ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲು ಟೀಮ್ ಇಂಡಿಯಾ ಸಜ್ಜಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೂಪರ್ 8ರಲ್ಲಿ ಅದ್ಭುತ ಅಭಿಯಾನವನ್ನು ಹೊಂದಿದ್ದು, ಈವರೆಗೂ ಒಂದೂ ಪಂದ್ಯ ಸೋಲದೆ ಅಜೇಯವಾಗಿ ಉಳಿದಿದೆ. 2022ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮತ್ತು ಪಂದ್ಯಾವಳಿಯ ಫೈನಲ್ ಪ್ರವೇಶಿಸುವ ಗುರಿಯನ್ನು ಭಾರತ ಹೊಂದಿದೆ.

ಈ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದು ಭಾರತ ತಂಡಕ್ಕೆ ವಿಶೇಷ ಕ್ಷಣವಾಗಿದೆ. ಏಕೆಂದರೆ ತಮ್ಮ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸುವುದಲ್ಲದೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ವಿಶೇಷ ಬೀಳ್ಕೊಡುಗೆ ಉಡುಗೊರೆಯನ್ನು ನೀಡಬಹುದಾಗಿದೆ.
ಸದ್ಯ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಮುಗಿದ ನಂತರ, ರಾಹುಲ್ ದ್ರಾವಿಡ್ ತಮ್ಮ ಮುಖ್ಯ ಕೋಚ್ ಕರ್ತವ್ಯವನ್ನು ಕೊನೆಗೊಳಿಸಲು ಸಜ್ಜಾಗಿದ್ದಾರೆ.
ತನ್ನ ಕ್ರಿಕೆಟ್ನ ದಿನಗಳಲ್ಲಿ 'ದಿ ವಾಲ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಯಶಸ್ಸಿಗೆ ಅಪಾರ ಕೊಡುಗೆ ನೀಡಿದ್ದಾರೆ. ಆದಾಗ್ಯೂ, ಅವರ ಲೆಕ್ಕದಿಂದ ತಪ್ಪಿಸಿಕೊಂಡಿರುವ ಏಕೈಕ ವಿಷಯವೆಂದರೆ ಐಸಿಸಿ ಟ್ರೋಫಿ.

ಇತ್ತೀಚೆಗೆ, ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತಮ್ಮ ಕೋಚ್ಗಾಗಿ ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ 2011ರಲ್ಲಿ ಲೆಜೆಂಡ್ ಸಚಿನ್ ತೆಂಡೂಲ್ಕರ್ಗೆ ಗೆದ್ದಂತೆ ಗೆಲ್ಲಬೇಕು ಎಂದು ಹೇಳಿದ್ದಾರೆ.
"ವು 2011ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಸಚಿನ್ ತೆಂಡೂಲ್ಕರ್ ಅವರಿಗಾಗಿ ಆಡಿದ್ದೇವೆ. ಆದ್ದರಿಂದ, ಈ ಟಿ20 ವಿಶ್ವಕಪ್ ರಾಹುಲ್ ದ್ರಾವಿಡ್ ಅವರಿಗೆ ಆಗಬಹುದು. ಕನಿಷ್ಠ ತರಬೇತುದಾರನಾಗಿ ಅವರು ವಿಶ್ವಕಪ್ ಗೆಲ್ಲಲು ಮತ್ತು ವಿಶ್ವಕಪ್ ವಿಜೇತ ಎಂಬ ಬ್ಯಾಡ್ಜ್ ಪಡೆಯುತ್ತಾರೆ," ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕ್ರಿಕ್ಬಜ್ಗೆ ತಿಳಿಸಿದರು.
ಭಾರತ ತಂಡದ ಕೊನೆಯ ಸೂಪರ್ 8ರ ಪಂದ್ಯವು ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಅಲ್ಲಿ ಮಿಚೆಲ್ ಮಾರ್ಷ್ ನಾಯಕತ್ವದ ತಂಡವನ್ನು ಹೀನಾಯವಾಗಿ ಸೋಲಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ಆ ಪಂದ್ಯವು ಸಂಪೂರ್ಣವಾಗಿ ನಾಯಕ ರೋಹಿತ್ ಶರ್ಮಾ ಅವರದ್ದಾಗಿತ್ತು. ಕೇವಲ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ಗಳ ಸಮೇತ 92 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
"ಈ ವಿಶ್ವಕಪ್ನಲ್ಲಿ ಇದಕ್ಕಿಂತ ಉತ್ತಮ ಮನರಂಜನೆಯ ಆಟವನ್ನು ನಾನು ನೋಡಿಲ್ಲ. ಅವರು ಮೊದಲ ಆರು ಓವರ್ಗಳವರೆಗೆ ಕ್ರೀಸ್ನಲ್ಲಿರುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅವರು ಪವರ್ಪ್ಲೇ ನಂತರವೂ ಅಬ್ಬರದ ಬ್ಯಾಟಿಂಗ್ ಮಾಡಿದರು. ಅವರು ಏನು ಮಾಡಿದರು ಎಂಬುದನ್ನು ನೋಡಿ. ಅವರು ನಮ್ಮ ಹೃದಯವನ್ನು ಸಂತೋಷಪಡಿಸಿದರು, ನಿಮಗೆ ಇನ್ನೇನು ಬೇಕು?," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ಭಾರತ ಮತ್ತು ಇಂಗ್ಲೆಂಡ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಕೂಡ ಸೆಮೀಸ್ಗೆ ಅರ್ಹತೆ ಪಡೆದಿದ್ದವು. ಆದರೆ, ಟ್ರಿನಿಡಾಡ್ನಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿ ಫೈನಲ್ಗೇರಿದೆ.