
ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರುವ ಅವಕಾಶ ಬಹುತೇಕ ಕಮರಿದಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಭಾರತ 8 ವಿಕೆಟ್ಗಳ ಅಂತರದಿಂದ ಕಳೆದುಕೊಂಡ ಕಾರಣ ಸತತ ಎರಡನೇ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡಿತ್ತಿದ್ದಾರೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಮ್ ಇಂಡಿಯಾ ಯಾವ ಕಾರಣಕ್ಕೆ ಸೋತಿತು ಎಂಬುದನ್ನು ವಿವರಿಸಿದ್ದಾರೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರಕಾರ ಟೀಮ್ ಇಂಡಿಯಾದ ಸೋಲಿಗೆ ಕಾರಣ ತಂಡದಲ್ಲಿರುವ ಮನೋಸ್ಥೈರ್ಯದ ಕೊರತೆ. ತಂಡದ ಆಟಗಾರರಲ್ಲಿ ಅತ್ಯುತ್ತಮವಾದ ಕೌಶಲ್ಯವಿದ್ದರೂ ಮಾನಸಿಕ ಸ್ಥೈರ್ಯದ ಕೊರತೆಯಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಭಾರತ ನಾಕೌಟ್ ಹಂತಗಳಲ್ಲಿ ಸೋಲು ಕಾಣಲು ಇದೇ ಕಾರಣ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗಂಭೀರ್.
"ಹೌದು, ಪ್ರತಿಭೆ ಒಂದು ಪ್ರಮುಖವಾದ ಅಂಶ. ನಿಮ್ಮ ಬಳಿ ಅತ್ಯುತ್ತಮವಾದ ಕಶಲ್ಯ ಎಲ್ಲವೂ ಇದೆ. ನೀವು ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡುತ್ತೀರಿ. ಆದರೆ ಯಾವಾಗ ಈ ರೀತಿಯ ಟೂರ್ನಮೆಂಟ್ಗಳು ಬರುತ್ತದೋ ಆಗ ನೀವು ನಿಮ್ಮ ಆ ಕೌಶಲ್ಯವನ್ನು ಸಂಪೂರ್ಣವಾಗಿ ಪ್ರದರ್ಶನ ಮಾಡಬೇಕಾಗುತ್ತದೆ" ಎಂದು ಗೌತಮ್ ಗಂಭೀರ್ ವಿವರಿಸಿದ್ದಾರೆ.
"ಈ ಪಂದ್ಯ ನಿಜಕ್ಕೂ ಕೂಡ ಕ್ವಾರ್ಟರ್ ಫೈನಲ್ ರೀತಿಯೇ ಇತ್ತು. ಆದರೆ ತಂಡದಲ್ಲಿ ಸಮಸ್ಯೆ ಇದ್ದಿದ್ದು ತಂಡದ ಮಾನಸಿಕ ಕಠಿಣತೆಯಲ್ಲಿ. ಗೆಲುವನ್ನು ಸಾಧಿಸಲೇಬೇಕಾದ ಪಂದ್ಯದಲ್ಲಿ ನೀವು ತಪ್ಪುಗಳನ್ನು ಮಾಡುವಂತಿಲ್ಲ. ದ್ವಿಪಕ್ಷೀಯ ಸರಣಿಗಳು ಭಿನ್ನವಾಗಿರುತ್ತದೆ. ಅಲ್ಲಿ ನೀವು ತಪ್ಪುಗಳನ್ನು ಮಾಡಬಹುದಾಗಿದೆ. ಆದರೆ ಈ ರೀತಿಯ ಟೂರ್ನಿಗಳಲ್ಲಿ ಅಲ್ಲ. ನನ್ನ ಪ್ರಕಾರ ತಂಡದ ಬಳಿ ಆ ಮನೋಸ್ಥೈರ್ಯ ಇಎದ ಎಂದು ಅನಿಸುತ್ತಿಲ್ಲ" ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಅವರ ಬಳಿ ಸಾಕಷ್ಟಿ ಕೌಶಲ್ಯ ಇದೆ. ನಿಜಕ್ಕೂ ಕೂಡ ಅತ್ಯಂತ ಅಪಾಯಕಾರಿ ತಂಡವಿದು. ಆದರೆ ದುರಾದೃಷ್ಟವಶಾತ್ ತಂಡ ಸೋತ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮಾತನಾಡುತ್ತೇವೆ. ಆದರೆ ಐಸಿಸಿ ಟೂರ್ನಮೆಂಟ್ನ ನಿರ್ಣಾಯಕ ಘಟ್ಟದಲ್ಲಿ ಸೋಲು ಅನುಭವಿಸುವುದು ಸಾಕಷ್ಟು ವರ್ಷಗಳಿಂದ ಟ್ರೆಂಡ್ ರೀತಿ ಆಗಿದೆ. ಅದು ಸೆಮಿಫೈನಲ್ ಹಂತವಾಗಿರಬಹುದು ಅಥವಾ ಇಂದಿನ ಪಂದ್ಯವಾಗಿರಬಹುದು. ಆದರೆ ಇಂತಾ ಪರಿಸ್ಥಿತಿಗಳಲ್ಲಿ ಯಾರಾದರೂ ಮುಂದೆ ಬಂದು ತಂಡಕ್ಕೆ ನೆರವಾಗಬೇಕಿದೆ. ಆದರೆ ಅದು ಯಾರಿಂದಲೂ ಸಾಧ್ಯವಾಗುತ್ತಿಲ್ಲ" ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸಿ ಕೇವಲ 110 ರನ್ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ ಪರವಾಗಿ ಯಾರಿಂದಲೂ ಕೂಡ ಉತ್ತಮ ಜೊತೆಯಾಟ ಬಂದಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಉತ್ತಮ ಮೊತ್ತದ ಗುರಿ ನೀಡಲು ಸಾಧ್ಯವಾಗಲೇ ಇಲ್ಲ. ಭಾರತ ನೀಡಿದ 111 ರನ್ಗಳ ಗುರಿಯನ್ನು ನ್ಯೂಜಿಲೆಂಡ್ ಪಡೆ ಕೇವಲ 2 ವಿಕೆಟ್ ಕಳೆದುಕೊಂಡು 14ನೇ ಓವರ್ನ್ಲಲಿಯೇ ಗೆದ್ದು ಬೀಗಿತು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಗೆಲುವು ಸಾಧಿಸಲು ಯಶಸ್ವಿಯಾಗಿದೆ.
ಟೀಮ್ ಇಂಡಿಯಾ ತನ್ನ ಮುಂದಿನ ಪಂದದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 3 ರಂದು ನಡೆಯಲಿದ್ದು ಅಬುಧಾಬಿಯಲ್ಲಿ ಆಯೋಜನೆಯಾಗಲಿದೆ.