ಜೂನ್ 30 ಭಾನುವಾರ, ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಂಡಿದೆ.
2007ರ ಟಿ 20 ವಿಶ್ವಕಪ್ನಲ್ಲಿ ಎಂಎಸ್ ಧೋನಿ ಭಾರತವನ್ನು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಮಾಡಿದರು. ಇದೀಗ ಮತ್ತೊಮ್ಮೆ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 2024ರ ಟಿ20 ವಿಶ್ವಕಪ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇನ್ನೊಂದೆಡೆ ರಾಹುಲ್ ದ್ರಾವಿಡ್ 2024ರ ಟಿ 20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಗುರುಗಳಿಗೆ ರೋಹಿತ್ ಶರ್ಮಾ ಪಡೆ ಟಿ20 ವಿಶ್ವಕಪ್ ಗೆಲುವಿನ ಉಡುಗೊಡೆ ನೀಡಿದ್ದಾರೆ.
ಭಾರತದ ಮಾಜಿ ಆಲ್ರೌಂಡರ್ ಮತ್ತು ಪ್ರಸಿದ್ಧ ಕಾಮೆಂಟೇಟರ್ ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ದ್ರಾವಿಡ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಭಾರತ ಅಂಡರ್-19 ತಂಡದ ಮುಖ್ಯಸ್ಥರಾಗಿದ್ದರು.
ನ್ಯೂಜಿಲೆಂಡ್ ವಿರುದ್ಧ ಹೆಡ್ ಕೋಚ್ ಆಗಿ ದ್ರಾವಿಡ್ ಮೊದಲ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಐಸಿಸಿ ಏಕದಿನ ವಿಶ್ವಕಪ್ 2023ರ ಬಳಿಕ ದ್ರಾವಿಡ್ ಅವರ ಟೀಮ್ ಇಂಡಿಯಾ ಹೆಡ್ ಕೋಚ್ ಅಧಿಕಾರವಾಧಿ ಕೊನೆಗೊಂಡಿತ್ತು.
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಈ ಸೋಲಿನ ಹೊರತಾಗಿಯೂ, ಬಿಸಿಸಿಐ ದ್ರಾವಿಡ್ ಅವರಿಗೆ ಟಿ20 ವಿಶ್ವಕಪ್ 2024ರ ಅಂತ್ಯದವರೆಗೆ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಹೆಡ್ ಕೋಚ್ ಆಗಿ ದ್ರಾವಿಡ್ ನಾಯಕತ್ವದಲ್ಲಿ ಭಾರತವು ಟಿ20, ಏಕದಿನ ಮತ್ತು ಟೆಸ್ಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದೆ.
ಟೀಮ್ ಇಂಡಿಯಾ ಆಟಗಾರರು ರಾಹುಲ್ ದ್ರಾವಿಡ್ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. 'ದಿ ವಾಲ್' ಖ್ಯಾತಿಯ ದ್ರಾವಿಡ್ ಅವರಿಗಾಗಿ ಐಸಿಸಿ ಟ್ರೋಫಿಯನ್ನು ಗೆಲ್ಲಲು ಟೀಮ್ ಇಂಡಿಯಾ ಆಟಗಾರರು ಉತ್ಸುಕರಾಗಿದ್ದರು.
ಏಕೆಂದರೆ ರಾಹುಲ್ ದ್ರಾವಿಡ್ ಆಟಗಾರನಾಗಿ ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ದ್ರಾವಿಡ್ ನಾಯಕತ್ವದಲ್ಲಿ ಭಾರತವು 2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನ ಮೊದಲ ಸುತ್ತಿನಲ್ಲೇ ಬಾಂಗ್ಲಾದೇಶ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು.
ಈ ಸೋಲಿನ ನಂತರ ರೊಚ್ಚಿಗೆದ್ದ ಕೆಲ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ಮನೆ ಮೇಲೆ ದಾಳಿ ಕೂಡ ಮಾಡಿದ್ದರು. ಇದೇ ವೇಳೆ ರಾಹುಲ್ ದ್ರಾವಿಡ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು.
ಅಷ್ಟರ ಮಟ್ಟಿಗೆ ಅಂದಿನ ಏಕದಿನ ವಿಶ್ವಕಪ್ ಸೋಲಿ ನೋವು ದ್ರಾವಿಡ್ ಅವರನ್ನು ಕಾಡಿತ್ತು. ಇದೀಗ ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ರಾಹುಲ್ ದ್ರಾವಿಡ್ ಅವರಿಗೆ ಸನ್ಮಾನ ಸಿಕ್ಕಿದೆ.
2018ರಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಪ್ರಶಸ್ತಿ ಗೆದ್ದಾಗ ದ್ರಾವಿಡ್ ಅಂಡರ್-19 ಮುಖ್ಯ ಕೋಚ್ ಆಗಿ ವಿಶ್ವಕಪ್ ಗೆದ್ದಿದ್ದರು. ಈ ಹಿಂದೆಯೇ ದ್ರಾವಿಡ್ಗೆ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದು ಕೊಡಲು ಟೀಮ್ ಇಂಡಿಯಾ ಆಟಗಾರರು ಉತ್ಸುಕರಾಗಿದ್ದರು. ಆದರೆ ಅದು ಆಗರಲಿಲ್ಲ. ಆದರೆ ಇಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗು ರಾಹುಲ್ ದ್ರಾವಿಡ್ ಅವರ ಕನಸು ನನಸಾಗಿದೆ.