ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಟೂರ್ನಿ ಈಗ ಕುತೂಹಲ ಘಟ್ಟದತ್ತ ಮುಖ ಮಾಡಿದೆ. ಈಗಾಗಲೇ ಇಂಗ್ಲೆಂಡ್ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದು, ಇನ್ನು ಉಳಿದ ಮೂರು ಸ್ಥಾನಕ್ಕಾಗಿ ತಂಡಗಳು ಕಾದಾಟ ನಡೆಸುತ್ತಿವೆ. ಭಾರತ ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನ್ನಲಾಗಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಅಹಮದಾಬಾದ್ನಲ್ಲಿ ಕಂಡ ಸೋಲು ತಂಡದ ಮನೋಬಲವನ್ನು ಕುಗ್ಗಿಸಿದೆ. ಟೀಮ್ ಇಂಡಿಯಾ ಸೆಮಿಫೈನಲ್ ಹಂತಕ್ಕೆ ಯಾವುದೇ ಒತ್ತಡವಿಲ್ಲದೆ ಪ್ರವೇಶಿಸಬೇಕಾದಲ್ಲಿ ರನ್ ರೇಟ್ ಸಹ ಉತ್ತಮವಾಗಬೇಕಾಗುತ್ತದೆ.
ಟೀಮ್ ಇಂಡಿಯಾ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳಿಂದ ಸೋಲು ಕಂಡಿತ್ತು. ಈ ಸೋಲು ನಿಶ್ಚಿತವಾಗಿ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಟೀಮ್ ಇಂಡಿಯಾದ ರನ್ ರೇಟ್ ಸಹ ಕಳಪೆಯಾಗಿದೆ. ಇನ್ನು ಜಿಂಬಾಬ್ವೆ ವಿರುದ್ಧ ವಿಂಡೀಸ್ ಸಾಧಿಸಿದ ಭರ್ಜರಿ ಗೆಲುವಿನ ಬಳಿಕ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಎಲ್ಲವೂ ಉಲ್ಟಾ ಹೊಡೆದಿದೆ. ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪಬೇಕಾದಲ್ಲಿ ಮುಂದಿನ ಎರಡೂ ಪಂದ್ಯಗಳನ್ನು ಸಹ ಉತ್ತಮ ರನ್ ರೇಟ್ನಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಭಾರತ ತನ್ನ ಮುಂದಿನ ಪಂದ್ಯವನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಿಚ್ ಸಾಮಾನ್ಯವಾಗಿ ಬ್ಯಾಟರ್ಗಳಿಗೆ ಅನುಕೂಲವಲ್ಲದ ಪಿಚ್ ಆಗಿರಲಿದೆ. ಈ ಪಿಚ್ ಮೇಲೆ ಸ್ಪಿನ್ ಬೌಲರ್ಗಳಿಗೆ ನೆರವು ನೀಡುತ್ತದೆ. ಆದರೆ ಭಾರತ ಹಾಗೂ ಜಿಂಬಾಬ್ವೆ ಪಂದ್ಯವನ್ನು ಬೇರೆ ಪಿಚ್ ಮೇಲೆ ಆಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯಕ್ಕಾಗಿ "ಹೊಸ ಪಿಚ್" ಅನ್ನು ಬಳಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರಿಂದ ಟೀಮ್ ಇಂಡಿಯಾ ಮುಖದಲ್ಲಿ ಕೊಂಚ ಸಮಾಧಾನ ಮೂಡಿದಂತೆ ಕಾಣುತ್ತದೆ. ಅಲ್ಲದೆ ಈ ಪಿಚ್ ಮೇಲೆ ಇನ್ನೂ ಯಾವುದೇ ದೇಶೀಯ ಪಂದ್ಯವನ್ನು ಆಡಲಾಗಿಲ್ಲ. ಈ ಪಿಚ್ ಮೇಲೆ ಬ್ಯಾಟ್ಗೆ ಬೌಲ್ ಉತ್ತಮವಾಗಿ ಬರುತ್ತದೆ. ಇದರಿಂದ ಬ್ಯಾಟರ್ಗಳಿಗೆ ಉತ್ತಮವಾಗಿ ಆಡಲು ಸಹಕಾರಿಯಾಗುತ್ತದೆ.

ಚೆನ್ನೈ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲರ್ಗಳಿಗೆ ನೆರವು ನೀಡುತ್ತದೆ. ಹೊಸ ಪಿಚ್ನಲ್ಲಿ ಭಾರತ ತನ್ನ ಪಂದ್ಯವನ್ನು ಆಡುವುದಿದ್ದರೆ ನಿಜಕ್ಕೂ ಒಳ್ಳೆಯ ಸುದ್ದಿಯೇ. ಆದರೆ ಭಾರತ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ತನ್ನ ರನ್ ರೇಟ್ ಸುಧಾರಿಸಿಕೊಳ್ಳುವತ್ತ ಚಿತ್ತ ನೆಡಬೇಕಾಗುತ್ತದೆ. ಟೀಮ್ ಇಂಡಿಯಾಕ್ಕೆ ಇನ್ನು ಎರಡು ಪಂದ್ಯಗಳು ಉಳಿದಿದ್ದು ಈ ಎರಡೂ ಪಂದ್ಯಗಳನ್ನು ಸಹ ಭಾರತ ಉತ್ತಮ ಅಂತರದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಸೆಮಿಫೈನಲ್ ಪ್ರವೇಶಿಸುವ ಕನಸು ನನಸಾಗುತ್ತದೆ. ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆ ಮನೆ ಮಾಡಿದೆ.