಲಪಡಿಸಿತು.
ಯುಎಸ್ಎ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತ ತಂಡ ಗೆಲುವಿನೊಂದಿಗೆ ಖಾತೆ ಆರಂಭಿಸಿತು. ಇದೇ ವೇಳೆ 2024ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಸೂಪರ್ 8ರ ಹಂತದ ಕನಸು ಜೀವಂತವಾಗಿರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ತಂಡ ಸ್ಟೀವನ್ ಟೇಲರ್ ಅವರ 24 ರನ್ ಮತ್ತು ನಿತೀಶ್ ಕುಮಾರ್ ಅವರ 27 ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು.
111 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ ಯುಎಸ್ಎ ವಿರುದ್ಧ ಹೋರಾಟ ನಡೆಸಬೇಕಾಯಿತು. ಕಡಿಮೆ ಸ್ಕೋರ್ನ ಪಂದ್ಯವಾಗಿದ್ದರೂ, ಚೇಸಿಂಗ್ನಲ್ಲಿ ಭಾರತ ತಂಡ ಯುಎಸ್ಎ ಬೌಲರ್ಗಳಿಂದ ಪ್ರತಿರೋಧ ಎದುರಿಸಿದರು.
ಅಂತಿಮವಾಗಿ ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಅರ್ಧಶತಕ ಮತ್ತು ಶಿವಂ ದುಬೆ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 18.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.