
ಭುವಿಗೆ ಶ್ರೇಯ ನೀಡಿದ ಅರ್ಶದೀಪ್
ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಯುವ ವೇಗದ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಯಶಸ್ಸಿಗೆ ಕಾರೆಣ ತಮಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಎಂದು ಹೇಳಿದ್ದಾರೆ. ಭುವನೇಶ್ವರ್ ಕುಮಾರ್ ಜೊತೆಗೆ ಹೊಸ ಚೆಂಡು ಹಂಚಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿರುವ ಅರ್ಶದೀಪ್ ಸಿಂಗ್ ಯಶಸ್ಸಿನ ಶ್ರೇಯಸ್ಸನ್ನು ಅನುಭವಿ ಬೌಲರ್ಗೆ ನೀಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಮೂರು ಪಂದ್ಯಗಳಲ್ಲಿ ಅರ್ಶದೀಪ್ 7 ವಿಕೆಟ್ ಕಿತ್ತು ಮಿಂಚಿದ್ದಾರೆ ಎಂಬುದು ಗಮನಾರ್ಹ ಅಂಶ.

"ಬೌಲಿಂಗ್ ಜೊತೆಯಾಟ ಬ್ಯಾಟಿಂಗ್ ಪಾರ್ಟ್ನರ್ಶಿಪ್ನಷ್ಟೇ ಮುಖ್ಯ"
ನನ್ನ ಯಶಸ್ಸಿನ ಶ್ರೇಯಸ್ಸು ಭುವನೇಶ್ವರ್ ಕುಮಾರ್ಗೆ ಸಲ್ಲಬೇಕಾಗುತ್ತದೆ. ಭುವನೇಶ್ವರ್ ವಿರುದ್ಧ ಚಾನ್ಸ್ ಪಡೆದುಕೊಳ್ಳಲು ಬ್ಯಾಟರ್ಗಳು ಮುಂದಾಗುತ್ತಿಲ್ಲ. ಅದನ್ನು ಅವರು ನನ್ನ ವಿರುದ್ಧ ಪ್ರಯತ್ನಿಸುತ್ತಾರೆ. ಹೀಗಾಗಿ ನಾವು ಉತ್ತಮವಾದ ಜೊತೆಯಾಟವನ್ನು ನೀಡಲು ಸಾಧ್ಯವಾಗುತ್ತಿದೆ. ಬ್ಯಾಟಿಂಗ್ ಪಾರ್ಟ್ನರ್ಶಿಪ್ನಷ್ಟೇ ಬೌಲಿಂಗ್ ಜೊತೆಯಾಟ ಕೂಡ ಪಾತ್ರವಹಿಸುತ್ತದೆ" ಎಂದು ಅರ್ಶದೀಪ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾಟರ್ಗಳ ವಿರುದ್ಧದ ರಣತಂತ್ರದ ಗುಟ್ಟು ಬಿಚ್ಚಿದ್ದ ಸಿಂಗ್
ಇನ್ನು ಈ ಸಂದರ್ಭದಲ್ಲಿ ತಾವು ಬ್ಯಾಟರ್ಗಳ ವಿರುದ್ಧ ಯಾವ ರೀತಿಯಾಗಿ ಯೋಜನೆಗಳನ್ನು ರೂಪಿಸುತ್ತೇವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. "ನಾವು ಮೊದಲಿಗೆ ಬ್ಯಾಟರ್ಗಳ ದೌರ್ಬಲ್ಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತೇವೆ. ನಾನು ಮತ್ತು ಭುವಿ ಭಾಯ್ ಆರಂಭದಲ್ಲಿಯೇ ಸ್ವಿಂಗ್ ಮೂಲಕ ಬ್ಯಾಟರ್ಗಳಿಗೆ ಸವಾಲೊಡ್ಡುತ್ತೇವೆ. ಭುವಿ ಅವರು ಎಕನಾಮಿಕಲ್ ಆಗಿ ಬೌಲಿಂಗ್ ನಡೆಸುವ ಕಾರಣ ಬ್ಯಾಟರ್ಗಳು ಒತ್ತಡಕ್ಕೆ ಸಿಲುಕುತ್ತಾರೆ. ಆಗ ನಾವು ಆಕ್ರಮಣಕಾರಿಯಾಗಿ ದಾಳಿ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ ಬ್ಯಾಟರ್ಗಳು ಅದಾಗಲೇ ಒತ್ತಡಕ್ಕೆ ಸಿಲುಕಿರುತ್ತಾರೆ" ಎಂದು ಅರ್ಶದೀಪ್ ಸಿಂಗ್ ವಿವರಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಸೆಣೆಸಾಟಕ್ಕೆ ಭಾರತ ಸಜ್ಜು
ಇನ್ನು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಚಕ ಹೋರಾಟ ನಡೆಸಿದ ಹೊರತಾಗಿಯೂ ಸೋಲು ಅನುಭವಿಸಿದ ಬಳಿಕ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಬಾಂಗ್ಲಾದೇಶ ಎದುರಾಳಿಯಾಗಿದ್ದು ಈ ಪಂದ್ಯ ಬುಧವಾರ ಅಡಿಲೇಡ್ ಓವಲ್ನಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್


Click it and Unblock the Notifications












